ನಿರುದ್ಯೋಗ ನಿವಾರಣೆಗಾಗಿ ಮಹತ್ವದ ಕ್ರಮ ಕೈಗೊಂಡ ಒಡಿಶಾದ ಈ ಜಿಲ್ಲೆ
ಭುವನೇಶ್ವರ, ಜೂನ್ 5: ಕೊರೊನಾವೈರಸ್ ಹಾವಳಿಯಿಂದಾಗಿ ಲಕ್ಷಾಂತರ ಕಾರ್ಮಿಕರು ನಗರ ಪ್ರದೇಶಗಳಿಂದ ತಮ್ಮ ಹಳ್ಳಿಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಆದರೆ ಅವರಿಗೆ ಅಲ್ಲಿ ಉದ್ಯೋಗದ ಭರವಸೆ ಸಿಗುತ್ತಿಲ್ಲವಾದ್ದರಿಂದ ಅವರು ಮತ್ತೊಂದಿಷ್ಟು ಸಮಸ್ಯೆಗಳಿಗೆ ತೆರೆದುಕೊಳ್ಳುವ ಹಂತದಲ್ಲಿದ್ದಾರೆ.
ಗ್ರಾಮೀಣ ಜನರಿಗೆ ಉದ್ಯೋಗದ ಭರವಸೆ ನೀಡಲು ಚಾಲ್ತಿಗೆ ಬಂದಿರುವ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ನಗರದಿಂದ ಹಳ್ಳಿಗಳಿಗೆ ವಲಸೆ ಬಂದಿರುವವರಿಗೆ ಉದ್ಯೋಗ ನೀಡುತ್ತದೆಯಾದರೂ, ಕಡಿಮೆ ಕೂಲಿ ದರದಿಂದ ಹೆಚ್ಚಿನ ಜನ ಇದಕ್ಕೆ ಮನಸ್ಸು ಮಾಡುತ್ತಿಲ್ಲ.
ಕುವೈತ್ ಉದ್ಯೋಗದ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್
ಇದಕ್ಕೆ ಪರಿಹಾರ ಕಂಡು ಕೊಂಡಿರುವ ಒಡಿಶಾದ ಕೆಂಜಿಹಾರ್ (Keonjhar) ಜಿಲ್ಲೆಯ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಿರುದ್ಯೋಗ ನಿವಾರಿಸಲು ಹೆಚ್ಚಿನ ಕೂಲಿ ದರ (ಕನಿಷ್ಠ ವೇತನ) ನೀಡಿ, ಮನರೇಗಾ ಅಡಿ, ಹಳ್ಳಿಗಳಿಗೆ ವಲಸೆ ಬಂದರಿಗೆ ಉದ್ಯೋಗ ನೀಡಲು ಮುಂದಾಗಿದೆ.
ದೇಶದಲ್ಲೇ ಮೊದಲನೆಯದು
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ತೆಗೆದುಕೊಳ್ಳುವವರಿಗೆ ಹೆಚ್ಚಿನ ಕನಿಷ್ಠ ವೇತನವನ್ನು ನೀಡಲು ಮುಂದಾಗಿರುವ ಕೆಂಜಿಹಾರ್ ಜಿಲ್ಲೆ ದೇಶದಲ್ಲೇ ಮೊದಲನೆಯದು ಎನ್ನಲಾಗಿದೆ. ಕೆಂಜಿಹಾರ್ ಜಿಲ್ಲಾಡಳಿತ ಶುಕ್ರವಾರ ಈ ವಿಷಯವನ್ನು ಟ್ವಿಟ್ಟರ್ನಲ್ಲಿ ಬಹಿರಂಗಪಡಿಸಿದೆ.
ದಿನಕ್ಕೆ 298 ರುಪಾಯಿ ಪಡೆಯಲಿದ್ದಾರೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್ಇಜಿಎ) ಅಡಿಯಲ್ಲಿ ಕೆಲಸ ಮಾಡುವವರು ಈ ಯೋಜನೆಯಡಿ ನಿಗದಿತ 207 ರುಪಾಯಿ ಬದಲು ದಿನಕ್ಕೆ 298 ರುಪಾಯಿ ಪಡೆಯಲಿದ್ದಾರೆ ಎಂದು ಕೆಂಜಿಹಾರ್ ಜಿಲ್ಲಾಡಳಿತ ತಿಳಿಸಿದೆ. ಜಿಲ್ಲಾ ಖನಿಜ ನಿಧಿಯಿಂದ 95 ಕೋಟಿ ವೆಚ್ಚದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.
ಕನಿಷ್ಠ ವೇತನ ದರಕ್ಕಿಂತ ಕೆಳಗಿರುತ್ತದೆ
ಒಡಿಶಾದ ಗ್ರಾಮೀಣಾಭಿವೃದ್ಧಿ ಇಲಾಖೆ ಮಾಜಿ ಕಾರ್ಯದರ್ಶಿ ಎನ್.ಸಿ.ಸಕ್ಸೇನಾ ಎನ್ನುವರು, ''ಹೆಚ್ಚಿನ ಸಂದರ್ಭಗಳಲ್ಲಿ ಮನರೇಗಾ ವೇತನವು ರಾಜ್ಯದ ಕನಿಷ್ಠ ವೇತನ ದರಕ್ಕಿಂತ ಕೆಳಗಿರುತ್ತದೆ. ಅವರು ಬಯಸಿದರೆ ಹೆಚ್ಚಿನ ಹಣವನ್ನು ವೇತನವಾಗಿ ನೀಡಲು ರಾಜ್ಯ ಸರ್ಕಾರ ಮುಕ್ತವಾಗಿದೆ'' ಎನ್ನುತ್ತಾರೆ.
ಗ್ರಾಮೀಣಾಭಿವೃದ್ಧಿ ಹಿನ್ನೆಲೆಯಲ್ಲಿ ಉತ್ತಮ ಬೆಳವಣಿಗೆ
ಕಂಜಿಹಾರ್ ಜಿಲ್ಲಾಡಳಿ ಕ್ರಮವನ್ನು ಸ್ವಾಗತಿಸಿರುವ ಸಕ್ಸೇನಾ, ''ಕಡಿಮೆ ವೇತನದಲ್ಲಿ ಕೆಲಸ ಬಯಸುವ ಜನರಿಗೆ ಉದ್ಯೋಗವನ್ನು ನೀಡಲು ಸಾಧ್ಯವಾದರೆ ಇದರ ಫಲ ಉತ್ತಮವಾಗಿರುತ್ತದೆ. ಸಾಮಾನ್ಯ ಪ್ರದೇಶಗಳಲ್ಲಿ 100 ದಿನಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ 150 ದಿನಗಳು ಕೂಲಿ ನೀಡಬೇಕು. ಆದರೆ, ಮನರೇಗಾದಡಿ ಹಲವು ಕಡೆ ವರ್ಷದಲ್ಲಿ 30 ರಿಂದ 35 ದಿನಗಳು ಮಾತ್ರ ಕೆಲಸ ನೀಡಲಾಗುತ್ತದೆ. ಹೆಚ್ಚಿನ ಕನಿಷ್ಠ ವೇತನದಲ್ಲಿ ಕೆಲಸ ನೀಡುವುದು ಗ್ರಾಮೀಣಾಭಿವೃದ್ಧಿ ಹಿನ್ನೆಲೆಯಲ್ಲಿ ಉತ್ತಮ ಬೆಳವಣಿಗೆ'' ಎನ್ನುತ್ತಾರೆ ಸಕ್ಸೇನಾ.