ಸೈರಸ್ ಮಿಸ್ತ್ರಿಯನ್ನು ಟಾಟಾ ಗ್ರೂಪ್ ಗೆ ಮರು ನೇಮಿಸಿದ ಎನ್ ಸಿಎಲ್ ಎಟಿ
ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಮತ್ತೆ ನೇಮಿಸಿ, ಬುಧವಾರ ನ್ಯಾಷನಲ್ ಕಂಪೆನಿ ಲಾ ಅಪೆಲೇಟ್ ಟ್ರಿಬ್ಯುನಲ್ (ಎನ್ ಸಿಎಲ್ ಎಟಿ) ಆದೇಶಿಸಿದೆ. ಎನ್. ಚಂದ್ರ ಅವರನ್ನು ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ನೇಮಿಸಿದ್ದು ಕಾನೂನುಬಾಹಿರ ಎಂದು ಕೂಡ ಹೇಳಿದೆ.
ಈಗಿನ ಆದೇಶವು ನಾಲ್ಕು ವಾರಗಳ ನಂತರ ಅಷ್ಟೇ ಅನುಷ್ಠಾನಕ್ಕೆ ಬರಲಿದ್ದು, ಅಷ್ಟರೊಳಗೆ ನ್ಯಾಯಮಂಡಳಿಯ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಟಾಟಾ ಸನ್ಸ್ ನ ಆರನೇ ಅಧ್ಯಕ್ಷರಾಗಿದ್ದರು ಮಿಸ್ತ್ರಿ. ಮೂರು ವರ್ಷದ ಹಿಂದೆ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು. ರತನ್ ಟಾಟಾ ನಿವೃತ್ತಿ ಘೋಷಿಸಿದ ನಂತರ 2012ರಲ್ಲಿ ಮಿಸ್ತ್ರಿ ಅಧಿಕಾರ ವಹಿಸಿದ್ದರು.
ತಮ್ಮನ್ನು ಹುದ್ದೆಯಿಂದ ತೆಗೆದುಹಾಕಿರುವುದು ಕಂಪೆನಿ ಕಾಯ್ದೆ ನಿಯಮಗಳ ಅನುಸಾರ ಇಲ್ಲ ಮತ್ತು ಟಾಟಾ ಸನ್ಸ್ ನಲ್ಲಿ ದೊಡ್ಡ ಮಟ್ಟದ ಅವ್ಯವಸ್ಥೆ ಆಗಿದೆ ಎಂದು ವಾದ ಮಂಡಿಸಿದ್ದರು. ಈ ಹಿಂದೆ ಹೂಡಿಕೆ ಸಂಸ್ಥೆಗಳಾದ ಸೈರಸ್ ಇನ್ವೆಸ್ಟ್ ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಸ್ಟರ್ಲಿಂಗ್ ಇನ್ವೆಸ್ಟ್ ಮೆಂಟ್ಸ್ ನಿಂದ ಮಿಸ್ತ್ರಿ ವಜಾ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಎನ್ ಸಿಎಲ್ ಎಟಿ ತಿರಸ್ಕರಿಸಿತ್ತು.