ಲಾಕ್ ಡೌನ್ ತೆರವಿನ ಬಗ್ಗೆ ಪ್ರಧಾನಿ ಮನಸ್ಸಲ್ಲಿ ಏನಿದೆ? ರಾಜ್ಯಗಳ ನಿಲುವೇನು?
ಕೊರೊನಾ ಹಬ್ಬದಂತೆ ತಡೆಯಲು ದೇಶಾದ್ಯಂತ ಒಂದೇ ಸಲಕ್ಕೆ 21 ದಿನದ ಲಾಕ್ ಡೌನ್ ಘೋಷಿಸಲಾಗಿತ್ತು. ಆದರೆ ಏಪ್ರಿಲ್ 14ನೇ ತಾರೀಕಿಗೆ ಒಂದೇ ಸಲಕ್ಕೆ ಲಾಕ್ ಡೌನ್ ತೆರವು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ನಲ್ಲಿ ನಡೆದ ವಿವಿಧ ಪಕ್ಷಗಳ ಮುಖಂಡರ ಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ ಎಂದು ಬಿಜೆಡಿಯ ಪಿನಾಕಿ ಮಿಶ್ರಾ ಹೇಳಿದ್ದಾರೆ.
ಕೊರೊನಾ ಹಬ್ಬುತ್ತಿರುವುದರಿಂದ ಸೃಷ್ಟಿಯಾಗಿರುವ ಸನ್ನಿವೇಶ ಮತ್ತು ವೈರಾಣು ಹಬ್ಬದಂತೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ಇದೇ ವೇಳೆ ನರೇಂದ್ರ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ. "ಲಾಕ್ ಡೌನ್ ತೆರವುಗೊಳಿಸುವುದಿಲ್ಲ ಎಂಬ ಬಗ್ಗೆ ಮೋದಿ ಸ್ಪಷ್ಟವಾಗಿ ತಿಳಿಸಿದ್ದಾರೆ ಹಾಗೂ ಕೊರೊನಾ ಪೂರ್ವದ ಹಾಗೂ ನಂತರದ ಜೀವನ ಒಂದೇ ಥರ ಇರೋದಿಲ್ಲ" ಎಂದು ಪಿನಾಕಿ ಮಿಶ್ರಾ ತಿಳಿಸಿದ್ದಾರೆ.
ಕೇಂದ್ರದಿಂದ 1.70 ಲಕ್ಷ ಕೋಟಿಗೂ ದೊಡ್ಡ ಮೊತ್ತದ ಮತ್ತೊಂದು ಪ್ಯಾಕೇಜ್!
"ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಕೂಡ ಈ ಬಗ್ಗೆ ಚರ್ಚೆ ನಡೆಸುತ್ತೇನೆ" ಎಂದು ನರೇಂದ್ರ ಮೋದಿ ಅವರು ತಿಳಿಸಿದ್ದಾಗಿ ಹೆಸರು ಬಹಿರಂಗ ಮಾಡಲು ಇಚ್ಛಿಸದ ನಾಯಕರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಅಂದ ಹಾಗೆ ಸಂಸತ್ ನಲ್ಲಿ ನಡೆದ ಸಭೆಯಲ್ಲಿ ಗುಲಾಬ್ ನಬೀ ಆಜಾದ್, ಶರದ್ ಪವಾರ್ ಕೂಡ ಭಾಗವಹಿಸಿದ್ದರು.
ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣವನ್ನು ಸದ್ಯಕ್ಕೆ ಬೇಡ
ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ಈ ನಾಯಕರಿಗೆ ಕೊರೊನಾ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಲಾಕ್ ಡೌನ್ ಸಮಯದ ಸವಾಲುಗಳನ್ನು ಸಹ ತಿಳಿಸಿದರು. ಹಲವು ನಾಯಕರು, ವೈದ್ಯಕೀಯ ಸಿಬ್ಬಂದಿಗೆ ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ ಮೆಂಟ್ (ಪಿಪಿಇ) ಕೊರತೆ ಇರುವ ಬಗ್ಗೆ ಧ್ವನಿ ಎತ್ತಿದರು. ಇನ್ನೂ ಹಲವರು ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣವನ್ನು ಸದ್ಯಕ್ಕೆ ತಡೆಯುವ ಬಗ್ಗೆ ಕೂಡ ಸಲಹೆ ನೀಡಿದರು. ಏಪ್ರಿಲ್ 14ರ ನಂತರವೂ ಲಾಕ್ ಡೌನ್ ಮುಂದುವರಿಸುವ ಬಗ್ಗೆ ಹಲವು ರಾಜ್ಯಗಳು ಆಸಕ್ತವಾಗಿವೆ. ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವುದನ್ನು ಗಮನಿಸಿ, ಲಾಕ್ ಡೌನ್ ಮುಂದುವರಿಸಬೇಕು ಎಂಬ ಉದ್ದೇಶದಲ್ಲಿ ಇರುವುದರಿಂದ ಆ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು.
