ವಿಮಾನಯಾನ ಸಂಸ್ಥೆ, ನಿಲ್ದಾಣಗಳನ್ನು ಸರ್ಕಾರ ನಡೆಸಬಾರದು ಎಂದ ಹರ್ದೀಪ್
ಸರ್ಕಾರದಿಂದ ವಿಮಾನ ನಿಲ್ದಾಣ ಹಾಗೂ ವಿಮಾನ ಯಾನ ಸಂಸ್ಥೆ ನಡೆಸಬಾರದು ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇನ್ನು 2020ರೊಳಗೇ ಏರ್ ಇಂಡಿಯಾದ ಖಾಸಗೀಕರಣ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಏರ್ ಇಂಡಿಯಾವು ಆಸ್ತಿ. ಅದಕ್ಕೆ ಉತ್ತಮ ದಾಖಲೆ ಇದೆ. ತರಬೇತಿ ಪಡೆದ ವೃತ್ತಿಪರರುದ್ದಾರೆ. ಆದರೆ ಸರ್ಕಾರದಿಂದ ವಿಮಾನಯಾನ ಸಂಸ್ಥೆ ಹಾಗೂ ವಿಮಾನ ನಿಲ್ದಾಣ ನಡೆಸಬಾರದು. ನಮ್ಮ ಸರ್ಕಾರದ ನಿಯಮವು ವಾಣಿಜ್ಯ ಸಂಸ್ಥೆಗಳಿಗೂ ಅನ್ವಯ ಆಗಬೇಕು ಎಂದು ಅವರು ತಿಳಿಸಿದ್ದಾರೆ.
ಸಮಸ್ಯೆ ಹೆಚ್ಚಾಗುತ್ತಿದೆ. ಬಿಡ್ಡರ್ ಗಳಿಗೆ ಆಕರ್ಷಕವಾಗಿ ಕಾಣುತ್ತಿದೆ. ಆದ್ದರಿಂದ ಇದನ್ನು ಖಾಸಗೀಕರಣ ಮಾಡಬೇಕು. ಈ ವರ್ಷದೊಳಗೆ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂಬ ನಂಬಿಕೆ ನನಗಿದೆ ಎಂದು ಅವರು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರವು ಏರ್ ಇಂಡಿಯಾ ಖರೀದಿಗಾಗಿ ಆಸಕ್ತಿ ವ್ಯಕ್ತಪಡಿಸುವವರಿಗಾಗಿ ಎರಡು ತಿಂಗಳು ಅವಧಿ ವಿಸ್ತರಿಸಿತ್ತು. ಅಕ್ಟೋಬರ್ 30ರ ತನಕ ಅವಕಾಶ ನೀಡಿತ್ತು. ಕೊರೊನಾ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಂಡಿತು.
ಇನ್ನು ವಿಮಾನ ನಿಲ್ದಾಣಗಳ ಖಾಸಗೀಕರಣ ನಿರ್ಧಾರವನ್ನೂ ಕೇಂದ್ರ ಸಚಿವರು ಸಮರ್ಥಿಸಿಕೊಂಡರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅವರು ದೆಹಲಿ, ಮುಂಬೈ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಿದರು ಎಂದು ಹೇಳಿದರು.