ಜಿಎಸ್ ಟಿಯು 21ನೇ ಶತಮಾನದ ಅತಿ ದೊಡ್ಡ ಹುಚ್ಚುತನ: ಸುಬ್ರಮಣಿಯನ್ ಸ್ವಾಮಿ
"21ನೇ ಶತಮಾನದ ಅತಿ ದೊಡ್ಡ ಹುಚ್ಚುತನ"- ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಜಿಎಸ್ ಟಿಯನ್ನು ಬಣ್ಣಿಸಿರುವ ಬಗೆ ಇದು. 2030ರ ಹೊತ್ತಿಗೆ ಭಾರತ ಸೂಪರ್ ಪವರ್ ಆಗಬೇಕು ಅಂದರೆ 10 ಪರ್ಸೆಂಟ್ ದರದಲ್ಲಿ ಭಾರತ ಪ್ರಗತಿಯನ್ನು ಸಾಧಿಸಬೇಕು ಎಂದು ಅವರು ಬುಧವಾರ ಹೇಳಿದ್ದಾರೆ.
ಭಾರತದ ಆರ್ಥಿಕತೆಯಲ್ಲಿ ತಂದ ಸುಧಾರಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ. ದೇಶವು 8 ಪರ್ಸೆಂಟ್ ನಷ್ಟು ಪ್ರಗತಿಯನ್ನು ಆಗಿಂದಾಗ್ಗೆ ಸಾಧಿಸಿದರೂ ಕಾಂಗ್ರೆಸ್ ನಾಯಕರಿಂದ ಜಾರಿಗೆ ಬಂದ ಸುಧಾರಣೆಯಲ್ಲಿ ಚೇತರಿಕೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ವಂಚನೆ ಆರೋಪ ಎಫೆಕ್ಟ್! ಇಂಡಿಯಾಬುಲ್ಸ್ ಹೌಸಿಂಗ್ ಶೇ. 7 ರಷ್ಟು ಕುಸಿತ
ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ. ಹೂಡಿಕೆ ಮಾಡುವವರಿಗೆ ತಕ್ಕ ಪ್ರತಿಫಲ ದೊರೆಯಬೇಕು. ಆದಾಯ ತೆರಿಗೆ ಮತ್ತು ಜಿಎಸ್ ಟಿ ಮೂಲಕ ಅವರನ್ನು ಭಯ ಪಡಿಸಬಾರದು. ಜಿಎಸ್ ಟಿ 21ನೇ ಶತಮಾನದ ಅತಿ ದೊಡ್ಡ ಹುಚ್ಚುತನ. ಈ ಜಿಎಸ್ ಟಿ ವಿಪರೀತ ಸಂಕೀರ್ಣವಾಗಿದೆ. ಯಾವ ಅರ್ಜಿ ತುಂಬಬೇಕು ಅಂತಲೇ ಯಾರಿಗೂ ಅರ್ಥವಾಗಲ್ಲ.
ಅವರು ಕಂಪ್ಯೂಟರ್ ನಲ್ಲಿ ಅಪ್ ಲೋಡ್ ಮಾಡಬೇಕು ಅಂತ ರಾಜಸ್ಥಾನ್, ಬರ್ಮರ್ ನಿಂದ ಬರುತ್ತಾರೆ. ನಮ್ಮಲ್ಲಿ ವಿದ್ಯುಚ್ಛಕ್ತಿ ಇಲ್ಲ. ಹೇಗೆ ಅಪ್ ಲೋಡ್ ಮಾಡಬೇಕು ಎಂದು ಕೇಳುತ್ತಾರೆ. ಅದಕ್ಕೆ ನಾನು ಹೇಳಿದೆ: ಇದನ್ನು ನಿಮ್ಮ ತಲೆಯಲ್ಲಿ ಅಪ್ ಲೋಡ್ ಮಾಡಿ ಮತ್ತು ಪ್ರಧಾನಮಂತ್ರಿ ಬಳಿ ಹೋಗಿ ತಿಳಿಸಿ ಎಂದಿದ್ದಾಗಿ ಹೇಳಿದ್ದಾರೆ.
10 ಪರ್ಸೆಂಟ್ ನಂತೆ ಭಾರತ ಬೆಳವಣಿಗೆ ಸಾಧಿಸಿದರೆ ಮುಂದಿನ 10 ವರ್ಷದಲ್ಲಿ ಸೂಪರ್ ಪವರ್ ಆಗಲಿದೆ. ಇದೇ ವೇಗ ಮುಂದುವರಿದಲ್ಲಿ ಚೀನಾವನ್ನೂ ದಾಟಿ, ಅಮೆರಿಕಾಗೆ ಸವಾಲು ಎಸೆಯುವಂತೆ ಮುಂದಿನ 50 ವರ್ಷದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಲಿದೆ ಎಂದಿದ್ದಾರೆ.
ಇತರ ದೇಶಗಳಿಗೆ ಹೋಲಿಸಿದರೆ ಪ್ರತಿ ಎಕರೆ ಭೂಮಿಯಲ್ಲಿ ಬರುತ್ತಿರುವ ಕೃಷಿ ಇಳುವರಿ ಬಹಳ ಕಡಿಮೆ ಇದೆ. ಅದಕ್ಕೆ ನೀರಾವರಿ ವ್ಯವಸ್ಥೆಯ ಕೊರತೆ ಕೂಡ ಕಾರಣ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.