ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್, ಸನ್ ನೆಕ್ಸ್ಟ್, ಝೀ5... ಒಟಿಟಿ ಪ್ಲಾಟ್ ಫಾರ್ಮ್ ಗಳ ಹೆಸರು ನಿಲ್ಲುವುದೇ ಇಲ್ಲ. ಹೊಸ ಸಿನಿಮಾಗಳೇ ತುಂಬ ಒಳ್ಳೆ ಗುಣಮಟ್ಟದಲ್ಲಿ ನೋಡಲು ಸಿಗುತ್ತವೆ. ಥಿಯೇಟರ್ ಗಳಿಗೆ ಹೋಗಿ ನೋಡುವುದಕ್ಕಿಂತ ಇವುಗಳ ಸಬ್ ಸ್ಕ್ರಿಪ್ಷನ್ ಬಲು ಅಗ್ಗ. ಇವುಗಳ ಕಾರಣಕ್ಕೇ ಸಿನಿಮಾಗಳ ಎಕನಾಮಿಕ್ಸ್ ಬದಲಾಗಿದೆ.
ವಿಶ್ವರೂಪಂ ಸಿನಿಮಾದ ಮೊದಲ ಭಾಗದ ಬಿಡುಗಡೆ ಸಮಯ ಅದು. ನಟ ಹಾಗೂ ಆ ಸಿನಿಮಾದ ನಿರ್ಮಾಪಕ ಕಮಲ್ ಹಾಸನ್ ವಿರುದ್ಧ ಚಿತ್ರ ಪ್ರದರ್ಶಕರು ಭಾರೀ ಸಿಟ್ಟಾಗಿದ್ದರು. ಅದಕ್ಕೆ ಕಾರಣವಾಗಿದ್ದು ಕಮಲ್ ನೀಡಿದ್ದ ಹೇಳಿಕೆ. ಸಿನಿಮಾವನ್ನು ನೇರವಾಗಿ ಟೀವಿಯ ಮೂಲಕವೇ ಜನರಿಗೆ ತಲುಪಿಸುತ್ತೇನೆ ಎಂದಿದ್ದರು. ಆ ಹೇಳಿಕೆಯಿಂದ ಚಿತ್ರಪ್ರದರ್ಶಕರು ಕನಲಿ ಕೆಂಡವಾಗಿದ್ದರು.
ಆದರೆ, ಕಮಲ್ ಹಾಸನ್ ಗೆ ತಮ್ಮ ಸಿನಿಮಾವನ್ನು ಮಾತಿನಂತೆ ಟೀವಿಯಲ್ಲೇ ಮೊದಲ ಪ್ರದರ್ಶನ ಮಾಡಲು ಆಗಲಿಲ್ಲ. "ಈ ಯಪ್ಪನಿಗೆ ಎಲ್ಲೋ ಹುಚ್ಚು, ಈಗ ಬಿಟ್ಟಿರಬೇಕು" ಎಂದು ಕೆಲವರು ಮಾತನಾಡಿಕೊಂಡರು. ಆದರೆ 7 ವರ್ಷ ಕಳೆದ ನಂತರ ಕಮಲ್ ಮಾತಿನ ಕಿಮ್ಮತ್ತು ಅರ್ಥವಾಗುತ್ತಿರುವಂತಿದೆ.
ಯಾವುದೇ ಸ್ಟಾರ್ ನಟರ ಸಿನಿಮಾ ಬಿಡುಗಡೆಯಾದ ಐವತ್ತು ದಿನದೊಳಗಾಗಿ ಒಟಿಟಿ (ಓವರ್ ದ ಟಾಪ್) ಮೂಲಕ ಟೀವಿ, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ ಟಾಪ್- ಕಂಪ್ಯೂಟರ್ ಮೂಲಕ ನೋಡಲು ಸಾಧ್ಯವಾಗುತ್ತಿದೆ. ಅದಕ್ಕೆ ಈಚಿನ ಉದಾಹರಣೆ ಅಂದರೆ ಬಹುಭಾಷೆಯಲ್ಲಿ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರ ಅವನೇ ಶ್ರೀಮನ್ ನಾರಾಯಣ, ರಜನಿ ಅಭಿನಯದ ದರ್ಬಾರ್, ಅಲ್ಲು ಅರ್ಜುನ್ ರ ಅಲಾ ವೈಕುಂಠಪುರಂಲೋ ಹಾಗೂ ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು.