ಯಾವ ನಾಯಕರು ಭಾಗಿಯಾಗಿದ್ದರು?
ವರ್ಚುವಲ್ ಸಭೆಯಲ್ಲಿ ಎಸ್ಪಿಯ ರಾಮ್ ಗೋಪಾಲ್ ಯಾದವ್, ಬಿಎಸ್ಪಿಯ ಸತೀಶ್ ಮಿಶ್ರಾ, ಲೋಕ್ ಜನಶಕ್ತಿ ಪಾರ್ಟಿಯ ಚಿರಾಗ್ ಪಾಸ್ವಾನ್, ಡಿಎಂಕೆಯಿಂದ ಟಿ.ಆರ್. ಬಾಲು, ಶಿರೋಮಣಿ ಅಕಾಲಿ ದಳ್ ನ ಸುಖ್ ಬೀರ್ ಸಿಂಗ್ ಬಾದಲ್, ಜೆಡಿಯುನಿಂದ ರಾಜೀವ್ ರಂಜನ್ ಸಿಂಗ್, ಬಿಜು ಜನತಾದಳದ ಪಿನಾಕಿ ಮಿಶ್ರಾ, ಶಿವಸೇನಾದ ಸಂಜಯ್ ರಾವತ್, ತೃಣಮೂಲ ಕಾಂಗ್ರೆಸ್ ನ ಸುದಿಪ್ ಬಂಡೋಪಾಧ್ಯಾಯ್ ಭಾಗವಹಿಸಿದ್ದರು. ಲೋಕಸಭೆ- ರಾಜ್ಯ ಸಭೆ ಎರಡೂ ಸೇರಿ ಐದು ಸ್ಥಾನಗಳು ಇರುವ ಪಕ್ಷಗಳಿಗೆ ಈ ಸಭೆಗೆ ಆಹ್ವಾನ ಇತ್ತು. ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ ವಿಪಕ್ಷಗಳ ನಾಯಕರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು ಮೊದಲನೇ ಸಭೆ. ಈ ಹಿಂದೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಸಂವಾದ ನಡೆಸಿದ್ದರು.
ಮಾಜಿ ರಾಷ್ಟ್ರಪತಿಗಳು, ಪ್ರಧಾನಿಗಳ ಜತೆ ಚರ್ಚೆ
ಇನ್ನು ವೈದ್ಯರು, ಮಾಧ್ಯಮದವರೂ ಸೇರಿದಂತೆ ವಿವಿಧ ಕ್ಷೇತ್ರದವರ ಜತೆಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದರು. ಈಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಟಿಎಂಸಿ ಮಮತಾ ಬ್ಯಾನರ್ಜಿ, ಡಿಎಂಕೆ ಎಂ.ಕೆ. ಸ್ಟಾಲಿನ್ ಸೇರಿದಂತೆ ಇತರ ರಾಜಕೀಯ ಪಕ್ಷಗಳ ನಾಯಕರ ಜತೆಗೆ ಕೊರೊನಾ ಬಗ್ಗೆ ಚರ್ಚೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್ ಹಾಗೂ ಮಾಜಿ ಪ್ರಧಾನಿಗಳಾದ ಮನ್ ಮೋಹನ್ ಸಿಂಗ್ ಮತ್ತು ಎಚ್. ಡಿ. ದೇವೇಗೌಡ ಜತೆಗೆ ಚರ್ಚೆ ನಡೆಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.