ಜಿಎಸ್ಟಿ ಪರಿಹಾರ ಮೊತ್ತದಲ್ಲಿ ಉಂಟಾದ ಕೊರತೆಯನ್ನು ಸಾಲದ ರೂಪದಲ್ಲಿ ಪಡೆಯಲು ರಾಜ್ಯಗಳು ಒಪ್ಪಿದ್ದು, ಕೇಂದ್ರ ಮತ್ತು ರಾಜ್ಯಗಳ ವಿವಾದ ಅಂತ್ಯಗೊಂಡಿದೆ. ಜಾರ್ಖಂಡ್ ಕೊನೆಯ ರಾಜ್ಯವಾಗಿ ಸೇರ್ಪಡೆಗೊಂಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸ್ಪೆಷಲ್ ವಿಂಡೋ ಮೂಲಕ 1.1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವ ಯೋಜನೆಗೆ ಎಲ್ಲಾ ರಾಜ್ಯಗಳು ಒಪ್ಪಿಕೊಂಡಿವೆ ಎಂದು ಎಂದು ಹಣಕಾಸು ಸಚಿವಾಲಯ ಶನಿವಾರ ಹೇಳಿದೆ.

ಜಾರ್ಖಂಡ್ಗೆ ಸ್ಪೆಷಲ್ ವಿಂಡೋ ಮೂಲಕ 1,689 ಕೋಟಿ ರೂ. ಮತ್ತು ಹೆಚ್ಚುವರಿ ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ಶೇ. 0.5ರವರೆಗೆ ಸಾಲಗಳ ಮೂಲಕ ಅಂದರೆ 1,765 ಕೋಟಿ ರೂ. ಸಾಲ ಪಡೆಯಲು ಅವಕಾಶವಿದೆ.
ಕೇಂದ್ರವು ಎಲ್ಲಾ ರಾಜ್ಯಗಳಿಗೆ 97,000 ಕೋಟಿ ರೂ. ಮತ್ತು 2.35 ಲಕ್ಷ ಕೋಟಿ ರೂ. ಎರಡು ಆಯ್ಕೆಯನ್ನು ಮುಂದಿಟ್ಟಿತ್ತು. ಎರಡೂ ಆಯ್ಕೆಗಳು ಬೇರೆ ಬೇರೆ ಷರತ್ತುಗಳನ್ನು ಹೊಂದಿದ್ದವು. ನಂತರ ಮೊದಲ ಆಯ್ಕೆಯನ್ನು 97,000 ಕೋಟಿ ರೂ.ನಿಂದ 1.1 ಲಕ್ಷ ಕೋಟಿ ರೂಪಾಯಿಗೆ ಏರಿಸಲಾಯಿತು. ಜೊತೆಗೆ ರಾಜ್ಯಗಳ ಪರವಾಗಿ ಸಾಲ ಪಡೆದುಕೊಳ್ಳಲೂ ಕೇಂದ್ರ ಒಪ್ಪಿಗೆ ನೀಡಿತು.
ಈಗಾಗಲೇ ರಾಜ್ಯಗಳ ಪರವಾಗಿ ಕೇಂದ್ರ ಸರಕಾರ ಐದು ಕಂತುಗಳಲ್ಲಿ 30,000 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಅವುಗಳನ್ನು ರಾಜ್ಯಗಳಿಗೆ ಹಸ್ತಾಂತರಿಸಿದೆ. ಡಿಸೆಂಬರ್ 7ರಂದು ಪಡೆದುಕೊಳ್ಳಲಿರುವ ಮುಂದಿನ ಕಂತಿನಲ್ಲಿ ಜಾರ್ಖಂಡ್ಗೆ ಹಣ ಸಿಗಲಿದೆ.
ಆರಂಭದಲ್ಲಿ ಜಾರ್ಖಂಡ್, ಛತ್ತೀಸ್ಗಡ, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳು ಜಿಎಸ್ಟಿ ಪರಿಹಾರವಾಗಿ ಸಾಲ ಪಡೆಯಲು ವಿರೋಧಿಸಿದ್ದವು. ಆದರೆ ಈಗ ಎಲ್ಲಾ ರಾಜ್ಯಗಳು ಒಪ್ಪಿಗೆ ಸೂಚಿಸಿದ್ದು, ರಾಜ್ಯಗಳಿಗೆ ಒಟ್ಟಾರೆ 1,06,830 ಕೋಟಿ ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಅನುಮತಿ ಕೊಟ್ಟಿದೆ.


Click it and Unblock the Notifications