ಭಾರತಕ್ಕೂ ಕಾಡಲಿದ್ಯಾ ಕಲ್ಲಿದ್ದಲು ಕೊರತೆ: ಚೀನಾ ಬಳಿಕ ದೇಶಕ್ಕೆ ಎಚ್ಚರಿಕೆ ಕರೆಗಂಟೆ!
ವಿಶ್ವದಾದ್ಯಂತ ಈಗೇನಿದ್ರೂ ಕೊರೊನಾಗಿಂತ ಹೆಚ್ಚಾಗಿ ಕಲ್ಲಿದ್ದಲಿನ ಸಮಸ್ಯೆ ದೊಡ್ಡ ಮಟ್ಟಿಗೆ ಕಾಡತೊಡಗಿದೆ. ಕಳೆದ ಒಂದೂವರೆ ವರ್ಷ ಜಾಗತಿಕವಾಗಿ ಕೋವಿಡ್-19 ಸಾಂಕ್ರಾಮಿಕ ಆರ್ಥಿಕತೆಗೆ ಸಂಚಕಾರ ತಂದೊಡ್ಡಿದ್ರೆ, ಇದೀಗ ಕಲ್ಲಿದ್ದಲು ಕೊರತೆ, ವಿದ್ಯುತ್ ಪೂರೈಕೆಯನ್ನೇ ಅಲುಗಾಡತೊಡಗಿಸುತ್ತಿದೆ.
ಏಷ್ಯಾದ ಅತಿದೊಡ್ಡ ಆರ್ಥಿಕತೆಯಾದ ಚೀನಾದಲ್ಲಿ ಈಗಾಗಲೇ ಕಲ್ಲಿದ್ದಲಿನ ಕೊರತೆ ಬಹುದೊಡ್ಡ ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ. ಆದ್ರೆ ಇದು ಕೇವಲ ಚೀನಾಕಷ್ಟೇ ಸೀಮಿತವಾಗಿಲ್ಲ ಅನ್ನೋದು ಮೇಲ್ನೋಟಕ್ಕೆ ಸಾಭೀತಾಗಿದೆ. ಏಕೆಂದರೆ ಭಾರತವು ಕೂಡ ವಿದ್ಯುತ್ ಸಮಸ್ಯೆಯ ಬಿಕ್ಕಟ್ಟಿನ ಅಂಚಿಗೆ ಬಂದು ತಲುಪಿದೆ.
ಕಲ್ಲಿದ್ದಲು ದಾಸ್ತಾನು ಮಟ್ಟ ಇಳಿಕೆ
ಭಾರತದ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲಿನ ಮೂಲಕ ಉತ್ಪಾದನೆಯು ಶೇಕಡಾ 70ರಷ್ಟಿದೆ. ಹೀಗಿರುವಾರ ಭಾರತದಲ್ಲಿ ಹೆಚ್ಚಿನ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನುಗಳ ಮಟ್ಟವನ್ನು ಕಡಿಮೆ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಪೂರೈಕೆ ಕೂಡ ಕಡಿಮೆಯಾಗಿದ್ದು, ವಿದ್ಯುತ್ ಬಿಕ್ಕಟ್ಟಿನ ಮುನ್ಸೂಚನೆ ಕೂಡ ಎದುರಿಗಿದೆ.
''ಸಂಭಾವ್ಯ ವಿದ್ಯುತ್ ಬಿಕ್ಕಟ್ಟು ಭಾರತದ ಆರ್ಥಿಕ ಚೇತರಿಕೆಯ ಮೇಲೆ ತಕ್ಷಣದ ಪರಿಣಾಮವನ್ನು ಬೀರಬಹುದು, ಇದು ಸೇವೆಗಳ ಬದಲಾಗಿ ಕೈಗಾರಿಕಾ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರಬಹುದು ''ಎಂದು ಸೊಸೈಟ್ ಜನರಲ್ನ ಭಾರತದ ಅರ್ಥಶಾಸ್ತ್ರಜ್ಞ ಕುನಾಲ್ ಕುಂಡು ಹೇಳಿದ್ದಾರೆ.
ಕೇವಲ 8 ದಿನಗಳಷ್ಟು ಕಲ್ಲಿದ್ದಲು ಬಾಕಿ ಇದೆ
ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಅಕ್ಟೋಬರ್ 6ರ ಡೇಟಾ ಪ್ರಕಾರ, ಶೇಕಡಾ 80ರಷ್ಟು ಭಾರತದ 135 ಕಲ್ಲಿದ್ದಲು-ಚಾಲಿತ ಸ್ಥಾವರಗಳಲ್ಲಿ ಕೇವಲ 8 ದಿನಗಳಿಗಿಂತ ಕಡಿಮೆ ಪೂರೈಕೆಯನ್ನು ಉಳಿದಿವೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ಎರಡು ದಿನಗಳ ಅಥವಾ ಕಡಿಮೆ ಮೌಲ್ಯದ ಸ್ಟಾಕ್ಗಳನ್ನು ಹೊಂದಿವೆ.
ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ, ವಿದ್ಯುತ್ ಸ್ಥಾವರಗಳಲ್ಲಿದ್ದ ಸರಾಸರಿ ಕಲ್ಲಿದ್ದಲು ದಾಸ್ತಾನು ಸುಮಾರು 18 ದಿನಗಳ ಪೂರೈಕೆಯಾಗಿದೆ ಎಂದು ಎಸ್ & ಪಿ ಗ್ಲೋಬಲ್ ನ ಅಂಗಸಂಸ್ಥೆಯಾದ ರೇಟಿಂಗ್ಸ್ ಸಂಸ್ಥೆಯ CRISIL ನ ಸಂಶೋಧನಾ ನಿರ್ದೇಶಕ ಹೇತಲ್ ಗಾಂಧಿ ಹೇಳಿದ್ದಾರೆ.
