ಭಾರತಕ್ಕೆ ಪಾಕಿಸ್ತಾನಕ್ಕಿಂತ ಚೀನಾ ಹೆಚ್ಚು ಆತಂಕಕಾರಿ ಎಂದು ಎನ್ ಸಿಪಿ ಮುಖ್ಯಸ್ಥ ಹಾಗೂ ಕೇಂದ್ರದ ಮಾಜಿ ರಕ್ಷಣಾ ಸಚಿವರೂ ಆದ ಶರದ್ ಪವಾರ್ ಶಿವಸೇನಾದ ಮುಖವಾಣಿ 'ಸಾಮನಾ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಚೀನಾದ ಸೇನೆ ಭಾರತಕ್ಕಿಂತ ಹತ್ತು ಪಟ್ಟು ದೊಡ್ಡದಿದೆ. ಭಾರತದ ನೆರೆ ರಾಷ್ಟ್ರಗಳನ್ನು ಒಂದೊಂದಾಗಿ ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದಿದ್ದಾರೆ.
ರಾಜೀ- ಸಂಧಾನ, ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೇರಬೇಕು. ಶತ್ರು ಅಂದಾಕ್ಷಣ ನಮ್ಮ ಮನಸ್ಸಿಗೆ ಬರುವುದು ಪಾಕಿಸ್ತಾನ. ಆದರೆ ಪಾಕಿಸ್ತಾನದ ಬಗ್ಗೆ ನಾವು ಚಿಂತಿಸುವ ಅಗತ್ಯ ಇಲ್ಲ. ದೀರ್ಘಾವಧಿಯಲ್ಲಿ ನಮ್ಮ ಶತ್ರು ಚೀನಾ. ಅದರ ಸಾಮರ್ಥ್ಯ, ದೂರದೃಷ್ಟಿ, ಭಾರತದ ಹಿತಾಸಕ್ತಿಗಳ ವಿರುದ್ಧ ಅದರ ಕಾರ್ಯಕ್ರಮಗಳು ಅಪಾಯಕಾರಿ. ಆದ್ದರಿಂದ ಭಾರತಕ್ಕೆ ಚೀನಾ ಅತಿ ದೊಡ್ಡ ಅಪಾಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಚೀನಾ ಆರ್ಥಿಕವಾಗಿಯೂ ಪ್ರಬಲವಾಗಿದೆ. ಸೌಹಾರ್ದದ ಚಿತ್ರಣವೊಂದನ್ನು ಸೃಷ್ಟಿಸಿ, ಎರಡೂ ರಾಷ್ಟ್ರಗಳ ಮಧ್ಯದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿಯವರು ಚೀನಾದ ಅಧ್ಯಕ್ಷರ ಕೈ ಕುಲುಕಿದ್ದನ್ನು, ಆಲಂಗಿಸಿದ್ದನ್ನು ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್ ಮಮ್ಮಲಪುರಂಗೆ ಭೇಟಿ ನೀಡಿದ್ದನ್ನು ಉದಾಹರಿಸಿ ಶರದ್ ಪವಾರ್ ಹೇಳಿದ್ದಾರೆ.
