ಬಜೆಟ್ 2022: ಚಿನ್ನದ ಮೇಲಿನ ಆಮದು ತೆರಿಗೆ ತೆಗೆದರೆ ಜನರಿಗೆ ಏನು ಲಾಭ?
ನವದೆಹಲಿ, ಜನವರಿ 28: ಭಾರತದಲ್ಲಿ ಚಿನ್ನದ ಕಳ್ಳಸಾಗಣೆ ನಿಯಂತ್ರಿಸುವ ನಿಟ್ಟಿನಲ್ಲಿ ಆಮದು ಸುಂಕ ಕಡಿತಗೊಳಿಸುವ ಒತ್ತಾಯ ಕೇಳಿ ಬಂದಿದೆ. ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಚೀನಾ, ಯುಎಸ್ಎ ಮತ್ತು ಸಿಂಗಾಪುರದಂತಹ ದೇಶಗಳು ಚಿನ್ನದ ಮೇಲಿನ ಆಮದು ಸುಂಕವನ್ನು ತೆಗೆದುಹಾಕಿವೆ. ಅದೇ ರೀತಿ ಮುಂಬರುವ ಕೇಂದ್ರ ಬಜೆಟ್ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.7.5 ರಿಂದ ಶೇ.4ಕ್ಕೆ ಇಳಿಸಬೇಕು ಎಂದು ದೇಶದ ಪ್ರಮುಖ ಆಭರಣ ವ್ಯಾಪಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022ರ ಬಜೆಟ್ನಲ್ಲಿ ಚಿನ್ನದ ಆಮದು ಸುಂಕವನ್ನು ಕಡಿತಗೊಳಿಸಲು ಆದ್ಯತೆ ನೀಡಬೇಕು. ಶೇ.7.5% ಕಸ್ಟಮ್ಸ್ ತೆರಿಗೆಯನ್ನು ವಿಧಿಸುವುದರಿಂದ ಚಿನ್ನದ ಆಮದಿನ ಮೇಲಿನ ಒಟ್ಟು ಶೇ.10.75% ಲೆವಿಯನ್ನು ನಿಗದಿಪಡಿಸಿದಂತೆ ಆಗುತ್ತದೆ. ಇದರಿಂದ ಚಿನ್ನದ ಕಳ್ಳಸಾಗಣೆ ಹೆಚ್ಚಾಗುತ್ತದೆ," ಎಂದು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅಧ್ಯಕ್ಷ ಅಹಮ್ಮದ್ ಎಂಪಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2022: ಓಮಿಕ್ರಾನ್ ಭೀತಿಯ ನಡುವೆ ಈ ವರ್ಷ 'ಹಲ್ವಾ ಸಮಾರಂಭ' ರದ್ದು
ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.4ಕ್ಕೆ ಇಳಿಸುವುದು ಮತ್ತು ಚಿನ್ನದ ಮೇಲಿನ ಎಲ್ಲಾ ಸುಂಕಗಳನ್ನು ತೆಗೆದುಹಾಕುವುದರಿಂದ ವ್ಯಾಪಾರದಲ್ಲಿ ಪಾರದರ್ಶಕತೆ ಮೂಡುತ್ತದೆ. ಚಿನ್ನದ ಕಳ್ಳಸಾಗಣೆ ತಡೆಯಲು ಸಾಧ್ಯವಾಗುತ್ತದೆ. ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಚಿನ್ನದ ಮೇಲಿನ ಆಮದು ಸುಂಕವನ್ನು ರದ್ದುಪಡಿಸಿದ ಚೀನಾ, ಯುಎಸ್ಎ, ಸಿಂಗಾಪುರ್ ಮತ್ತು ಮಲೇಷ್ಯಾದಂತಹ ದೇಶಗಳ ಕ್ರಮಗಳನ್ನು ಸರ್ಕಾರ ಅನುಕರಿಸಬೇಕು," ಎಂದು ಅಹಮ್ಮದ್ ಸಲಹೆ ನೀಡಿದ್ದಾರೆ.
ಬಂಗಾರದ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲು ತೆರಿಗೆ ವಿನಾಯಿತಿ
ಸರ್ಕಾರಗಳು ನಡೆಸುವ ಶೋಧ ಕಾರ್ಯ ಮತ್ತು ಕಾರ್ಯಾಚರಣೆಗಳಿಂದ ಚಿನ್ನದ ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆಯಲ್ಲಿ ಚಿನ್ನದ ಕಳ್ಳ ಸಾಗಾಣಿಕೆಯನ್ನು ಅವ್ಯಾಹಕವಾಗಿ ನಡೆಸಲಾಗುತ್ತದೆ. ದೇಶದಲ್ಲಿ ವಶಕ್ಕೆ ಪಡೆದ ಕಳ್ಳ ಸಾಗಾಣಿಕೆಯ ಚಿನ್ನದ ಪ್ರಮಾಣಕ್ಕಿಂತ ಅತಿಹೆಚ್ಚು ಪ್ರಮಾಣದಲ್ಲಿ ಚಿನ್ನವು ಕಳ್ಳ ಸಾಗಾಣಿಕೆ ಆಗುತ್ತದೆ.
