ಹೆಲಿಕಾಪ್ಟರ್ ಮನಿಯಿಂದ ಆರ್ಥಿಕ ಚೇತರಿಕೆ ತನಕ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ಪ್ರಸಕ್ತ ಹಣಕಾಸು ವರ್ಷದ ಎರಡು ಹಾಗೂ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಉತ್ತಮ ಚೇತರಿಕೆ ಕಾಣಿಸಿಕೊಳ್ಳಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಏಪ್ರಿಲ್ ನಿಂದ ಜೂನ್ ನ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ 23.9%ನಷ್ಟು ಕುಗ್ಗಿತ್ತು.
ಕೊರೊನಾ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್ ಡೌನ್ ಪರಿಣಾಮವಾಗಿ ಆರ್ಥಿಕತೆ ಮೇಲೆ ಬಲವಾದ ಪೆಟ್ಟು ಬಿದ್ದಿತ್ತು. ಹಿಂದೂಸ್ತಾನ್ ಟೈಮ್ಸ್ ಗಾಗಿ ಆರ್. ಸುಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಹಂಚಿಕೊಂಡ ಪ್ರಮುಖ ವಿಚಾರಗಳ ಆಯ್ದ ಭಾಗ ಇಲ್ಲಿದೆ.
ಕೇಂದ್ರ ಸರ್ಕಾರದಿಂದ 14 ರಾಜ್ಯಗಳಿಗೆ 6,195 ಕೋಟಿ ಬಿಡುಗಡೆ: ಯಾವ ರಾಜ್ಯಕ್ಕೆ ಎಷ್ಟು?
* ವಾರ್ಷಿಕ ಜಿಡಿಪಿ ಎಲ್ಲಿಗೆ ಬಂದು ನಿಲ್ಲುತ್ತೇವೆ ಎಂಬ ಮೌಲ್ಯಮಾಪನ ಮಾಡುತ್ತಿದ್ದೇವೆ, ಆದರೆ ನಾವು ಒಂದು ಸಂಖ್ಯೆ ಎಂದು ಬರುವುದು ಸಾಧ್ಯವಿಲ್ಲ ಎನಿಸುತ್ತದೆ. ತಾರ್ಕಿಕವಾಗಿ ನೋಡಿದರೆ, ಮೊದಲ ತ್ರೈಮಾಸಿಕದ ಸಂಖ್ಯೆಯು ಒಟ್ಟಾರೆ ಲಾಕ್ ಡೌನ್ ಪ್ರಭಾವ. ಮೊದಲ ತ್ರೈಮಾಸಿಕದ ನಂತರ ಅನ್ ಲಾಕ್ ನಿಧಾನವಾಗಿ ಆಗಿದೆ. ಜುಲೈ ಹೊತ್ತಿಗೆ ಕೆಲವು ಕೈಗಾರಿಕೆಗಳಲ್ಲಿ ಪೂರ್ಣ ಸಾಮರ್ಥ್ಯದ ಬಳಕೆ ಆಗಿದೆ.
ಕೆಲವು ಕೈಗಾರಿಕೆಗಳು ನನಗೆ ತಿಳಿಸಿದ ಪ್ರಕಾರ, ಕೋವಿಡ್ ಹಿಂದಿನ ಸ್ಥಿತಿಗೆ ಬಂದಿದೆ. ಎರಡನೇ ತ್ರೈಮಾಸಿಕ ಮೊದಲಿನಷ್ಟು ಕೆಟ್ಟದಾಗಿರುವುದಿಲ್ಲ. ಕಾರ್ಮಿಕರ ಅಗತ್ಯ ಹೆಚ್ಚಿರುವ ಕಡೆಗಳಲ್ಲಿ ಕೂಡ ಮತ್ತೆ ಚಟುವಟಿಕೆಗಳು ಚಿಗಿತುಕೊಳ್ಳುತ್ತಿವೆ. ಇನ್ನು ಕೆಲವು ಕಡೆ ಕಾರ್ಮಿಕರು ವಾಪಸಾಗಿದ್ದಾರೆ. ಇನ್ನೂ ಕೆಲವು ಕಡೆ ವಾಪಸ್ ಕರೆತರಲಾಗುತ್ತಿದೆ. ಇನ್ನು ದೇಶೀಯ ಬೇಡಿಕೆ ಹೆಚ್ಚಾಗುತ್ತಿದೆ. ನಿರೀಕ್ಷೆಗಿಂತ ರಫ್ತಿನ ಬೇಡಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಎರಡು- ಮೂರನೇ ತ್ರೈಮಾಸಿಕ ಉತ್ತಮವಾಗಿರುತ್ತದೆ.
