ಕೆನರಾ ಬ್ಯಾಂಕಿಗೆ 428.50 ಕೋಟಿ ರು ವಂಚನೆ, ಸಿಬಿಐನಿಂದ ತನಿಖೆ
ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಕೆನರಾ ಬ್ಯಾಂಕಿಗೆ 428.50 ಕೋಟಿ ರು ವಂಚನೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಎಲ್ ಗ್ರೂಪ್ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಕ್ರೆಡಿಟ್ ರೀಪೇಮೆಂಟ್ಗೆ ಸಂಬಂಧಿಸಿದಂತೆ ಡೀಫಾಲ್ಟ್ ಹಂತಕ್ಕೆ ಪಿಎಸ್ಎಲ್ ಗ್ರೂಪ್ ತಲುಪಿದೆ ಎಂದು ಸಿಬಿಐ ತಿಳಿಸಿದೆ.
ಮುಂಬೈ ಮತ್ತು ಗುಜರಾತ್ನ ಕಚ್ನಲ್ಲಿ ಏಳು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಸಿಬಿಐ ಶೋಧ ನಡೆಸಿದ್ದು, ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಂಡಿದೆ. 428.50 ಕೋಟಿ ರು ಹಗರಣಕ್ಕೆ ಸಂಬಂಧಿಸಿದಂತೆ ದಾಳಿಯ ನಂತರ ಪಿಎಸ್ಎಲ್ ಗ್ರೂಪ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಂಪನಿಯ ಹೊರತಾಗಿ, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಬಿಐ ತನ್ನ ನಿರ್ದೇಶಕರನ್ನು ಹೆಸರಿಸಿದೆ. ನಿರ್ದೇಶಕರಾದ ಅಶೋಕ್ ಯೋಗೇಂದರ್ ಪುಂಜ್, ರಾಜೇಂದರ್ ಕುಮಾರ್ ಬಹ್ರಿ, ಚಿತ್ರಂಜನ್ ಕುಮಾರ್, ಜಗದೀಶ್ಚಂದ್ರ ಗೋಯೆಲ್ ಮತ್ತು ಅಲೋಕ್ ಯೋಗೇಂದರ್ ಪುಂಜ್ ಅವರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.
ಪಿಎಸ್ಎಲ್ ಗ್ರೂಪ್ ವಿರುದ್ಧ ಕೆನರಾ ಬ್ಯಾಂಕ್ ನೀಡಿರುವ ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಲಾಗಿದೆ. ಬ್ಯಾಂಕ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾದ ನಂತರ ಸಿಬಿಐ ತನಿಖೆಯನ್ನು ವಹಿಸಿಕೊಂಡಿದೆ.
ಬಡ್ಡಿದರ ಏರಿಸಿದ ಕೆನರಾ ಬ್ಯಾಂಕ್: ಇಎಂಐ ಕಥೆ ಏನು?
2016-19ರ ಅವಧಿಯಲ್ಲಿ ಕೆನರಾ ಬ್ಯಾಂಕ್ಗೆ ವಂಚಿಸಲು ಪಿಎಸ್ಎಲ್ ನಿರ್ದೇಶಕರು ಮತ್ತು ಗುಂಪು ಸಂಚು ರೂಪಿಸಿದೆ ಎಂದು ಬ್ಯಾಂಕ್ ಆರೋಪಿಸಿದೆ ಮತ್ತು ವಿವಿಧ ಸಾಲ ಸೌಲಭ್ಯಗಳ ಮಂಜೂರಾತಿಗೆ ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಖಾತೆ ಪುಸ್ತಕಗಳನ್ನು ತಪ್ಪಾಗಿ ತೋರಿಸಿದ್ದಾರೆ, ಬ್ಯಾಂಕ್ನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅದರ ಸಾಲಗಾರರಿಂದ ಕರಾರುಗಳನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಬ್ಯಾಂಕ್ನಿಂದ ವಿವಿಧ ಯೋಜನೆಗಳಿಗೆ ಪಡೆದ ಸಾಲದ ಮೊತ್ತವನ್ನು ಇತರ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಕೆನರಾ ಬ್ಯಾಂಕ್ಗೆ ₹428.50 ಕೋಟಿ (ಅಂದಾಜು) ನಷ್ಟ ಉಂಟಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.