ಕೆಲವು ರಾಜ್ಯಗಳಿಗೆ ಸಂಬಳ ಕೊಡಲೂ ಹಣ ಇಲ್ಲ ಎಂದ ಕೇಂದ್ರ ಸಚಿವ
ನಾಗ್ಪುರ್, ಜೂನ್ 11: ಕೋವಿಡ್ ಪಿಡಗಿನಿಂದಾಗಿ ಭಾರತದ ಆರ್ಥಿಕತೆಗೆ ದೊಡ್ಡ ನಷ್ಟವುಂಟಾಗಿದೆ. ಇದರಿಂದ ಹೊರ ಬರುವುದು ಹೇಗೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲೆ ಕೆಡಿಸಿಕೊಳ್ಳುತ್ತಿವೆ. ಆದರೆ, ಉಂಟಾದ ನಷ್ಟ ನೋಡಿ ಸರ್ಕಾರಗಳು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿವೆ.
ಕೋವಿಡ್ ನಿಂದಾಗಿ ಭಾರತವು ಆದಾಯದಲ್ಲಿ 10 ಲಕ್ಷ ಕೋಟಿ ರುಪಾಯಿಗಳಷ್ಟು ನಷ್ಟವನ್ನು ಎದುರಿಸುತ್ತಿದೆ ಎಂದು ಸ್ವತಃ ಕೇಂದ್ರ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ಮುಂದಿನ ತಿಂಗಳು ಸಂಬಳ ನೀಡಲು ಕೆಲವು ರಾಜ್ಯಗಳಿಗೆ ಹಣವಿಲ್ಲ ಎಂದು ಅವರು ಹೇಳಿದ್ದಾರೆ.
ಕೋವಿಡ್: ಕರ್ನಾಟಕ ಸಿಎಂ ಪರಿಹಾರ ನಿಧಿಗೆ ಬಂದಿರುವ ಹಣ ಎಷ್ಟು?
ಕೊರೊನಾವೈರಸ್ ಬಿಕ್ಕಟ್ಟಿನಿಂದ ದೇಶವು 10 ಲಕ್ಷ ಕೋಟಿ ರೂ ಅಥವಾ ಭಾರತದ ಜಿಡಿಪಿಯ ಶೇಕಡಾ 5 ರಷ್ಟು ಆದಾಯವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ನಾಗ್ಪುರದಲ್ಲಿ ಬಿಜೆಪಿಯ ಜನ ಸಂವಾದ ವಿಡಿಯೋ ಕಾನ್ಪರೆನ್ಸ್ ಉದ್ದೇಶಿಸಿ ಮಾತನಾಡಿದ್ದಾರೆ.
ಪರಿಸ್ಥಿತಿಯನ್ನು ಸಕಾರಾತ್ಮಕತೆಯೊಂದಿಗೆ ಎದುರಿಸಬೇಕಾಗುತ್ತದೆ
''ನಾವು ಪರಿಸ್ಥಿತಿಯನ್ನು ಸಕಾರಾತ್ಮಕತೆಯೊಂದಿಗೆ ಎದುರಿಸಬೇಕಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. ನಾವೆಲ್ಲರೂ ಕಠಿಣ ಸಮಯವನ್ನು ಎದುರಿಸುತ್ತಿದ್ದೇವೆ. ನಾವು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ನಕಾರಾತ್ಮಕತೆ, ಹತಾಶೆ ಮತ್ತು ಭಯದಿಂದ ನಾವು ಅದನ್ನು ಎದುರಿಸಲು ಸಾಧ್ಯವಿಲ್ಲ. ನಾವು ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯೊಂದಿಗೆ ಹೋರಾಡಿ, ಬಿಕ್ಕಟ್ಟನ್ನು ಮೆಟ್ಟಿ ನಿಲ್ಲಬೇಕಿದೆ'' ಎಂದಿದ್ದಾರೆ.
ಶೇಕಡಾ 5 ರಷ್ಟು ಕುಗ್ಗುತ್ತದೆ
ಏತನ್ಮಧ್ಯೆ, ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 5 ರಷ್ಟು ಕುಗ್ಗುತ್ತದೆ ಎಂದು ಮುನ್ಸೂಚನೆ ನೀಡಿದೆ. ಆದಾಗ್ಯೂ, ಜಿಡಿಪಿ ಬೆಳವಣಿಗೆಯನ್ನು 2021-22ರಲ್ಲಿ ಶೇ 8.5 ಮತ್ತು 2022-23ರಲ್ಲಿ ಶೇ 6.5 ರಷ್ಟು ಇರಲಿದೆ ಎಂದು ಅದು ಅಂದಾಜಿಸಿದೆ.
ಜಿಡಿಪಿ ದರ ಏರಿಕೆ ಕಾಣಲಿದೆ
ಒಟ್ಟಿನಲ್ಲಿ ಕೆಲ ಆರ್ಥಿಕ ತಜ್ಞರು ಲಾಕ್ಡೌನ್ ಪರಿಣಾಮವನ್ನು ಭಾರತ ಎದುರಿಸುವಲ್ಲಿ ಧೀರ್ಘಾವಧಿ ಬೇಕು ಎನ್ನುತ್ತಿದ್ದರೆ, ಕೆಲ ರೇಟಿಂಗ್ ಏಜನ್ಸಿಗಳು 20 ಲಕ್ಷ ಕೋಟಿ ರು ಪ್ಯಾಕೇಜ್ ನ್ನೇ ಆಧಾರವಾಗಿಟ್ಟುಕೊಂಡು ಜಿಡಿಪಿ ದರ ಭಾರೀ ಏರಿಕೆ ಕಾಣಲಿದೆ ಎಂದು ಹೇಳಿರುವುದು ಆಶ್ಚರ್ಯ ಮೂಡಿಸಿದೆ
ಮತ್ತೆ ಲಾಕ್ಡೌನ್ ಮಾಡಬೇಕಾಗುತ್ತದೆ
ಇನ್ನೊಂದೆಡೆ ಜನರು ನಿಯಮಗಳನ್ನು ಪಾಲಿಸಲು ವಿಫಲವಾದರೆ, ಮತ್ತೆ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ. ಹೀಗಾಗಿ ಆರ್ಥಿಕತೆಯ ಮೇಲೆ ಬಿದ್ದಿರುವ ಕರಿನೆರಳು ಹಿಂದೆ ಸರಿಯುವಂತೆ ಕಾಣುತ್ತಿಲ್ಲ.