ಹೊಸ ಸಿನಿಮಾಗಳೇ ಬಂದಿವೆ
2020ರ ಜನವರಿ 9ಕ್ಕೆ ಬಿಡುಗಡೆಯಾದ ದರ್ಬಾರ್, 11ರ ಸರಿಲೇರು ನೀಕೆವ್ವರು ಹಾಗೂ 12ನೇ ತಾರೀಕು ತೆರೆ ಕಂಡ ಅಲಾ ವೈಕುಂಠಪುರಂಲೋ ಮತ್ತು ಡಿಸೆಂಬರ್ 27, 2019ಕ್ಕೆ ಜನರ ಮುಂದೆ ಬಂದ ಅವನೇ ಶ್ರೀಮನ್ ನಾರಾಯಣ ಸಿನಿಮಾಗಳು ಒಟಿಟಿಗಳಾದ ಅಮೆಜಾನ್ ಪ್ರೈಮ್ ಹಾಗೂ ನೆಟ್ ಫ್ಲಿಕ್ಸ್ ನಲ್ಲಿ ಬಂದಾಗಿದೆ. ಇಂಟರ್ ನೆಟ್ ಮೂಲಕ ನೋಡುವ ವಿಡಿಯೋ ಮತ್ತು ಸೀರೀಸ್, ಧಾರಾವಾಹಿ ವ್ಯವಸ್ಥೆಗೆ ಒಟಿಟಿ ಅಂತ ಹೆಸರು. ತುಂಬ ಒಳ್ಳೆ ಮೊತ್ತ ನೀಡಿ, ಸಿನಿಮಾಗಳನ್ನು ಖರೀದಿ ಮಾಡಲಾಗುತ್ತದೆ. ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರೂ ಇವುಗಳಿಗೆ ಇದ್ದಾರೆ. ಹೇಗೋ ಸಿನಿಮಾ ಒಳ್ಳೆ ಬೆಲೆಗೆ ಖರೀದಿಯಾದರೆ ನಿರ್ಮಾಪಕರು ಉಳಿದುಕೊಳ್ಳುತ್ತಾರೆ. ದುಡ್ಡು ಹಾಕುವ ನಿರ್ಮಾಪಕರೇ ಉಳಿದರೆ ಇನ್ನಷ್ಟು ಕಲಾವಿದರು, ನಿರ್ದೇಶಕರು ಹಾಗೂ ತಂತ್ರಜ್ಞರಿಗೆ ಕೆಲಸ ಸಿಕ್ಕಂತೆ ಆಗುತ್ತದೆ. ಆದ್ದರಿಂದ ಈಗ ಟೀವಿಯ ಸ್ಯಾಟಲೈಟ್ ಹಕ್ಕನ್ನು ಮೀರಿ ಒಟಿಟಿಗೆ ಮಾರಾಟ ಮಾಡುವ ಮೂಲಕ ಬರುವ ಹಣಕ್ಕೆ ನಿರ್ಮಾಪಕರು ಎದುರು ನೋಡುತ್ತಾರೆ.