ಪೂರೈಕೆ ಮತ್ತು ಆಮದು ಸಮಸ್ಯೆ
ಕಲ್ಲಿದ್ದಲು ಪೂರೈಕೆ ಸಮಸ್ಯೆ ಜೊತೆಗೆ ಆಮದು ಕುಸಿಯುವುದು ಪ್ರಸ್ತುತ ಕಲ್ಲಿದ್ದಲು ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ವಿಶ್ಲೇಷಕರು ಸಿಎನ್ಬಿಸಿಗೆ ತಿಳಿಸಿದ್ದಾರೆ. ಭಾರತದಲ್ಲಿ ಏಪ್ರಿಲ್ ಮತ್ತು ಆಗಸ್ಟ್ ನಡುವೆ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇದು ಕೂಡ ಕಲ್ಲಿದ್ದಲು ಕೊರತೆ ಒಂದು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇತರೆ ವಿದ್ಯುತ್ ಉತ್ಪಾದನಾ ಮೂಲಗಳು ಬೆಳವಣಿಗೆ ಕುಂಠಿತ
ವಿದ್ಯುತ್ ಉತ್ಪಾದನೆಯ ಇತರ ಮೂಲಗಳಾದ ಜಲವಿದ್ಯುತ್, ಅನಿಲ ಮತ್ತು ಪರಮಾಣು ಸಹ ಕಡಿಮೆಯಾಗಿದೆ. ಅಸಮಾನವಾಗಿ ಹಂಚಿದ ಮಳೆಗಾಲವು ಒಂದು ಅಂಶ ಎಂದು ಹೇತಲ್ ಗಾಂಧಿ ಹೇಳಿದ್ದಾರೆ. ಕೆಲವು ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಿದ್ದು ಜಲವಿದ್ಯುತ್ ಉತ್ಪಾದನೆ ಅಥವಾ ನೀರಿನ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಇತರ ಕೆಲವು ಅಂಶಗಳು ಗ್ಯಾಸ್ ಬೆಲೆಯಲ್ಲಿ ತೀಕ್ಷ್ಣವಾದ ಹೆಚ್ಚಳ ಹಾಗೂ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ನಿರ್ವಹಣೆ ಸ್ಥಗಿತಗೊಳಿಸುವಿಕೆಯನ್ನು ಒಳಗೊಂಡಿವೆ ಎಂದು ಅವರು ಹೇಳಿದರು. ಇವೆಲ್ಲವೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ಕಲ್ಲಿದ್ದಲು ಕೊರತೆ ಏಕೆ?
ಭಾರತವು ದೊಡ್ಡ ಕಲ್ಲಿದ್ದಲು ಮೀಸಲು ಹೊಂದಿದ್ದರೂ ವಿಶ್ವದ ಮೂರನೇ ಅತಿದೊಡ್ಡ ಕಲ್ಲಿದ್ದಲು ಆಮದುದಾರನಾಗಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಕಲ್ಲಿದ್ದಲು ಬೆಲೆಗಳು ಮತ್ತು ದೇಶೀಯ ಕಲ್ಲಿದ್ದಲು ಬೆಲೆಗಳ ನಡುವಿನ ಅಂತರವು ಇತ್ತೀಚಿನ ತಿಂಗಳುಗಳಲ್ಲಿ ಆಮದು ತೀವ್ರವಾಗಿ ಕಡಿಮೆಯಾಗಿದೆ.
ಪೂರೈಕೆ ಕಡಿಮೆಯಾದಂತೆ ಬೇಡಿಕೆಯೂ ಹೆಚ್ಚಾಯಿತು!
ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ಆಮದು ಜುಲೈ ಮತ್ತು ಆಗಸ್ಟ್ನಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 45% ಕುಸಿಯಿತು. ಆದರೆ ಭಾರತದ ವಿದ್ಯುತ್ ರಹಿತ ವಲಯಗಳು ದೇಶೀಯ ಕಲ್ಲಿದ್ದಲಿನ ಮೇಲೆ ಹೆಚ್ಚು ಅವಲಂಬಿತವಾಗಿವೆ ಎಂದು ಹೇಳಲಾಗುತ್ತಿದೆ. ವಿದ್ಯುತ್ ಅಲ್ಲದ ಕೈಗಾರಿಕೆಗಳಾದ ಅಲ್ಯೂಮಿನಿಯಂ, ಸ್ಟೀಲ್, ಸಿಮೆಂಟ್ ಮತ್ತು ಪೇಪರ್ ಸಾಮಾನ್ಯವಾಗಿ ಶಾಖ ಉತ್ಪಾದಿಸಲು ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಬಳಸಲಾಗುತ್ತದೆ.
ಆಮದು ಮಾಡಿದ ಕಲ್ಲಿದ್ದಲನ್ನು ಅವಲಂಬಿಸಿರುವ ಕರಾವಳಿ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ ಉಂಟಾಗಿರುವುದು, ಜೊತೆಗೆ ಉತ್ಪಾದನೆಯನ್ನು ಹೆಚ್ಚಿಸಲು ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚಿನ ಒತ್ತಡವು ಕಲ್ಲಿದ್ದಲು ಕೊರತೆಗೆ ಕಾರಣವಾಗಿದೆ.