ನೇಪಾಳ, ಬಾಂಗ್ಲಾದೇಶ್, ಶ್ರೀಲಂಕಾವನ್ನು ಕೂಡ ಎತ್ತಿಕಟ್ಟಿದೆ
ಗಾಲ್ವನ್ ನಲ್ಲಿ ಚೀನಾ ಹಾಗೂ ಭಾರತದ ಸೈನಿಕರ ಮಧ್ಯೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವುದಕ್ಕೆ ಉತ್ತರ ನೀಡಿದ ಅವರು, ಈ ವಿಚಾರದಲ್ಲಿ ರಾಜಕೀಯ ಇರಬಾರದು ಎಂದು ನಾನು ಹೇಳ್ತೀನಿ. ಏಕೆಂದರೆ ನಾವು ಅವರ ಮೇಲೆ ದಾಳಿ ಮಾಡಬಹುದು. ಆದರೆ ಚೀನಾ ಪ್ರತಿದಾಳಿ ನಡೆಸಿದರೆ ಇಡೀ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ. ಪಾಕಿಸ್ತಾನ ಮಾತ್ರ ಅಲ್ಲ, ನೇಪಾಳ, ಬಾಂಗ್ಲಾದೇಶ್, ಶ್ರೀಲಂಕಾವನ್ನು ಕೂಡ ಭಾರತದ ವಿರುದ್ಧ ಎತ್ತಿಕಟ್ಟಿದೆ ಚೀನಾ. ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಮಂತ್ರಿ ಆದಾಗ ನೇಪಾಳದ ಪಶುಪತಿ ನಾಥ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದರು. ಭಾರತದ ಮಿತ್ರರಾಷ್ಟ್ರ, ಮೊದಲು ಹಿಂದೂ ರಾಷ್ಟ್ರ ಎಂದು ನೇಪಾಳವನ್ನು ಹೊಗಳಿದರು. ಆದರೆ ನೇಪಾಳ ಈಗ ನಮ್ಮ ಜತೆ ಇಲ್ಲ, ಚೀನಾ ಪರ ಇದೆ. ಬಾಂಗ್ಲಾದೇಶ್ ಸ್ವತಂತ್ರಗೊಳಿಸಲು ಭಾರತ ನೇತೃತ್ವ ವಹಿಸಿತು. ಆದರೆ ಆ ದೇಶ ಈಗ ಚೀನಾದ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪವಾರ್ ಹೇಳಿದ್ದಾರೆ.
ಈಗಿನ ಭಾರತ- ಚೀನಾ ಸ್ಥಿತಿಗೆ ಮೋದಿ ಸರ್ಕಾರ ಕಾರಣ
ನೆರೆಯ ರಾಷ್ಟ್ರಗಳು ಎಲ್ಲವನ್ನೂ ಚೀನಾ ತನ್ನ ಕಡೆ ಸೆಳೆದುಕೊಂಡಿದೆ. ಅದು ಈಚಿನ ಕಾಲ ಘಟ್ಟದ ಕೊಡುಗೆ (ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಬಂದ ಮೇಲೆ). ಚೀನಾ ಹಾಗೂ ಪಾಕಿಸ್ತಾನದ ಜತೆ ವ್ಯವಹರಿಸಿದ ರೀತಿಗೆ ಜವಾಹರ್ ಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಅವರನ್ನು ಯಾವಾಗಲೂ ನಿಂದಿಸಲಾಗುತ್ತದೆ. ಆದರೆ ನೆಹರೂ, ಇಂದಿರಾ ಅವಧಿಯಲ್ಲಿ ಭಾರತ- ಚೀನಾ ಮಧ್ಯೆ ಉತ್ತಮ ಬಾಂಧವ್ಯ ಇತ್ತು ಎಂದಿದ್ದಾರೆ. ಚೀನಾ ಎಂದೋ ಒಂದು ದಿನ ಸೂಪರ್ ಪವರ್ ಆಗುತ್ತದೆ ಎಂದು ನೆಹರೂ ಅವರಿಗೆ ಗೊತ್ತಿತ್ತು. ಆದ್ದರಿಂದಲೇ ಆ ದೇಶದ ಜತೆ ಉತ್ತಮ ಬಾಂಧವ್ಯ ಹೊಂದಿರಬೇಕು. ಉದ್ವಿಗ್ನತೆಯಿಂದ ಎರಡೂ ದೇಶಕ್ಕೆ ಲಾಭವಿಲ್ಲ ಎಂದು ತಿಳಿದಿದ್ದರು. ನೆಹರೂ ಪಂಚಶೀಲ ಒಪ್ಪಂದವನ್ನು