* ಈ ವರ್ಷ ಆರ್ಥಿಕ ಕುಸಿತದ ವರ್ಷವೇ ಅಂದರೆ, ನನಗೆ ಗೊತ್ತಿಲ್ಲ. ಇಡೀ ವರ್ಷದ್ದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಹಾಗೇ ಮೊದಲ ತ್ರೈಮಾಸಿಕದ ಕುಸಿತವೇ ಬೇಕಾದಷ್ಟಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
* ಇನ್ನು ಸರ್ಕಾರದ ಆದಾಯದಲ್ಲಿ ಹೆಚ್ಚಳ ಕಾಣಿಸುತ್ತಿದೆ. ಜಿಎಸ್ ಟಿ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಅದೇ ರೀತಿ ಕೆಲ ರಾಜ್ಯಗಳ ಆದಾಯ ಹೆಚ್ಚಾಗುತ್ತಿದೆ. ಆದರೆ ನೇರ ತೆರಿಗೆ ಬಗ್ಗೆ ಮಿಶ್ರ ಮೌಲ್ಯಮಾಪನ ಇದೆ. ಕಳೆದ ಸೆಪ್ಟೆಂಬರ್ ನಲ್ಲಿ ಕಾರ್ಪೊರೇಟ್ ತೆರಿಗೆಯಲ್ಲಿ ಭಾರೀ ಕಡಿತ ಮಾಡಿದೆವು. ಇದರಿಂದ ಕಾರ್ಪೊರೇಟ್ ತೆರಿಗೆ ಸಂಗ್ರಹದ ಮೇಲೆ ಪ್ರಭಾವ ಬೀರುತ್ತದೆ. ನೇರ ತೆರಿಗೆ ಆದಾಯದ ಮುಖ್ಯ ಪಾಲು ಬರುವುದು ಇದರಿಂದ. ಕೊರೊನಾ ಲಾಕ್ ಡೌನ್ ನಿಂದ ಆದಾಯ ತೆರಿಗೆಗೆ ಪೆಟ್ಟು ಬೀಳುತ್ತದೆ.
* ಮಾರುಕಟ್ಟೆ ಸ್ಥಿತಿ ಸುಧಾರಿಸಲು ಹಾಗೂ ಉದ್ಯೋಗ ಪ್ರಮಾಣ ಹೆಚ್ಚಲು "ವೋಕಲ್ ಫಾರ್ ಲೋಕಲ್" ಹಾಗೂ ಆತ್ಮನಿರ್ಭರ್ ಭಾರತ್ ಅಭಿಯಾನ ಬಹಳ ಮುಖ್ಯವಾದದ್ದು. ಸ್ಥಳೀಯ ಉತ್ಪನ್ನ ಹಾಗೂ ಉತ್ಪಾದಕರಿಗೆ ಸರ್ಕಾರ ಬೆಂಬಲ ನೀಡಿದಲ್ಲಿ ಅದರಿಂದ ದೀರ್ಘಾವಧಿಯಲ್ಲಿ ಅನುಕೂಲ ಆಗೇ ಆಗುತ್ತದೆ.
* ಇನ್ನು ಎರಡನೇ ಬಾರಿ ಉತ್ತೇಜನ ಪ್ಯಾಕೇಜ್ ಅನ್ನು ಸರ್ಕಾರದ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಗಳು ಕೇಳಿಬರುತ್ತಿವೆ. ಆರ್ಥಿಕತೆಯ ಎಲ್ಲ ವಲಯವನ್ನು ಗಮನಿಸುತ್ತಿದ್ದೇವೆ. ಹೆಚ್ಚಿನ ಬೆಂಬಲ ಅಗತ್ಯ ಇದ್ದಲ್ಲಿ ನೀಡುವುದಕ್ಕೆ ನಾನು ಸಿದ್ಧ. ಕೈಗಾರಿಕೆ ವಲಯದವರ ಜತೆಗೆ ನಿರಂತರ ಚರ್ಚೆ ನಡೆಸುತ್ತಿದ್ದೇವೆ. ನಮ್ಮ ಜತೆಗೆ ಸಂವಾದದ ವೇಳೆ, ಜನರ ಅಭಿಪ್ರಾಯದ ಪ್ರಕಾರ ಇನ್ನೊಂದು ಆರ್ಥಿಕ ಪ್ಯಾಕೇಜ್ ಬೇಕು ಎಂಬ ಅಭಿಪ್ರಾಯ ಬರುತ್ತಿದೆ.
* ಬೇಡಿಕೆ ಮತ್ತೆ ಬರಬೇಕು ಎಂಬ ಮಾತಿಗೆ ಉತ್ತರ ಹೇಳಬೇಕು ಅಂದರೆ, ಈ ವರೆಗೆ ನಾವು ಮಾಡಿದ್ದು ಪೂರೈಕೆ ಹಾಗೂ ಬೇಡಿಕೆ ಎಂಬ ಲೆಕ್ಕಾಚಾರದಲ್ಲಿ ಅಲ್ಲ. ಜನರು ಇಲ್ಲಿ ತನಕ ಏನು ನೋಡಿದರೂ ಅದು ಪೂರೈಕೆ ಕಡೆಯಿಂದ. ನಾನೀಗ ಬೇಡಿಕೆ ಕಡೆ ಹರಿಯುವುದನ್ನು ಸಹ ನೋಡುತ್ತಿದ್ದೇನೆ.
