ಕೇರಳ ರಾಜ್ಯದ ಸ್ವಂತ ಬ್ಯಾಂಕ್ ಶೀಘ್ರದಲ್ಲೇ ಸಾಕಾರ
ಕೇರಳ ಸರ್ಕಾರದ ಬಹು ಕಾಲದ ಕನಸು ನನಸಾಗಲಿದೆ. ರಾಜ್ಯದ ಸ್ವಂತ ಬ್ಯಾಂಕ್ ಆರಂಭಿಸಬೇಕು ಎಂದಿದ್ದ ಸರ್ಕಾರದ ಉದ್ದೇಶಕ್ಕೆ ಇದ್ದ ತಡೆ ನಿವಾರಣೆಯಾಗಿದೆ. ಜಿಲ್ಲಾ ಕೋ ಆಪರೇಟಿವ್ ಬ್ಯಾಂಕ್ ಗಳನ್ನೆಲ್ಲ ವಿಲೀನ ಮಾಡಿ, ಒಂದು ಬ್ಯಾಂಕ್ ಮಾಡುವ ಆಲೋಚನೆ ಸರ್ಕಾರಕ್ಕೆ ಇತ್ತು. ಆ ನಿರ್ಣಯ ವಿರುದ್ಧ ಹೈ ಕೋರ್ಟ್ ನಲ್ಲಿ ಅರ್ಜಿಗಳನ್ನು ಹಾಕಲಾಗಿತ್ತು. ಅದೀಗ ಕೋರ್ಟ್ ನಿಂದ ತಿರಸ್ಕರಿಸಲಾಗಿದೆ.
ಕೇರಳದ ಸಹಕಾರ ಸಚಿವ ಕದಕಂಪಲ್ಲಿ ಸುರೇಂದ್ರನ್ ಮಾತನಾಡಿ, ಬ್ಯಾಂಕ್ ಆರಂಭದಿಂದ ರಾಜ್ಯದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. "ಇದು ಕ್ರಾಂತಿಕಾರಿ ಹೆಜ್ಜೆ. ಇದರಿಂದ ಕೇರಳದ ಬ್ಯಾಂಕಿಂಗ್ ವಲಯದಲ್ಲಿ ಕ್ರಾಂತಿಕಾರಿ ಹೆಜ್ಜೆ ಆಗಲಿದೆ. ಇದು ಕೇರಳ ಬ್ಯಾಂಕ್. ಹೆಸರೇ ಹೇಳುವಂತೆ ಕೇರಳದ ಸ್ವಂತ ಬ್ಯಾಂಕ್" ಎಂದು ಸುರೇಂದ್ರನ್ ಟ್ವೀಟ್ ಮಾಡಿದ್ದಾರೆ.
ಎಲ್ಲವನ್ನೂ ಅಳೆದು- ತೂಗಿ ನೋಡಿದ ನಂತರ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಂದ ಹಾಗೆ, ಹದಿಮೂರು ಜಿಲ್ಲಾ ಕೋ ಆಪರೇಟಿವ್ ಬ್ಯಾಂಕ್ ಗಳನ್ನು (ಡಿಸಿಬಿಗಳು) ಕೇರಳ ರಾಜ್ಯ ಕೋ ಆಪರೇಟಿವ್ ಬ್ಯಾಂಕ್ ಜತೆ ವಿಲೀನ ಮಾಡಿ, ಕೇರಳ ಬ್ಯಾಂಕ್ ಸ್ಥಾಪಿಸಲು ಪ್ರಸ್ತಾಪ ಮಾಡಲಾಗಿದೆ.
ಮಾಧ್ಯಮದವರ ಜತೆ ಮಾತನಾಡಿದ ಸುರೇಂದ್ರನ್, ಬ್ಯಾಂಕ್ ಸ್ಥಾಪನೆಗೆ ಅಗತ್ಯ ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲಾ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಆಡಳಿತಗಾರರ ಆಡಳಿತ ಕೊನೆಯಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
ಕೇರಳ ರಾಜ್ಯದಲ್ಲೇ ಅತಿ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆಗೆ ಆರ್ ಬಿಐ ಒಪ್ಪಿಗೆ ನೀಡಿದೆ. ಸಹಕಾರ ವಲಯವನ್ನು ಬಲಪಡಿಸುವ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ. ಆದರೆ ವಿಪಕ್ಷಗಳು ಆರೋಪಿಸುವ ಪ್ರಕಾರ, ಸಾಂಪ್ರದಾಯಿಕ ಸಹಕಾರ ಕ್ಷೇತ್ರವನ್ನು ನಾಶಪಡಿಸುವ ಹುನ್ನಾರ ಎನ್ನಲಾಗಿದೆ.