ಸರ್ಕಾರವು ಹಾಲ್ಮಾರ್ಕ್ ವಿಶಿಷ್ಟ ಗುರುತಿಸುವಿಕೆ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಶೇ.100ರಷ್ಟು ತೆರಿಗೆ ಅನುಸರಣೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಇದರಿಂದ ತೆರಿಗೆ ವಂಚನೆಗೆ ಕಡಿವಾಣ ಬೀಳುವುದರ ಜೊತೆಗೆ ಹೆಚ್ಚು ಸಂಘಟಿತ ಮತ್ತು ಗ್ರಾಹಕ ಸ್ನೇಹಿ ವ್ಯಾಪಾರಕ್ಕೆ ಹಾದಿ ಕಲ್ಪಿಸುತ್ತದೆ. ಉದ್ಯೋಗ ಅವಕಾಶ ಹೆಚ್ಚುವುದರ ಜೊತೆ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗುತ್ತದೆ, ವಿದೇಶೀ ವಿನಿಮಯದಲ್ಲಿ ಹೆಚ್ಚಿನ ರಫ್ತು ಮತ್ತು ಆಮದು ಸುಧಾರಣೆಯು ಆದಾಯವನ್ನು ಹೆಚ್ಚಿಸುತ್ತದೆ ಎಂದು ಸಲಹೆ ನೀಡಿದ್ದಾರೆ.
ಬಡವರು ಚಿನ್ನ ಖರೀದಿಸಬೇಕಾದರೆ ತೆರಿಗೆ ಕಡಿತ ಅಗತ್ಯ
"ಚಿನ್ನದ ಮೇಲೆ ಹೆಚ್ಚಿನ ಆಮದು ತುಂಕವನ್ನು ವಿಧಿಸುವುದರಿಂದ ಚಿನ್ನವು ದುಬಾರಿ ಆಗುತ್ತದೆ. ಬಡ ಕುಟುಂಬದವರು ಇದರಿಂದ ಚಿನ್ನ ಖರೀದಿಸುವುದು ಮತ್ತಷ್ಟು ಕಷ್ಟಕರವಾಗಲಿದೆ. ಚಿನ್ನದ ಮೇಲಿನ ಸುಂಕ ಕಡಿತದ ಬಗ್ಗೆ ಪ್ರಸ್ತಾಪಿಸುವುದು, ಆ ಮೂಲಕ ಚಿನ್ನದ ವ್ಯಾಪಾರ ಮತ್ತು ಬಳಕೆ ಎರಡನ್ನೂ ಸುಲಭ ಹಾಗೂ ನ್ಯಾಯಯುತಗೊಳಿಸುವುದು ಅಗತ್ಯವಾಗಿದೆ. ಸಾರ್ವಜನಿಕವಾಗಿ ವಿಧಿಸುವ ತೆರಿಗೆಗಳಲ್ಲಿ ಕಡಿತವನ್ನು ಮಾಡುವುದರ ಮೂಲಕ ಜನರು ಹೆಚ್ಚು ಹೆಚ್ಚು ಹಣವನ್ನು ಖರ್ಚು ಮಾಡುವುದಕ್ಕೆ ಅವಕಾಶ ನೀಡಬೇಕು. ಇದರಿಂದ ಆರ್ಥಿಕತೆಗೆ ಉತ್ತೇಜನ ನೀಡಿದಂತೆ ಆಗುತ್ತದೆ," ಪಿಪಿ ಜ್ಯುವೆಲರ್ಸ್ ನಿರ್ದೇಶಕ ಪವನ್ ಗುಪ್ತಾ ಹೇಳಿದ್ದಾರೆ.
ಬಂಗಾರದ ಮೇಲೆ ಜಿಎಸ್ ಟಿ ಕಡಿತದ ನಿರೀಕ್ಷೆ
"ಮುಂಬರುವ ಬಜೆಟ್ ಆಮದು ಸುಂಕದ ಮೇಲೆ ಕಡಿತ ಮತ್ತು ಚಿನ್ನದ ಮೇಲಿನ ಜಿಎಸ್ಟಿಯ ಕಡಿತವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಅನ್ಮೋಲ್ ಜ್ಯುವೆಲರ್ಸ್ ಸಂಸ್ಥಾಪಕ ಇಶು ದಾಟ್ಟಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಭರಣಗಳನ್ನು ಖರೀದಿಸಲು ಪ್ಯಾನ್ ಕಾರ್ಡ್ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು. ಬ್ಯಾಂಕ್ಗಳಲ್ಲಿನ ಸ್ವತ್ತು ಮರುಸ್ವಾಧೀನ ಶುಲ್ಕವನ್ನು ತೆಗೆದುಹಾಕಬಹುದು. ಲೆವೆಲ್ ಪ್ಲೇಯಿಂಗ್ ಫೀಲ್ಡ್ ಅನ್ನು ರಚಿಸಲು MCX ವ್ಯಾಪಾರದ ಮೇಲೆ GST ಯ ಪರಿಚಯವೂ ಇರಬೇಕು. ಈ ಬಾರಿ ಸರ್ಕಾರವು ಅತ್ಯಂತ ಜನಸ್ನೇಹಿ ಬಜೆಟ್ ಅನ್ನು ಮಂಡಿಸಲಿದ್ದು, ಆರ್ಥಿಕತೆಗೆ ಹೆಚ್ಚು ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ನಾಲ್ಕನೇ ಬಜೆಡ್ ಮೇಲೆ ಅಪಾರ ನಿರೀಕ್ಷೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನವನ್ನು ಪ್ರಾರಂಭಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತದೆ, ದ್ವಿತೀಯಾರ್ಧವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಸಂಸತ್ತಿನ ಕೆಳಮನೆ ಎನಿಸಿರುವ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.