ಮುಂದಿಟ್ಟರು. ಈ ಭಾಗದಲ್ಲಿ ಶಾಂತಿ ನೆಲೆಸಲಿ ಎಂಬುದು ಉದ್ದೇಶವಾಗಿತ್ತು. ದುರದೃಷ್ಟ ಏನೆಂದರೆ, ಚೀನಾ ನಾಯಕತ್ವ ಬೇರೆಯದೇ ನಿರ್ಧಾರ ತೆಗೆದುಕೊಂಡಿತು. ಬಿಕ್ಕಟ್ಟು ಏರ್ಪಟ್ಟಿತು. ಈ ವಿಚಾರವನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಆರ್ಥಿಕ ತಜ್ಞರ ಅಭಿಪ್ರಾಯ ಪಡೆಯಬೇಕು
ಪ್ರಸ್ತುತ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿರುವ ಶರದ್ ಪವಾರ್, ಪ್ರಧಾನಿ ಮಂತ್ರಿಗಳು ಆರ್ಥಿಕ ತಜ್ಞರ ಜತೆಗೆ ಹಾಗೂ ಮನಮೋಹನ್ ಸಿಂಗ್ ಅವರಂಥ ತಜ್ಞರ ಜತೆ ಚರ್ಚಿಸಿ, ಆರ್ಥಿಕತೆ ಪುನಶ್ಚೇತನಕ್ಕೆ ಪ್ರಯತ್ನಿಸಬೇಕು. ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದಾಗ ದೇಶದ ಆರ್ಥಿಕತೆಗೆ ಹೊಸ ಮಾರ್ಗ ತೋರಿಸಿದರು. ಆ ವೇಳೆ ನಾನೂ ಸಂಪುಟದಲ್ಲಿದ್ದೆ. ಬಿಕ್ಕಟ್ಟಿನಿಂದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಿದ ಕೀರ್ತಿ ಮನಮೋಹನ್ ಸಿಂಗ್ ಹಾಗೂ ದಿವಂಗತ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಸೇರಬೇಕು ಎಂದರು.
ರಾಜಕೀಯದಲ್ಲಿ ಗುರು ಅಂತ ಯಾರೂ ಇರುವುದಿಲ್ಲ
ಮೋದಿ ಕೂಡ ತಜ್ಞರ ಸಹಾಯ ಪಡೆಯಬೇಕು. ಅವರು ತೆಗೆದುಕೊಳ್ಳುವ ನಡೆಗೆ ದೇಶ ಬೆಂಬಲಿಸುತ್ತದೆ. ಈಗ ದೇಶಕ್ಕೆ ಮತ್ತೊಬ್ಬರು ಮನಮೋಹನ್ ಸಿಂಗ್ ಬೇಕಾಗಿದ್ದಾರೆ ಎಂದಿದ್ದಾರೆ. ಇನ್ನು ಮೋದಿ ತಮ್ಮನ್ನು "ರಾಜಕೀಯ ಗುರು" ಎಂದು ಕರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜಕೀಯದಲ್ಲಿ ಗುರು ಅಂತ ಯಾರೂ ಇರುವುದಿಲ್ಲ ಎಂದು ಹೇಳಿದ್ದಾರೆ. ಮೋದಿ ಸರ್ಕಾರ ಹಾಗೂ ಇತರ ಪಕ್ಷಗಳ ನಾಯಕರ ಜತೆ ಯಾವುದೇ ಮಾತುಕತೆ ಆಗಿಲ್ಲ. ಈ ಹಿಂದೆ ಮನಮೋಹನ್ ಸಿಂಗ್, ಪ್ರಣಬ್ ಮುಖರ್ಜಿ, ಪಿ. ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ನಿರಂತರವಾಗಿ ತಜ್ಞರು ಹಾಗೂ ಎಲ್ಲ ಪಕ್ಷಗಳ ನಾಯಕರ ಜತೆ ಸಂಪರ್ಕದಲ್ಲಿ ಇದ್ದರು. ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಅವರ ಅಭಿಪ್ರಾಯವನ್ನೂ ಪಡೆದು, ನಿರ್ಧಾರ ಕೈಗೊಳ್ಳುತ್ತಿದ್ದರು ಎಂದಿದ್ದಾರೆ.


Click it and Unblock the Notifications