ಕೇಂದ್ರದಿಂದ ರಾಜ್ಯಗಳಿಗೆ 1.51 ಲಕ್ಷ ಕೋಟಿ GST ಪರಿಹಾರ ಬಾಕಿ: ಕರ್ನಾಟಕದ್ದು 14 ಸಾವಿರ ಕೋಟಿ
ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಏಪ್ರಿಲ್ ನಿಂದ ಆಗಸ್ಟ್ ಮಧ್ಯೆ ಜಿಎಸ್ ಟಿ ಸಂಗ್ರಹದಲ್ಲಿ ಇಳಿಕೆ ಆಗಿದೆ. ರಾಜ್ಯಗಳಿಗೆ ಪಾವತಿ ಮಾಡಬೇಕಿರುವ ಜಿಎಸ್ ಟಿ ಪರಿಹಾರ ಮೊತ್ತ 1.51 ಲಕ್ಷ ಕೋಟಿ ಬಾಕಿ ಉಳಿದಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಸೋಮವಾರ ಲೋಕಸಭೆಯಲ್ಲಿ ಹೇಳಿದರು.
ಜಿಎಸ್ ಟಿ ಸಮಿತಿಯ 41ನೇ ಸಭೆ ಪ್ರಮುಖಾಂಶಗಳು: ರಾಜ್ಯಗಳಿಗೆ ಎರಡು ಆಯ್ಕೆ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಕ್ಕೆ 2020- 21ರ ಸಾಲಿಗೆ ಪ್ರಾವಿಷನಲ್ ಆಗಿ ಬಾಕಿ ಇರುವ ಮೊತ್ತದ ಪೈಕಿ ಅತಿ ಹೆಚ್ಚು ಉಳಿಸಿಕೊಂಡಿರುವುದು ಮಹಾರಾಷ್ಟ್ರಕ್ಕೆ. 22,485 ಕೋಟಿ ರುಪಾಯಿಯನ್ನು ಪಾವತಿ ಮಾಡಬೇಕಿದೆ. ಆ ನಂತರ ಕರ್ನಾಟಕ 13,763 ಕೋಟಿ, ಉತ್ತರಪ್ರದೇಶ 11,742 ಕೋಟಿ, ಗುಜರಾತ್ 11,563 ಕೋಟಿ, ತಮಿಳು ನಾಡಿಗೆ 11,269 ಕೋಟಿಯನ್ನು ಕೊಡಬೇಕಿದೆ.
ಬಾಕಿ ನೀಡಬೇಕಿರುವ ಒಟ್ಟು ಮೊತ್ತ 1,51,365 ಕೋಟಿ
ಪಶ್ಚಿಮ ಬಂಗಾಲಕ್ಕೆ 7750 ಕೋಟಿ, ಕೇರಳ 7077 ಕೋಟಿ, ಪಂಜಾಬ್ 6959 ಕೋಟಿ, ದೆಹಲಿ 6931 ಕೋಟಿ, ರಾಜಸ್ಥಾನ 6312 ಕೋಟಿ, ತೆಲಂಗಾಣ 5424 ಕೋಟಿ ಮತ್ತು ಛತ್ತೀಸ್ ಗಢಕ್ಕೆ 2827 ಕೋಟಿ ರುಪಾಯಿಯನ್ನು ಪಾವತಿಸಬೇಕಿದೆ. ಮೂವತ್ತೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಕೆ 2020- 21ನೇ ಸಾಲಿನಲ್ಲಿ ನೀಡಬೇಕಿರುವ ಒಟ್ಟು ಮೊತ್ತ 1,51,365 ಕೋಟಿ ರುಪಾಯಿ ಎಂದು ಠಾಕೂರ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ರಾಜ್ಯಗಳಿಗೆ 2.35 ಲಕ್ಷ ಕೋಟಿ ಜಿಎಸ್ ಟಿ ಆದಾಯ ಕೊರತೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ 2.35 ಲಕ್ಷ ಕೋಟಿ ರುಪಾಯಿ ಜಿಎಸ್ ಟಿ ಆದಾಯ ಕೊರತೆ ಬರಬಹುದು. ಕೇಂದ್ರ ಲೆಕ್ಕ ಹಾಕಿರುವಂತೆ ಅದರಲ್ಲಿ ಜಿಎಸ್ ಟಿ ಜಾರಿಯಿಂದ ಆಗಬಹುದಾದ ನಷ್ಟ 97 ಸಾವಿರ ಕೋಟಿಯಾದರೆ, ಕೊರೊನಾ ಪರಿಣಾಮವಾಗಿ 1.38 ಲಕ್ಷ ಕೋಟಿ ಆದಾಯ ನಷ್ಟ ಆಗಲಿದೆ. ಕೇಂದ್ರ ಬಜೆಟ್ ಅಂದಾಜು ಮಾಡಿದ್ದ ಪ್ರಕಾರ, 2020- 21ನೇ ಸಾಲಿಗೆ ಜಿಎಸ್ ಟಿ ಮೊತ್ತ 6,90,500 ಆಗಬಹುದು ಎಂದುಕೊಳ್ಳಲಾಗಿತ್ತು. ಆಗಸ್ಟ್ ಕೊನೆ ತನಕ 1,81,050 ಕೋಟಿ ರು. ಸಂಗ್ರಹವಾಗಿದೆ.
ಲಾಕ್ ಡೌನ್ ಸೇರಿದಂತೆ ಮತ್ತಿತರ ಕಾರಣಗಳು
"ತೆರಿಗೆ ಸಂಗ್ರಹದಲ್ಲಿ ಇಳಿಕೆ ಆಗಿರುವುದಕ್ಕೆ ಮಾರ್ಚ್ ನಲ್ಲಿ ಜಾರಿಯಾದ ಲಾಕ್ ಡೌನ್ ಕೂಡ ಕಾರಣ. ಸೀಮಿತ ಆರ್ಥಿಕ ಚಟುವಟಿಕೆ, ಜಿಎಸ್ ಟಿ ರಿಟರ್ನ್ ಫೈಲಿಂಗ್ ಗೆ ಯಾವುದೇ ಬಡ್ಡಿ ವಿಧಿಸದೆ ಕಾಲಾವಧಿ ವಿಸ್ತರಣೆ ಮಾಡಿದ್ದು, ಯಾವುದೇ ವಿಳಂಬ ಶುಲ್ಕ ಅಥವಾ ದಂಡ ಮುಂತಾದವು ವಿಧಿಸದೇ ಇದ್ದದ್ದು ಸಹ ಕಾರಣ" ಎಂದು ಠಾಕೂರ್ ಹೇಳಿದ್ದಾರೆ.