ಈಗೆಲ್ಲ ಎರಡು ವಾರ ನೆಪಕ್ಕೆ ಥಿಯೇಟರ್ ನಲ್ಲಿ ಸಿನಿಮಾ ಓಡುತ್ತವೆ
ಈ ಹಿಂದೆಲ್ಲ ಒಂದು ಸಿನಿಮಾ ಐವತ್ತು ದಿನ ಓಡಿತು, ನೂರು ದಿನ ಹಾಗೂ ಒಂದು ವರ್ಷ ಅಂತೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಈಗೆಲ್ಲ ಎರಡು ವಾರ ನೆಪಕ್ಕೆ ಚಿತ್ರಮಂದಿರದಲ್ಲಿ ಸಿನಿಮಾ ಓಡುತ್ತದೆ. ಆ ನಂತರ ಒಟಿಟಿ, ಟೀವಿ ಚಾನೆಲ್ ಗಳಲ್ಲೇ ಪ್ರಸಾರವಾಗುತ್ತಿದೆ. ಕನ್ನಡದ ಕೆಜಿಎಫ್, ಪೈಲ್ವಾನ್, ಒಡೆಯ, ಯಜಮಾನ ಸಿನಿಮಾಗಳೂ ಹಾಗೇ ಆದವು. ಬಿಡುಗಡೆಯಾದ ಬಹಳ ಕಡಿಮೆ ಸಮಯದಲ್ಲಿ ಒಟಿಟಿಗಳಿಗೆ ಬಂದವು. ಈ ಹಿಂದೆಲ್ಲ ಆಡಿಯೋ ಹಕ್ಕುಗಳ ಬಗ್ಗೆಯೂ ಅಂಥದ್ದೇ ನಿರೀಕ್ಷೆ ಇತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾಗೂ ತಂತ್ರಜ್ಞಾನದಿಂದ ಈಗೆಲ್ಲ ಆಡಿಯೋ ಸಿ.ಡಿ., ಕ್ಯಾಸೆಟ್ ಇವೆಲ್ಲ ನಾಪತ್ತೆಯಾಗಿವೆ. ಅದು ಕೂಡ ಮ್ಯೂಸಿಕ್ ಆಪ್ ಗಳು, ಯೂಟ್ಯೂಬ್ ನಲ್ಲೇ ದೊರೆಯುತ್ತಿವೆ. ಹಾಗಂತ ಆಡಿಯೋ ಮೂಲಕ ಹಣ ಬರುತ್ತಿಲ್ಲವಾ ಅಂದರೆ, ಹಾಗಲ್ಲ. ಹಣ ಬರುವ ರೀತಿ ಅಥವಾ ಮಾರ್ಗ ಬದಲಾಗಿದೆ.
ಓಂ ಸಿನಿಮಾದ ದಾಖಲೆ
ಶಿವರಾಜ್ ಕುಮಾರ್ ಅಭಿನಯದ, ಪಾರ್ವತಮ್ಮ ಅವರು ನಿರ್ಮಿಸಿದ್ದ ಓಂ ಸಿನಿಮಾ ದಶಕಕ್ಕೂ ಹೆಚ್ಚು ಕಾಲ ವಿಸಿಡಿಯೋ ಅಥವಾ ಡಿವಿಡಿಯೋ ಬಂದಿರಲಿಲ್ಲ. ಟೀವಿ ಚಾನೆಲ್ ಗಳಲ್ಲಿ ಪ್ರದರ್ಶನವಾಗಿರಲಿಲ್ಲ ಎಂಬ ದಾಖಲೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಹೊಸದಾಗಿ ಸಿನಿಮಾ ನಿರ್ಮಾಣಕ್ಕೆ ಬರುವವರು ಸಿನಿಮಾಗೆ ಹಣ ಹೂಡುವ ಮುನ್ನವೇ ವಾಪಸ್ ಹೇಗೆ ದುಡ್ಡು ಪಡೆಯುವುದು ಎಂಬುದನ್ನು ಲೆಕ್ಕ ಹಾಕಿಕೊಳ್ಳಲೇ ಬೇಕಿದೆ. ಮುಖ್ಯವಾಗಿ ಒಟಿಟಿ ಮಾರಾಟ ಅತಿ ಮುಖ್ಯವಾಗಿದೆ. ನೂರಾರು ಕೋಟಿ ರುಪಾಯಿ ಹಣ ಮಾಡಿದ ಸಿನಿಮಾ ಎಂದು ಹೇಳಿಕೊಳ್ಳುವಂಥವೇ ಐವತ್ತು ದಿನದೊಳಗೆ ಒಟಿಟಿ ಹಾಗೂ ಟೀವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ. ಈಗ ವೀಕ್ಷಕರು ಸಹ ಮನೆಗಳಲ್ಲೇ ಹೋಮ್ ಥಿಯೇಟರ್ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಪ್ರೊಜೆಕ್ಟರ್ ಗಳನ್ನೇ ಖರೀದಿಸುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಿನಿಮಾ ನಿರ್ಮಾಣದ ಎಕನಾಮಿಕ್ಸ್ ಬದಲಾಗಬೇಕಿದೆ.