* ಅಮೆರಿಕ ಹಾಗೂ ಯು.ಕೆ.ಯನ್ನು ಹೋಲಿಸಿ ಮಾತನಾಡುತ್ತೀರಿ ಅನ್ನೋದಾದರೆ, ವಿವಿಧ ವಲಯಗಳಿಂದ ಅಲ್ಲಿನ ಅಗತ್ಯಗಳ ಬೇಡಿಕೆ ಬರುತ್ತಿದೆ. ಎಲ್ಲವನ್ನೂ ವಿಂಗಡಿಸಿ ಹೇಗೆ ನೀಡಬಹುದು ಅನ್ನೋದನ್ನು ನೋಡುತ್ತೇನೆ.
* ಚೀನಾದಿಂದ ಭಾರತಕ್ಕೆ ವ್ಯಾಪಾರ- ಉದ್ಯಮವನ್ನು ಸೆಳೆಯುವ ಪ್ರಯತ್ನ ಯಶಸ್ಸು ಕಾಣುತ್ತಿದೆ. ನವೆಂಬರ್ ನಿಂದ ಮಾರ್ಚ್ ಮಧ್ಯೆ ಸಾಕಷ್ಟು ಕಂಪೆನಿಗಳನ್ನು ಭೇಟಿ ಮಾಡಿದ್ದೇವೆ. ಅವರು ಭಾರತಕ್ಕೆ ಬರುವ ಸಾಧ್ಯತೆ ಇದೆ. ಜತೆಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹಧನದ ಬಗ್ಗೆ ಆಲೋಚಿಸುತ್ತಿದ್ದೇವೆ. ಮೊದಲಿಗೆ ಐಟಿ ಹಾಗೂ ಎಲೆಕ್ಟ್ರಾನಿಕ್ಸ್ ಗೆ ಜಾರಿ ಮಾಡುತ್ತೇವೆ. ಇತರ ಇಲಾಖೆಗಳು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವನ್ನು ನೋಡುತ್ತಿವೆ. ಆಯಾ ಇಲಾಖೆಗಳು ಬದಲಾವಣೆ ಮಾಡಿಕೊಳ್ಳುತ್ತವೆ.
* ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಭವಿಷ್ಯ ಇದೆ. ಹಾಗೂ ಅಲ್ಲಿ ದೊಡ್ಡ ಮಟ್ಟದ ಪ್ರೋತ್ಸಾಹವನ್ನು ಕಾಣುತ್ತಿದ್ದೇವೆ.
* ಈಗಿನ ಸವಾಲಿಗೆ ಹೆಲಿಕಾಪ್ಟರ್ ಮನಿಯಂಥ ಅಸಾಂಪ್ರಾದಾಯಿಕ ವಿಧಾನ ಅನುಸರಿಸುವ ಯಾವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಅಂಥವನ್ನು ಹೊರತುಪಡಿಸಿ ಬೇರೆ ಮಾರ್ಗಗಳಿವೆ.
* ವಿತ್ತೀಯ ಕೊರತೆ ಎಷ್ಟಾಗಬಹುದು, ನಾವು ಎಷ್ಟು ಸಾಲ ಮಾಡಬೇಕಾಗುತ್ತದೆ ಎಂದು ಈಗಾಗಲೇ ಲೆಕ್ಕಾಚಾರ ಇದೆ. ಅದು ನಮ್ಮ ಬಜೆಟ್ ಗಿಂತ ಬಹಳ ಬಹಳ ಜಾಸ್ತಿ ಇದೆ.
* ಇನ್ನು ಜಿಎಸ್ ಟಿ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ಸಭೆ ತನಕ ಕಾಯುತ್ತೇವೆ. ಈಗ ರಾಜ್ಯಗಳಿಗೆ ನೀಡಿದ ಆಯ್ಕೆಗಳನ್ನು ವಿವರಿಸಿದ್ದೇವೆ. ವಿಸ್ತೃತವಾದ ವಿವರಣೆಗಳನ್ನು ಕಳುಹಿಸಿದ್ದೇವೆ. ಆರ್ಥಿಕ ಹಾಗೂ ವೆಚ್ಚದ ಕಾರ್ಯದರ್ಶಿ ಜತೆ ಕೂತು ಈ ಬಗ್ಗೆ ಚರ್ಚೆ ನಡೆದಿದೆ.
* ಇನ್ನು ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕತೆಗೆ ಎಷ್ಟು ನಷ್ಟವಾಗಿದೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಈ ಬಿಕ್ಕಟ್ಟು ಸಂಪೂರ್ಣ ನಿವಾರಣೆ ಆಗಲಿ. ಆ ನಂತರ ಉತ್ತರ ನೀಡಬಹುದು.