ಪಿಎಂ ಕಿಸಾನ್ ಯೋಜನೆ: ಸೋಮವಾರ 12ನೇ ಕಂತು ಬಿಡುಗಡೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ
ಬೆಂಗಳೂರು, ಅ. 17: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಕೇಂದ್ರ ಸರಕಾರ ಇಂದು ಸೋಮವಾರ 2 ಸಾವಿರ ರೂಗಳ ಕಂತು ಹಣವನ್ನು ಬಿಡುಗಡೆ ಮಾಡುತ್ತಿದೆ. ಶೋಭಾ ಕರಂದ್ಲಾಜೆ ರಾಜ್ಯ ದರ್ಜೆ ಸಚಿವೆಯಾಗಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಈ ಸಂಗತಿಯನ್ನು ಖಚಿಪಡಿಸಿದೆ.
2019ರ ಫೆಬ್ರವರಿಯಲ್ಲಿ ಚಾಲನೆಗೊಂಡ ಈ ಯೋಜನೆಯ ಅಡಿ ಕೇಂದ್ರ ಸರಕಾರ ಇದೂವರೆಗೆ 11 ಕಂತುಗಳ ಹಣ ಬಿಡುಗಡೆ ಮಾಡಿದೆ. ಇವತ್ತಿನದ್ದು 12ನೇ ಕಂತು. ಇವತ್ತಿನದೂ ಸೇರಿ ಇದೂವರೆಗೂ ಕೇಂದ್ರ ಸರಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 2.16 ಲಕ್ಷ ಕೋಟಿ ರೂ ಹಣ ಬಿಡುಗಡೆ ಮಾಡಿದಂತಾಗುತ್ತದೆ.
ಇದು ರುಪಾಯಿ ಕುಸಿತ ಅಲ್ಲ, ಡಾಲರ್ ಬಲವರ್ಧನೆ ಅಷ್ಟೇ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಪಿಎಂ ಕಿಸಾನ್ ಯೋಜನೆ ವಿವರ
2 ಹೆಕ್ಟೇರ್ಗಿಂತ ಕಡಿಮೆ ಜಮೀನು ಹೊಂದಿರುವ ಕುಟುಂಬಗಳಿಗೆ ಆರ್ಥಿಕ ಸಹಾಯಕ್ಕೆಂದು ಕೇಂದ್ರ ಸರಕಾರ ಪಿಎಂ ಕಿಸಾನ್ ಯೋಜನೆಯನ್ನು ಆರಂಭಿಸಿದೆ. ಇದರಲ್ಲಿ ಫಲಾನುಭವಿಗಳಿಗೆ ಕೇಂದ್ರ ಸರಕಾರ ಒಂದು ವರ್ಷದಲ್ಲಿ 6 ಸಾವಿರ ರೂ ಒದಗಿಸುತ್ತದೆ. ಈ ಹಣವನ್ನು ತಲಾ 2 ಸಾವಿರ ರೂಗಳ 3 ಕಂತುಗಳಲ್ಲಿ ನೀಡುತ್ತದೆ. ಅಂದರೆ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂ ಹಣ ನೇರವಾಗಿ ತಲುಪುತ್ತದೆ.
ಇದರ ಜೊತೆಗೆ ಕರ್ನಾಟಕದಲ್ಲಿನ ಈ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರಕಾರ ಎರಡು ಹೆಚ್ಚುವರಿ ಕಂತುಗಳ ಹಣವನ್ನು ಕೊಡುತ್ತದೆ. ಅಂದರೆ, ಕರ್ನಾಟಕದ ರೈತ ಕುಟುಂಬಗಳಿಗೆ ಒಂದು ವರ್ಷದಲ್ಲಿ 10 ಸಾವಿರ ರೂ ಹಣ ಸಿಗುತ್ತದೆ.
ಡಿಜಿಟಲ್ ಬ್ಯಾಂಕಿಂಗ್ ಎಂದರೇನು? ಈಗ ಸ್ಥಾಪಿಸಿರುವ ಡಿಬಿಯುಗಳಿಂದ ಏನು ಪ್ರಯೋಜನ?
ಹೆಸರು ಪರಿಶೀಲಿಸುವುದು ಹೀಗೆ
ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ನಲ್ಲಿ ಫಲಾನುಭವಿಗಳ ಪಟ್ಟಿಯನ್ನು ವೀಕ್ಷಿಸಬಹುದು. ಈ ಬಾರಿ ಕೆವೈಸಿ ಅಪ್ಡೇಟ್ ಮಾಡಲು ಕೇಳಲಾಗಿತ್ತು. ಕೆವೈಸಿ ಭರ್ತಿ ಮಾಡದಿದ್ದವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿರುವುದು ಅನುಮಾನ. ಇತ್ತೀಚಿನ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ಈ ಕೆಳಕಾಣಿಸಿದ ವಿಧಾನದಿಂದ ಪರಿಶೀಲಿಸಬಹುದು.
* ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ಗೆ ಹೋಗಿ
* ಜಾಲತಾಣದಲ್ಲಿ ಫಾರ್ಮ್ಸ್ ಕಾರ್ನರ್ ಸೆಕ್ಷನ್ ಅಡಿಯಲ್ಲಿ ಬೆನಿಫಿಷಿಯರಿ ಸ್ಟೇಸ್ ಮೇಲೆ ಕ್ಲಿಕ್ ಮಾಡಿ
* ಆಧಾರ್ ನಂಬರ್ ಅಥವಾ ನಿಮ್ಮ ನೊಂದಾಯಿತ ಮೊಬೈಲ್ ನಂಬರ್, ಅಥವಾ ಪಿಎಂ ಕಿಸಾನ್ ಅಕೌಂಟ್ ನಂಬರ್ ವಿವರವನ್ನು ನಮೂದಿಸಿ, ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರಿದೆಯಾ ಇಲ್ಲವಾ ಎಂಬುದನ್ನು ಕಂಡುಕೊಳ್ಳಬಹುದು.
ಆಂಡ್ರಾಯ್ಡ್ ಅಪ್ಲಿಕೇಶನ್
* ಪಿಎಂ ಕಿಸಾನ್ ವೆಬ್ಸೈಟ್ನಿಂದ ಆಂಡ್ರಾಯ್ಡ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿ.
* ಅಥವಾ ಗೂಗಲ್ ಪ್ಲೇ ಸ್ಟೋರ್ನಲ್ಲೂ ಪಿಎಂ ಕಿಸಾನ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
* ಆ್ಯಪ್ ಓಪನ್ ಮಾಡಿ ಅದರಲ್ಲಿ ಬೆನಿಫಿಷಿಯರಿ ಸ್ಟೇಟಸ್ ಅನ್ನು ಆಯ್ದುಕೊಂಡು ಪಟ್ಟಿಯನ್ನು ಪರಿಶೀಲಿಸಬಹುದು.
ಪಿಎಂ ಕಿಸಾನ್ ಸಮ್ಮೇಳನ ಉದ್ಘಾಟನೆ
ಇದೇ ವೇಳೆ ಇಂದು ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಾದ್ಯಂತ 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆ ಮಾಡಲಿದ್ದಾರೆ. ಹಂತಹಂತವಾಗಿ ರಸಗೊಬ್ಬರ ಮಾರಾಟ ಕೇಂದ್ರಗಳನ್ನು ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಮಾಡುವ ಇರಾದೆಯಲ್ಲಿ ಕೇಂದ್ರ ಸರಕಾರ ಇದೆ.
ಇನ್ನು, ಒಂದು ದೇಶ ಒಂದು ರಸಗೊಬ್ಬರ ಯೋಜನೆ ಅಡಿ ಇಂದು ಸೋಮವಾರ ಭಾರತ್ ಯೂರಿಯಾ ಚೀಲಗಳ ವಿತರಣಾ ಕಾರ್ಯಕ್ರಮಕ್ಕೆ ಮೋದಿ ಚಾಲನೆ ಕೊಡಲಿದ್ದಾರೆ. ಹಾಗೆಯೇ, ಇಂದು ಕೃಷಿ ಸ್ಟಾರ್ಟಪ್ ಮೇಳವನ್ನೂ ಪ್ರಧಾನಿಗಳು ಉದ್ಘಾಟಿಸಲಿದ್ದಾರೆ.