ಚಂಡೀಗಢ ಮೂಲದ ಮುಖ್ಯ ವಕೀಲರೊಬ್ಬರ ಮೇಲೆ ತೆರಿಗೆ ತಪ್ಪಿಸಿದ ಆರೋಪ ಬಂದಿದೆ. ಅದು ಎಷ್ಟು ಮೊತ್ತಕ್ಕೆ ಗೊತ್ತಾ? ಈ ವಕೀಲರು ಕನಿಷ್ಠ 217 ಕೋಟಿ ರುಪಾಯಿಯನ್ನು ತನ್ನ ಕಕ್ಷೀದಾರರಿಂದ ನಗದಿನಲ್ಲಿ ಪಡೆದಿದ್ದಾರೆ ಮತ್ತು ತೆರಿಗೆಯನ್ನು ಕಟ್ಟಿಲ್ಲ ಎಂಬುದು ಅವರ ಮೇಲಿನ ಆರೋಪ. ಈ ಬಗ್ಗೆ ಗುರುವಾರ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ಈ ವಕೀಲರಿಗೆ ಸಂಬಂಧಿಸಿದಂತೆ ಹರ್ಯಾಣ, ದೆಹಲಿ, ನ್ಯಾಷನಲ್ ಕ್ಯಾಪಿಟಲ್ ರೀಜಿಯನ್ (ಎನ್ ಸಿಆರ್)ನಲ್ಲಿ 37 ಕಡೆ ದಾಳಿ ನಡೆಸಲಾಗಿದೆ. ಶೋಧ ಕಾರ್ಯಾಚರಣೆ ವೇಳೆ 5.5 ಕೋಟಿ ನಗದು ದೊರೆತಿದೆ. ಈ ವಕೀಲರು ವಾಣಿಜ್ಯ ಮಧ್ಯಸ್ಥಿಕೆ ಹಾಗೂ ಪರ್ಯಾಯ ವ್ಯಾಜ್ಯ ಸಂಧಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಬ್ಯಾಂಕ್ ಲಾಕರ್ ಬಳಸದಂತೆ ನಿರ್ಬಂಧ ಹೇರಲಾಗಿದೆ. ವ್ಯಾಜ್ಯಗಳನ್ನು ಬಗೆಹರಿಸಲು ಆ ವಕೀಲರು ತನ್ನ ಕಕ್ಷೀದಾರರಿಂದ ನಗದು ರೂಪದಲ್ಲಿ ಮೊತ್ತವನ್ನು ಪಡೆಯುತ್ತಿದ್ದರು. ಲೆಕ್ಕಕ್ಕೆ ತೋರಿಸದ ನಗದು ವ್ಯವಹಾರಗಳು ಹಾಗೂ ಹೂಡಿಕೆಗಳನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.

ಸಿಬಿಡಿಟಿ ಹೇಳಿರುವ ಪ್ರಕಾರ, ಒಂದು ಪ್ರಕರಣದಲ್ಲಿ ಕಕ್ಷೀದಾರರಿಂದ 117 ಕೋಟಿ ರುಪಾಯಿ ನಗದು ಪಡೆದಿದ್ದು, ಆ ಪೈಕಿ ಚೆಕ್ ನಲ್ಲಿ ಪಡೆದ 21 ಕೋಟಿ ರುಪಾಯಿ ಮಾತ್ರ ಲೆಕ್ಕ ತೋರಿಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ಕಂಪೆನಿಯೊಂದರಿಂದ ಪಿಎಸ್ ಯು ಕಂಪೆನಿ ಜತೆಗಿನ ಮಧ್ಯಸ್ಥಿಕೆ ಕಲಾಪಕ್ಕೆ 100 ಕೋಟಿಗೂ ಹೆಚ್ಚು ನಗದು ಪಡೆದಿರುವುದಾಗಿ ಸಿಬಿಡಿಟಿ ಹೇಳಿದೆ.
ಹೀಗೆ ತೆರಿಗೆಯ ಲೆಕ್ಕಕ್ಕೆ ನೀಡದ ಮೊತ್ತವನ್ನು ವಸತಿ ಹಾಗೂ ವಾಣಿಜ್ಯ ಆಸ್ತಿಗಳ ಖರೀದಿಗಾಗಿ ಹೂಡಿಕೆ ಮಾಡಲಾಗಿದೆ. ಇದರ ಜತೆಗೆ ಶಾಲೆಗಳನ್ನು ನಡೆಸುವ ಟ್ರಸ್ಟ್ ಗಳನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಈಗ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿರುವುದರಿಂದ ಗೊತ್ತಾಗಿರುವುದೇನೆಂದರೆ, 100 ಕೋಟಿಗೂ ಹೆಚ್ಚು ನಗದನ್ನು ವಿಲಾಸಿ ಬಡಾವಣೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಆ ವಕೀಲ ಹಾಗೂ ಆತನ ಸಹಚರರು ಹಲವ್ಯ್ ಶಾಲೆಗಳು ಹಾಗೂ ಆಸ್ತಿಗಳನ್ನು ಖರೀದಿಸಿದ್ದಾರೆ. ಅವುಗಳೆಲ್ಲಕ್ಕೂ ನಗದಿನ ಮೂಲಕವೇ ಪಾವತಿ ಮಾಡಿದ್ದಾರೆ. ಇದರ ಜತೆಗೆ ಹವಾಲಾ ವ್ಯವಹಾರದ ಮೂಲಕವೂ ಕೋಟ್ಯಂತರ ರುಪಾಯಿ ಪಡೆದಿರುವುದಾಗಿ ಹೇಳಲಾಗುತ್ತಿದೆ.


Click it and Unblock the Notifications