ಸುಪ್ರೀಂಕೋರ್ಟ್ ಶನಿವಾರ ಅಯೋಧ್ಯೆ ತೀರ್ಪು ನೀಡುವುದರ ಮೂಲಕ ಒಂದು ಶತಮಾನದಷ್ಟು ಹಳೆಯದಾದ ವಿವಾದವನ್ನು ಕೊನೆಗೊಳಿಸಿತು. ಈ ತೀರ್ಪು ಭಾರತದ ಮಾರುಕಟ್ಟೆ ಮತ್ತು ಆರ್ಥಿಕತೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಮತ್ತು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಅಯೋಧ್ಯೆ ತೀರ್ಪು ದೇಶದ ರಾಜಕೀಯ ಮತ್ತು ನೀತಿಯ ಮೇಲಿನ ಪ್ರಮುಖ ಅನಿಶ್ಚಿತತೆಯನ್ನು ತೆಗೆದುಹಾಕಿದೆ. ಇದು ಭಾರತೀಯ ಆರ್ಥಿಕತೆಯ ಬಗ್ಗೆ ಜಾಗತಿಕ ಹೂಡಿಕೆದಾರರ ವಿಶ್ವಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
9 ವರ್ಷಗಳ ಬಳಿಕ (2010) ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಜಾರಿಯೋಗ್ಯವಲ್ಲ ಎಂದು ಸುಪ್ರೀಂಕೋರ್ಟ್ ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿತು. ವಿವಾದಿತ 2.77 ಎಕರೆ ನಿವೇಶನವು ಸಂಪೂರ್ಣವಾಗಿ ರಾಮಲಲ್ಲಾಗೆ ಸೇರಿದ್ದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ಸರ್ವಾನುಮತದ ತೀರ್ಪು ನೀಡಿತು. ಈ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವೇದಿಕೆ ಸಿದ್ಧಗೊಂಡಿದೆ.

ತೀರ್ಪಿನಲ್ಲಿ ಸಾಮರಸ್ಯದ ಕುರಿತು ಪ್ರಸ್ತಾಪ ಆಗಿದೆ. ವಿವಿಧ ಧರ್ಮಗಳ ನಂಬಿಕೆಯ ನಡುವೆ ತಾರತಮ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಎಲ್ಲ ರೀತಿಯ ನಂಬಿಕೆ, ಪೂಜೆ ಮತ್ತು ಪ್ರಾರ್ಥನೆಗಳೆಲ್ಲಾ ಸಮಾನ ಎಂದು ನ್ಯಾಯಪೀಠ ಹೇಳಿದೆ.
''ಅಯೋಧ್ಯೆ ತೀರ್ಪು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದ್ದು, ಮಾರುಕಟ್ಟೆ ಖಂಡಿತವಾಗಿಯೂ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲಿದೆ. ಕಾರ್ಯನಿರ್ವಹಣೆಗೆ ತೆಗೆದುಕೊಳ್ಳಲಾಗುವ ಯಾವುದೇ ಕ್ರಮವು ನಮ್ಮ ದೇಶದ ಮೇಲೆ ಜಾಗತಿಕ ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸುತ್ತದೆ'' ಎಂದು K.R Choksey Investment Managers ನ ಎಂ.ಡಿ ಡೇವನ್ ಚೋಕ್ಸೆ ಹೇಳಿದ್ದಾರೆ.
''ನಮ್ಮ ಆರ್ಥಿಕತೆಯಲ್ಲಿ ಉತ್ತರ ಪ್ರದೇಶದ ಪಾತ್ರ ಬಹಳ ದೊಡ್ಡದು. ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು, ಆ ರಾಜ್ಯದಿಂದ ಮಾತ್ರ 1 ಟ್ರಿಲಿಯನ್ ಡಾಲರ್ ಕೊಡುಗೆ ಪಡೆಯಲು ಸಾಧ್ಯ'' ಎಂದು ಮುಂಬೈ ಮೂಲದ ಹೂಡಿಕೆದಾರ ವಿಜಯ್ ಕೆಡಿಯಾ ಹೇಳಿದ್ದಾರೆ.
ಜೊತೆಗೆ ದೇವಾಲಯ ಮತ್ತು ಮಸೀದಿ ಸಿದ್ಧವಾದ ಬಳಿಕ ಸುಮಾರು 50 ಲಕ್ಷ ಜನರು ಅಯೋಧ್ಯೆಗೆ ಭೇಟಿ ನೀಡಬಹುದು. ಅಲ್ಲದೆ ಒಮ್ಮೆ ಅಲ್ಲಿನ ಪರಿಸರ ಶಾಂತಿಯುತವಾದ ಬಳಿಕ ಅದು ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದಿದ್ದಾರೆ.


Click it and Unblock the Notifications