ಯೆಸ್ ಬ್ಯಾಂಕ್ ಪ್ರಕರಣ: ಮೊದಲ ಚಾರ್ಜ್ಶೀಟ್ ದಾಖಲಿಸಿದ ಸಿಬಿಐ
ಮುಂಬೈ, ಜೂನ್ 25: ಯೆಸ್ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಹಗರಣದ ಕುರಿತು ಗುರುವಾರ ಸಿಬಿಐ ತನ್ನ ಮೊದಲ ಚಾರ್ಜ್ಶೀಟ್ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಎಂಟು ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್ಶೀಟ್ ದಾಖಲಿಸಿದೆ.
ಅಕ್ರಮ ವಿದೇಶಿ ಬ್ಯಾಂಕ್ ಖಾತೆ: ಉದ್ಯಮಿಗೆ ಇಡಿ ಶೋಕಾಸ್ ನೋಟಿಸ್
ಇತರ ಆರೋಪಿಗಳಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮತ್ತು ಪ್ರವರ್ತಕರಾದ ಕಪಿಲ್ ವಾಧವನ್, ಧೀರಜ್ ವಾಧವನ್ ಸೇರಿದ್ದಾರೆ ಎಂದು ಸಿಬಿಐ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
100 ಪುಟಗಳ ಚಾರ್ಜ್ಶೀಟ್
100 ಪುಟಗಳ ಚಾರ್ಜ್ಶೀಟ್ನಲ್ಲಿ ಎಂಟು ಜನರ ವಿರುದ್ಧದ ಆರೋಪಗಳು ಮೋಸ, ವಂಚನೆ, ಪಿತೂರಿ, ಭ್ರಷ್ಟಾಚಾರ ಮತ್ತು ಸಾಲ ನೀಡುವ ಮಾನದಂಡಗಳ ಉಲ್ಲಂಘನೆಯನ್ನು ಒಳಗೊಂಡಿದೆ ಎಂದು ಸಿಬಿಐ ತಿಳಿಸಿದೆ.
ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ
ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರು ಕಪಿಲ್ ಮತ್ತು ಧೀರಜ್ ವಾಧವನ್ ಅವರೊಂದಿಗೆ ಡಿಎಚ್ಎಫ್ಎಲ್ಗೆ ಹೆಚ್ಚಿನ ಸಾಲವನ್ನು ನೀಡಿದ್ದಕ್ಕಾಗಿ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ವೈಯಕ್ತಿಕ ಹಿತಾಸಕ್ತಿಗಾಗಿ ಬ್ಯಾಂಕ್ ಹೆಚ್ಚಿನ ಮೌಲ್ಯದ ಸಾಲಗಳನ್ನು ವಿಸ್ತರಿಸಿದೆ ಎಂದು ಆರೋಪಿಸಲಾಗಿದೆ.
ಮಾರ್ಚ್ 7 ರಂದು ಪ್ರಕರಣ
ಹಗರಣದ ಕುರಿತಂತೆ ಸಿಬಿಐ ಮಾರ್ಚ್ 7 ರಂದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿತ್ತು. 2018 ರ ಏಪ್ರಿಲ್ ಮತ್ತು ಜೂನ್ ನಡುವೆ ಯೆಸ್ ಬ್ಯಾಂಕ್ ಡಿಎಚ್ಎಫ್ಎಲ್ನ ಅಲ್ಪಾವಧಿಯ ಡಿಬೆಂಚರ್ಗಳಲ್ಲಿ 3,700 ಕೋಟಿ ರುಪಾಯಿ ಹೂಡಿಕೆ ಮಾಡಿದೆ ಎಂದು ಹೇಳಿದೆ. ಇದಕ್ಕೆ ಪ್ರತಿಯಾಗಿ, ವಾಧವಾನ್, ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಡೊಯಿಟ್ ಅರ್ಬನ್ ವೆಂಚರ್ಸ್ ಲಿಮಿಟೆಡ್ಗೆ ಸಾಲ ರೂಪದಲ್ಲಿ 600 ಕೋಟಿ ರುಪಾಯಿ ಕಿಕ್ಬ್ಯಾಕ್ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ.
5,050 ಕೋಟಿ ರುಪಾಯಿಯ ಹಗರಣ
ಮಾರ್ಚ್ 9 ರಂದು ರಾಣಾ ಕಪೂರ್ ಅವರನ್ನು ಸಿಬಿಐ ಬಂಧಿಸಿತ್ತು. ಏಪ್ರಿಲ್ನಲ್ಲಿ ಕಪಿಲ್ ವಾಧವನ್, ಧೀರಜ್ ವಾಧವನ್ ಅವರನ್ನು ಸಿಬಿಐ ಏಪ್ರಿಲ್ನಲ್ಲಿ ಬಂಧಿಸಿತ್ತು. ಈಗಾಗಲೇ ಪ್ರಕರಣದ ಮನಿ ಲಾಂಡರಿಂಗ್ ಕುರಿತಂತೆ ಇಡಿ ತನಿಖೆ ನಡೆಸಿ ಮೇ 6 ರಂದು ಚಾರ್ಜ್ಶೀಟ್ ಸಲ್ಲಿಸಿದೆ. ಒಟ್ಟಾರೆ ಯೆಸ್ ಬ್ಯಾಂಕ್ನಲ್ಲಿ 5,050 ಕೋಟಿ ರುಪಾಯಿಯ ಹಗರಣ ನಡೆದಿದೆ ಎಂದು ಸಿಬಿಐ ಹೇಳಿದೆ.