RCom ಅನಿಲ್ ಅಂಬಾನಿ ಇತರ ನಾಲ್ವರ ರಾಜೀನಾಮೆ ತಿರಸ್ಕರಿಸಿದ ಸಾಲಗಾರರು
ಅಧ್ಯಕ್ಷ ಅನಿಲ್ ಅಂಬಾನಿ ಹಾಗೂ ಇತರ ನಾಲ್ವರು ನಿರ್ದೇಶಕರು ನೀಡಿದ್ದ ರಾಜೀನಾಮೆಯನ್ನು ಸಾಲಗಾರರು ತಿರಸ್ಕರಿಸಿದ್ದಾರೆ ಹಾಗೂ ಸದ್ಯಕ್ಕೆ ನಡೆಯುತ್ತಿರುವ ಕಾರ್ಪೊರೇಟ್ ಇನ್ ಸಾಲ್ವೆನ್ಸಿ ಪರಿಹಾರ ಪ್ರಕ್ರಿಯೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್ ಭಾನುವಾರ ತಿಳಿಸಿದೆ.
ಅನಿಲ್ ಅಂಬಾನಿ, ರೈನಾ ಕರಣಿ, ಛಾಯಾ ವಿರಾಣಿ, ಮಂಜರಿ ಕಕ್ಕರ್ ಹಾಗೂ ಸುರೇಶ್ ರಂಗಾಚಾರ್ ಈ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನವೆಂಬರ್ ಇಪ್ಪತ್ತನೇ ತಾರೀಕು ಸಾಲಗಾರರ ಸಮಿತಿಯ ಭೇಟಿ ನಡೆದು, ಚರ್ಚಿಸಿದ್ದಾಗಿ ಆರ್ ಕಾಮ್ ನಿಂದ ಬಿಎಸ್ ಇಗೆ ಮಾಹಿತಿ ನೀಡಲಾಗಿದೆ.
ರಿಲಯನ್ಸ್ ಕಮ್ಯುನಿಕೇಶನ್ಸ್ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ ಅನಿಲ್ ಅಂಬಾನಿ
ಸಮಿತಿಯು ಒಮ್ಮತದಿಂದ ರಾಜೀನಾಮೆಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾಗಿ ತಿಳಿಸಲಾಗಿದೆ. ಜತೆಗೆ ರಾಜೀನಾಮೆ ತಿರಸ್ಕೃತವಾದ ಬಗ್ಗೆ ನಿರ್ದೇಶಕರಿಗೆ ಮಾಹಿತಿ ರವಾನಿಸಲಾಗಿದೆ. ಜತೆಗೆ ಆರ್ ಕಾಮ್ ನಿರ್ದೇಶಕರಾಗಿ ಮುಂದುವರಿದು, ಕಾರ್ಪೊರೇಟ್ ಇನ್ ಸಾಲ್ವೆನ್ಸಿ ಪರಿಹಾರ ಪ್ರಕ್ರಿಯೆಯಲ್ಲಿ ಎಲ್ಲ ರೀತಿಯ ಸಹಕಾರ ನೀಡುವಂತೆ ಕೋರಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
2019ರ ಸೆಪ್ಟೆಂಬರ್ ಗೆ ಆರ್ ಕಾಮ್ ನಿಂದ 30,142 ಕೋಟಿ ರುಪಾಯಿ ಒಟ್ಟು ಸಾಲವನ್ನು ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ರೂಲಿಂಗ್ ಪ್ರಕಾರ, ನ್ಯಾಯಬದ್ಧವಾದ ಬಾಕಿ ಏನೆಲ್ಲ ಪಾವತಿಸಬೇಕೋ ಅವೆಲ್ಲಕ್ಕೂ ವ್ಯವಸ್ಥೆ ಮಾಡಲಾಗಿದೆ. ಜುಲೈ- ಸೆಪ್ಟೆಂಬರ್ 2019ರ ಅವಧಿಗೆ ಆರ್ ಕಾಮ್ ಕಂಪೆನಿಯು 28,314 ಕೋಟಿ ರುಪಾಯಿಯನ್ನು ಮೀಸಲಿಟ್ಟಿದೆ.