ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ವಿಮರ್ಶೆ ಮಾಡಿದರೆ ಆ ನಂತರ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ಭಾರತದ ಉದ್ಯಮ ವಲಯದಲ್ಲಿ ಆತಂಕ ಇದೆ ಎಂದು ಶತಕೋಟ್ಯಧಿಪತಿ- ಉದ್ಯಮಿ ರಾಹುಲ್ ಬಜಾಜ್ ಶನಿವಾರ ಹೇಳಿದ್ದಾರೆ. ಈ ರೀತಿ ಕಾರ್ಪೊರೇಟ್ ವಲಯದ ಪ್ರಮುಖರೊಬ್ಬರು ಹೀಗೆ ಸರ್ಕಾರದ ಬಗ್ಗೆ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ವಿರಳ.
"ನಮ್ಮ ಕೈಗಾರಿಕಾ ವಲಯದ ಯಾವುದೇ ಸ್ನೇಹಿತರು ಈ ಬಗ್ಗೆ ಮಾತನಾಡಲ್ಲ. ಆದರೆ ನಾನು ಬಹಿರಂಗವಾಗಿ ಹೇಳುತ್ತೇನೆ" ಎಂದು ರಾಹುಲ್ ಬಜಾಜ್ ಮುಂಬೈನಲ್ಲಿ ಹೇಳಿದ್ದು, ಈ ಸಂದರ್ಭದಲ್ಲಿ ಪ್ರೇಕ್ಷಕ ವರ್ಗದಲ್ಲಿ ಕೇಂದ್ರ ಗೃಹ ಸಚಿವರೂ- ಪ್ರಧಾನಿ ಮೋದಿ ಪರಮಾಪ್ತರೂ ಆದ ಅಮಿತ್ ಶಾ ಹಾಜರಿದ್ದರು.
"ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ಆದರೆ ಅದರ ಹೊರತಾಗಿಯೂ ನಾವು ಬಹಿರಂಗವಾಗಿ ನಿಮ್ಮನ್ನು ವಿಮರ್ಶೆ ಮಾಡಿದರೆ ಅದನ್ನು ಮೆಚ್ಚಿಕೊಳ್ಳಬಹುದು ಎಂಬ ವಿಶ್ವಾಸ ನಮಗಿಲ್ಲ" ಎಂದು ಬಜಾಜ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಮಾತನಾಡುತ್ತಾ, ಕೈಗಾರಿಕೋದ್ಯಮಿಗಳಿಂದ ನೀತಿ ನಿರೂಪಕರ ತನಕ ಮತ್ತು ಬ್ಯಾಂಕರ್ಸ್ ಗಳಿಗೆ ಕೂಡ ಭಯ ಮತ್ತು ಅಪನಂಬಿಕೆ ಕಾಡುತ್ತಿದೆ ಎಂದು ಹೇಳಿದ್ದರು.

ಎಂಬತ್ತೊಂದು ವರ್ಷದ ರಾಹುಲ್ ಬಜಾಜ್ ಅವರು ಬಜಾಜ್ ಆಟೋದ ಅಧ್ಯಕ್ಷರು. ರಾಹುಲ್ ಅವರ ತಾತ ಜಮ್ನಾಲಾಲ್ ಬಜಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹಾತ್ಮ ಗಾಂಧಿ ಆಪ್ತರಾಗಿದ್ದರು.
ನೀವು ಈ ಪ್ರಶ್ನೆ ಕೇಳಿದ ನಂತರ ಯಾರಾದರೂ ಹೆದರುತ್ತಾರೆ ಎಂಬ ಮಾತನ್ನು ಜನರು ನಂಬುತ್ತಾರೆ ಎಂದು ನನಗೆ ಅನಿಸುವುದಿಲ್ಲ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮಿತ್ ಶಾ ಉತ್ತರ ನೀಡಿದ್ದಾರೆ. ಸರ್ಕಾರವು ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ವಿರೋಧ ಪಕ್ಷವನ್ನೂ ನಾವು ಬೆದರಿಸುತ್ತಿಲ್ಲ ಎಂದಿದ್ದಾರೆ.


Click it and Unblock the Notifications