ಲಾಕ್ಡೌನ್ ನಂತರ ರೈತರಿಗೆ ಅಚ್ಚರಿ ನೀಡಿದ ಟ್ರಾಕ್ಟರ್ ತಯಾರಕ ಕಂಪೆನಿಗಳು
ಮುಂಬೈ, ಜೂನ್ 9: ಕೊರೊನಾವೈರಸ್ ಲಾಕ್ಡೌನ್ ಸಂಭವಿಸಿ ಅನೇಕ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ಮರಳಿದ್ದಾರೆ. ಅವರಿಗೆ ಅಲ್ಲಿ ನಗರ ಪ್ರದೇಶಗಳ ರೀತಿ ಕೆಲಸಗಳು ಸಿಗುತ್ತಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ಕೃಷಿ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು.
ಈ ನಿಟ್ಟಿನಲ್ಲಿ ಟ್ಯಾಕ್ಟರ್ ಕಂಪೆನಿಗಳು ಹೆಚ್ಚುತ್ತಿರುವ, ಕೃಷಿ ಬೇಡಿಕೆಗಳನ್ನು ಸರಿ ದೂಗಿಸಲು ವಿನೂತನ ಪ್ರಯತ್ನಕ್ಕೆ ಮುಂದಾಗಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಕೃಷಿಕರಿಗೆ ಬಾಡಿಗೆ ಆಧಾರಿತವಾಗಿ ಟ್ರ್ಯಾಕ್ಟರ್ ಸೇರಿದಂತೆ ಅನೇಕ ಕೃಷಿ ಯಂತ್ರೋಪಕರಣಗಳನ್ನು ನೀಡಲು ಕೆಲ ಪ್ರತಿಷ್ಠಿತ ಕಂಪೆನಿಗಳು ಮುಂದಾಗಿವೆ ಎನ್ನಲಾಗಿದೆ.
ದೇಶದಲ್ಲಿ 65-70% ಜಿಲ್ಲೆಗಳು ಕೋವಿಡ್ -19 ಮುಕ್ತವಾಗದೇ ಉಳಿದಿವೆ. ಇದು ಕೃಷಿ ಚಟುವಟಿಕೆಗಳು ಹೆಚ್ಚಾಗುವ ಲಕ್ಷಣ ತೋರಿಸಿದೆ ಎನ್ನುತ್ತದೆ ವರದಿ. ಹೀಗಾಗಿ ಕೃಷಿ ಯಂತ್ರೋಪಕರಣಗಳ ಕಂಪೆನಿಗಳು ಬಾಡಿಗೆ ಆಧಾರಿತವಾಗಿ ಕೃಷಿಕರಿಗೆ ಯಂತ್ರೋಪಕರಣಗಳನ್ನು ನೀಡಲು ಮುಂದಾಗಿವೆ.
ಕಾರ್ಮಿಕರ ಕೊರತೆ
ಕೋವಿಡ್ ಬಿಕ್ಕಟ್ಟಿನ ನಂತರ ಈಗಾಗಲೇ ಘೋಷಣೆಯಾದ ಯೋಜನೆಗಳೊಂದಿಗೆ ಹೆಣಗಾಡುತ್ತಿರುವ ಟ್ರ್ಯಾಕ್ಟರ್ ತಯಾರಕರಾದ ಮಹೀಂದ್ರಾ, ಟಫೆ ಹಾಗೂ ಸೋನಾಲಿಕಾ ಒಂದೆಡೆ ವಲಸೆ ಕಾರ್ಮಿಕರ ಕೊರತೆಯಿಂದ ಬಳಲುತ್ತಿವೆ. ಇನ್ನೊಂದೆಡೆ ಕೃಷಿ ವಲಯದಿಂದ ಕೃಷಿ ಯಂತ್ರೋಪಕರಣಗಳಿಗೆ ಬೇಡಿಕೆ ಹೆಚ್ಚಳ ಆಗಿದೆ.
ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲ ಕಲ್ಪಿಸುತ್ತದೆ
ಕೃಷಿ ಆರ್ಥಿಕತೆ ಬೆಳೆದಂತೆ, ಬಾಡಿಗೆ ವಿಭಾಗದಲ್ಲಿ ಟ್ರಾಕ್ಟರುಗಳ ಮಾಲೀಕತ್ವವು ಬಲಗೊಳ್ಳುತ್ತದೆ. ಇದು ರೈತ ಉತ್ಪಾದಕತೆಯನ್ನು ಹೆಚ್ಚಿಸುವಾಗ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲ ಕಲ್ಪಿಸುತ್ತದೆ ಎಂದು ಮಹೀಂದ್ರಾ ಟ್ರಾಕ್ಟರ್ ವಿಭಾಗದ ಅಧ್ಯಕ್ಷ ಹೇಮಂತ್ ಸಿಕ್ಕಾ ಹೇಳುತ್ತಾರೆ. ಟ್ರಾಕ್ಟರ್ ಹೊಂದಲು ಊರುಗಳಿಗೆ ತೆರಳಿರುವವರ ಕೈಯಲ್ಲಿ ಕಡಿಮೆ ಹಣವಿರುತ್ತದೆ. ಬಾಡಿಗೆ ಆಧಾರಿತವಾಗಿ ಟ್ರಾಕ್ಟರ್ಗಳನ್ನು ನೀಡಿದರೆ ಅವರಿಗೆ ಅನುಕೂಲ ಆಗುತ್ತದೆ ಎನ್ನುತ್ತಾರೆ.
ಟ್ರಾಕ್ಟರ್ ಹೊಂದುವುದು ಕಷ್ಟದ ಮಾತು
ಟ್ರ್ಯಾಕ್ಟರ್ಗಳನ್ನು ಸಾಮಾನ್ಯವಾಗಿ ವಿತರಕರಿಂದ ನೇರವಾಗಿ ಖರೀದಿಸಲಾಗುತ್ತದೆ. ರೈತನು 25-30% ರಷ್ಟು ಮುಂಗಡ ಹಣವನ್ನು ಪಾವತಿಸುತ್ತಾರೆ. ಉಳಿದಿದ್ದನ್ನು ವಿಶೇಷವಾಗಿ ಗ್ರಾಮೀಣ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಂದ ನೀಡಲಾಗುತ್ತದೆ. ಟ್ರ್ಯಾಕ್ಟರ್ನ ಸರಾಸರಿ ಬೆಲೆ ₹ 6-7 ಲಕ್ಷ. ಒಬ್ಬ ರೈತ ಡೌನ್ ಪೇಮೆಂಟ್ ಆಗಿ ಸುಮಾರು 2 ಲಕ್ಷವನ್ನು ನೀಡಬಹುದು. ಹೀಗಾಗಿ ಸಣ್ಣ ರೈತರಿಗೆ ಟ್ರಾಕ್ಟರ್ ಹೊಂದುವುದು ಕಷ್ಟದ ಮಾತು. ಬಾಡಿಗೆ ಆಧಾರಿತವಾಗಿ ಟ್ರಾಕ್ಟರ್ ಸೇರಿದಂತೆ ಅನೇಕ ಯಂತ್ರೋಪಕರಣಗಳನ್ನು ಅವರಿಗೆ ನೀಡಬಹುದು ಎನ್ನುತ್ತಾರೆ ಕೇರಳದ ಸಣ್ಣ ಹಣಕಾಸು ಬ್ಯಾಂಕ್ ಇಎಸ್ಎಎಫ್ ವ್ಯವಸ್ಥಾಪಕ ನಿರ್ದೇಶಕ ಪಾಲ್ ಥಾಮಸ್.
ಕೃಷಿ ಯಂತ್ರೋಪಕರಣ ಚಿಕಿತ್ಸಾಲಯ
ಕಡಿಮೆ ಉತ್ಪಾದನಾ ವೆಚ್ಚ ಮತ್ತು ಕೈಗಟುಕುವ ಕೃಷಿ ಯಂತ್ರೋಪಕರಣಗಳನ್ನು ತೆಗೆದುಕೊಳ್ಳುವಾಗ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನಾವು ರೈತರನ್ನು ಬೆಂಬಲಿಸಬೇಕಾಗಿದೆ ಎಂದು ಸೋನಾಲಿಕಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್ ಮಿತ್ತಲ್ ಹೇಳುತ್ತಾರೆ. ಈ ಕೇಂದ್ರಗಳು, ಅಗತ್ಯವಿರುವ ರೈತರಿಗೆ ಉನ್ನತ ಮಟ್ಟದ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವುದರ ಜೊತೆಗೆ, ಉಪಕರಣಗಳ ರಿಪೇರಿಗಾಗಿ ‘ಕೃಷಿ ಯಂತ್ರೋಪಕರಣ ಚಿಕಿತ್ಸಾಲಯ'ಗಳಾಗಿಯೂ ಕಾರ್ಯನಿರ್ವಹಿಸುತ್ತವೆ ಎಂದು ಮಿತ್ತಲ್ ಹೇಳುತ್ತಾರೆ.