ಸಿನಿಮಾ ನೋಡುವ ಅನುಭವವೇ ಬದಲು
ತಮಿಳುರಾಕರ್ಸ್ ನಂಥವು ಸಿನಿಮಾಗಳು ಬಿಡುಗಡೆಯಾದ ದಿನವೇ ಅವುಗಳನ್ನು ಕಾನೂನುಬಾಹಿರವಾಗಿ ನಕಲು ಮಾಡಿ, ಬಿಡುಗಡೆ ಮಾಡುತ್ತಿವೆ. ಆದರೆ ಈಗ ತುಂಬ ಒಳ್ಳೆ ಗುಣಮಟ್ಟದ ಪ್ರಿಂಟ್ ಒಟಿಟಿಗಳಲ್ಲೇ ಸಿಗುವುದರಿಂದ ಮತ್ತು ಹೆಚ್ಚು ಕಾಲ ಕಾಯುವ ಅಗತ್ಯ ಇಲ್ಲದಿರುವುದರಿಂದ ವೀಕ್ಷಕರ ಸಿನಿಮಾ ವೀಕ್ಷಣೆ ಆದ್ಯತೆಗಳು ಬದಲಾಗುತ್ತಿವೆ. ಈಗಾಗಲೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಒಡೆದು, ಮಲ್ಟಿಪ್ಲೆಕ್ಸ್ ಗಳು ತಲೆ ಎತ್ತುತ್ತಿವೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ರಿಲಯನ್ಸ್ ಜಿಯೋದಿಂದ ಪ್ರಸ್ತಾವ ಮಾಡಿರುವ ಯೋಜನೆ ಪ್ರಕಾರ, ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಅದನ್ನು ಮನೆಯಲ್ಲಿ ಕೂತು ಕುಟುಂಬದ ಜತೆಗೆ ನೋಡುವ ಅವಕಾಶ ಮಾಡಿಕೊಡುವುದಕ್ಕೆ ಹೊರಟಿದೆ. ಅಲ್ಲಿಗೆ ಸಿನಿಮಾ ಎಕನಾಮಿಕ್ಸ್, ಬಿಜಿನೆಸ್ ಎಲ್ಲವೂ ಬದಲಾಗಲಿದೆ. ಮೊದಲ ಸಿನಿಮಾ ನೋಡುವಾಗ ಅದರೊಳಗೆ ಬರುವ ಚಿತ್ರಗಳನ್ನು ನೋಡಿ ಜನ ಹೆದರಿ ಓಡಿಹೋಗಿದ್ದರಂತೆ. ಹೀಗೆ ಮಾತನಾಡಿಕೊಳ್ಳುವ ಕಾಲ ಇದು. ಇನ್ನು ಕೆಲ ವರ್ಷಗಳ ನಂತರ, ಸಿನಿಮಾ ನೋಡುವುದಕ್ಕೆ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಿಗೆ ಹೋಗುತ್ತಿದ್ದರಂತೆ ಎಂದು ಮಾತನಾಡಿಕೊಳ್ಳುವಂತೆ ಆಗಬಹುದಾ? ನೀವೇನಂತೀರಿ?
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications