ಗೋವರ್ಧನಗಿರಿ ಕಲ್ಲುಗಳು ಆನ್ ಲೈನ್ ನಲ್ಲಿ ಮಾರಾಟಕ್ಕೆ; ಮೂವರ ವಿರುದ್ಧ FIR
ಮಥುರಾದಲ್ಲಿನ ಗೋವರ್ಧನಗಿರಿಯ ಕಲ್ಲುಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕೆ ಇಟ್ಟ ಆರೋಪದಲ್ಲಿ ಇ- ಕಾಮರ್ಸ್ ಸೈಟ್ ಸಿಇಒ ಸೇರಿ ಮೂವರ ವಿರುದ್ಧ ಭಾನುವಾರ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಭಗವಾನ್ ಶ್ರೀಕೃಷ್ಣನಿಗೆ ಸಂಬಂಧಿಸಿದಂತೆ ಹಿಂದೂಗಳಿಗೆ ಪರಮ ಪವಿತ್ರವಾದ ಸ್ಥಳ ಮಥುರಾದ ಗೋವರ್ಧನಗಿರಿ.
ಶ್ರೀಕೃಷ್ಣನ ಬಗೆಗಿನ ಕಥೆಗಳಲ್ಲಿ ಇರುವಂತೆ, ಒಮ್ಮೆ ವಿಪರೀತ ಮಳೆ ಬರುವಾಗ ಈ ಗೋವರ್ಧನಗಿರಿಯನ್ನೇ ತನ್ನ ಕಿರು ಬೆರಳಿನಿಂದ ಎತ್ತಿ ಹಿಡಿದು ನಿಂತನಂತೆ ಕೃಷ್ಣ. ಅದರ ಅಡಿಯಲ್ಲಿ ಬಂದು ಜನರು ನಿಂತು ರಕ್ಷಣೆ ಪಡೆದರಂತೆ. ಈ ರೀತಿಯ ಕೃಷ್ಣನ ಕಥೆಯಲ್ಲಿ ಬರುವ ಪರ್ವತವಾದ ಈ ಗೋವರ್ಧಗಿರಿಗೆ ಹಿಂದೂಗಳಲ್ಲಿ ಆರಾಧನೆ ಭಾವವಿದೆ.
ಗ್ರಾಹಕರ ಸಮಸ್ಯೆಗಳಿಗೆ ಆನ್ ಲೈನ್ ನಲ್ಲಿ ದೂರು ಸಲ್ಲಿಸುವುದು ಹೇಗೆ?
ಅಂಥ ಗೋವರ್ಧನಗಿರಿಯ ಕಲ್ಲುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮಾಹಿತಿ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದಲ್ಲಿ ಕಂಪೆನಿ, ಸಿಇಒ ಮತ್ತು ಕಲ್ಲಿನ ಸರಬರಾಜುದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮಥುರಾ (ಗ್ರಾಮೀಣ) ಎಸ್.ಪಿ. ಶಿರೀಶ್ ಚಂದ್ರ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 265, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಅಡಿಯಲ್ಲಿ ಇಂಡಿಯಾMART ಸ್ಥಾಪಕ- ಸಿಇಒ ದಿನೇಶ್ ಅಗರ್ ವಾಲ್, ಸಹ- ಸಂಸ್ಥಾಪಕ ಬ್ರಜೇಶ್ ಅಗರ್ ವಾಲ್, ಮಥುರಾ ಮೂಲದ ಸರಬರಾಜುದಾರ ಅಂಕುರ್ ಅಗರ್ ವಾಲ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಲಾಗಿದೆ.
ಗೋವರ್ಧರ್ ಪೊಲೀಸ್ ಠಾಣೆಯಲ್ಲಿ ಮಥುರಾ ಮೂಲದ ಸಾಮಾಜಿಕ ಕಾರ್ಯಕರ್ತ ಕೇಶವ್ ಮುಖಿಯಾ ದಾಖಲಿಸಿದ್ದ ದೂರಿನ ಅನ್ವಯ ಎಫ್ ಐಆರ್ ದಾಖಲಾಗಿದೆ ಎಂದು ಎಸ್.ಪಿ. ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಹತ್ತು ದೂರು ಇದ್ದು, ಅವೆಲ್ಲವನ್ನೂ ಒಟ್ಟುಗೂಡಿಸಿ, ಒಂದು ವಿಚಾರಣೆ ಮಾಡಲಾಗಿದೆ.
ಪೊಲೀಸರ ಪ್ರಕಾರ, ವೆಬ್ ಸೈಟ್ ನಿಂದ ಈ ಕಲ್ಲುಗಳನ್ನು "ನೈಸರ್ಗಿಕ" ಎಂದು ಹೇಳಿ, ಒಂದು ತುಂಡಿಗೆ ರು. 5,175 ದರ ನಿಗದಿ ಮಾಡಲಾಗಿತ್ತು. ಹೀಗೆ "ವ್ಯವಹಾರ"ಕ್ಕೆ ಇಳಿದಿದ್ದ ಕಂಪೆನಿಯ ವಿರುದ್ಧ ಗೋವರ್ಧನ್ ಪೊಲೀಸ್ ಠಾಣೆ ಮುಂದೆ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.
ಕೃಷ್ಣನೇ ಗೋವರ್ಧನ ಪರ್ವತದ ಸ್ವರೂಪದಲ್ಲಿದ್ದಾನೆ. ಇಲ್ಲಿನ ಕಲ್ಲುಗಳನ್ನು ಮಾರಿದರೆ ಸ್ವತಃ ಕೃಷ್ಣನನ್ನೇ ಮಾರಾಟಕ್ಕೆ ಇಟ್ಟಂತೆ ಎಂದು ಮಥುರಾ ಮೂಲದ ಸಿಯಾ ರಾಮ್ ಬಾಬ ಎಂಬ ಸಾಧು, ಕಂಪೆನಿಯ ಈ ವ್ಯವಹಾರವನ್ನು ಖಂಡಿಸಿದ್ದಾರೆ.
ಕಂಪೆನಿ ಹಾಗೂ ಸರಬರಾಜುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಮಥುರಾ ಡಿ.ಎಂ. ಭೇಟಿಯಾಗುವುದಕ್ಕೆ ಉತ್ತರಪ್ರದೇಶದ ಬ್ರಾಹ್ಮಣ ಮಹಾಸಭಾ ತೀರ್ಮಾನಿಸಿದೆ.