'ಇನ್ಮುಂದೆ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಬೆಳೆಸಲು ಕ್ರಮ'
ಕೋಲಾರ: ಕರ್ನಾಟಕ ರಾಜ್ಯವನ್ನು ನಂ 1 ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶುಕ್ರವಾರ ಕೋಲಾರ ಜಿಲ್ಲೆಯ ವೇಮಗಲ್ ಹಾಗೂ ನರಸಾಪೂರ ಕೈಗಾರಿಕಾ ಪ್ರದೇಶಗಳಿಗೆ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದರು.
ದೇಶದ 8 ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಏಪ್ರಿಲ್ನಲ್ಲಿ 38.1 % ರಷ್ಟು ಕುಸಿತ
ಕೋಲಾರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಇದೆ. ಚೈನ್ನೈ ಬೆಂಗಳೂರು ಕೈಗಾರಿಕಾ ಎಕ್ಸ್ಪ್ರೆಸ್ ಕಾರಿಡಾರ್ ನ ಕೇಂದ್ರಬಿಂದುವಾಗುವ ಎಲ್ಲಾ ಲಕ್ಷಣಗಳು ಇವೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಇಲ್ಲಿನ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.
ಎರಡನೇ ಹಂತದ ನಗರಗಳ ಅಭಿವೃದ್ದಿ
ಬೆಂಗಳೂರು ಜಿಲ್ಲೆಯ ಮೇಲೆ ಬಹಳಷ್ಟು ಒತ್ತಡವಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸೆಳೆಯಲು ಕಾರ್ಯಪ್ರವೃತ್ತವಾಗಿದೆ. ಕೋಲಾರ, ಮೈಸೂರು, ತುಮಕೂರು, ಹುಬ್ಬಳ್ಳಿ- ಧಾರವಾಡ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವ್ಯಾಪಕವಾದ ಅವಕಾಶವಿದ್ದು, ಇದನ್ನು ಪ್ರಚುರ ಪಡಿಸುವತ್ತ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.
ಕೈಗಾರಿಕಾ ಅಭಿವೃದ್ದಿಯಲ್ಲಿ ಕರ್ನಾಟಕ ಮುಂದು
ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ದಿಯಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದು. ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಹೊಸ ಸರಕಾರ ಬಂದ ನಂತರ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಒತ್ತು ನೀಡಲಾಗಿದ್ದು, ದೇಶದಲ್ಲಿ ನಂ 1 ಸ್ಥಾನವನ್ನು ಪಡೆದುಕೊಳ್ಳುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
3 ಹಂತದಲ್ಲಿ ಅಭಿವೃದ್ದಿಯಾಗಿದೆ
ಟಮಕು, ಬಂಗಾರಪೇಟೆ, ನರಸಾಪೂರ, ಜಕ್ಕಸಂದ್ರ, ವೇಮಗಲ್, ಮಾಲೂರು 3 ಹಂತದಲ್ಲಿ ಅಭಿವೃದ್ದಿಯಾಗಿದೆ. ಕೈಗಾರಿಕಾ ವಸಹಾತುಗಳಾದ ಕ್ಯಾಲ್ನೂರು, ಕೋಲಾರ, ಮುಳಬಾಗಿಲು, ಕೆಜಿಎಫ್ ಹಾಗೂ ಮಾಲೂರುಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಮಾಡುವುದು ನಮ್ಮ ಉದ್ದೇಶವಾಗಿದೆ. ದೇವರಾಯಸಮುದ್ರ, ವೇಮಗಲ್ ಎರಡನೇ ಹಂತ, ನರಸಾಪೂರ ಎರಡನೇ ಹಂತ, ಬಿಜಿಎಂಎಲ್ ನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಾಡುವ ಯೋಜನೆ ಇದೆ. ಚೆನ್ನೈ ಇಂದ ಕೋಲಾರ ವರಗೆ ಕಾರಿಡಾರ್ ಆಗಿರುವುದರಿಂದ ಇಲ್ಲಿ ಇನ್ನೂ ಹೆಚ್ಚಿನ ಕೈಗಾರಿಕೆಗಳು ಬರಲಿವೆ ಎಂದರು.
ಶೇಕಡಾ 90 ರಷ್ಟು ಕೈಗಾರಿಕೆಗಳು ಕಾರ್ಯಪ್ರವೃತ್ತ
ಕರೋನಾ ಸಂಕಷ್ಟ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕರೋನಾ ಮಹಾಮಾರಿಯನ್ನು ಹರಡದಂತೆ ತಡಿಯುವಲ್ಲಿ ಸಫಲವಾಗಿದೆ. ಈ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಂತೆ ಕೈಗಾರಿಕಾ ಕ್ಷೇತ್ರವೂ ಕೂಡಾ ತೊಂದರೆಗೀಡಾಗಿತ್ತು. ನಮ್ಮ ರಾಜ್ಯ ಬೇರೆ ಎಲ್ಲಾ ರಾಜ್ಯಗಳಿಗಿಂತಲೂ ಬೇಗ ಕೈಗಾರಿಕೆಗಳನ್ನು ಪುನರಾರಂಭಿಸಲು ಅಗತ್ಯ ಕ್ರಮ ಕೈಗೋಂಡಿತ್ತು. ಇತ್ತೀಚಿನ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಶೇಕಡಾ 90 ಕೈಗಾರಿಕೆಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ಹೇಳಿದರು. ಚೈನಾ ದೇಶದಿಂದ ನಿರ್ಗಮಿಸಲು ಚಿಂತನೆ ನಡೆಸುತ್ತಿರುವ ಕಂಪನಿಗಳನ್ನು ಸೆಳೆಯಲು ಟಾಸ್ಕ್ ಫೋರ್ಸ್ ನ್ನು ರಚಿಸಲಾಗಿದ್ದು. ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಲ್ಲದೆ, ಭೂಸುಧಾರಣಾ ಕಾಯ್ದೆಯಲ್ಲಿ ಆಗಿರುವ ತಿದ್ದುಪಡಿಯಿಂದ ಕೈಗಾರಿಕೆಗಳು ಹೆಚ್ಚಿನ ಮಟ್ಟದಲ್ಲಿ ರಾಜ್ಯಕ್ಕೆ ಬರುವ ನಿರೀಕ್ಷೆ ಇದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.