ಕಲ್ಲಿದ್ದಲು ಗಣಿ ಹರಾಜಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ನವದೆಹಲಿ, ಜೂನ್ 18: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಂದು ವಿಡಿಯೋ ಕಾನ್ಫರೆನ್ಸ್ ಮೂಲಕ 41 ಕಲ್ಲಿದ್ದಲು ಗಣಿಗಳ ಹರಾಜಿಗೆ ಚಾಲನೆ ನೀಡಿದರು. ಈ ಗಣಿಗಳನ್ನು ಖರೀದಿಸುವ ಸಂಸ್ಥೆಗಳು ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾಗಿದೆ.
ಭಾರತದ ಕಲ್ಲಿದ್ದಲು ಸಚಿವಾಲಯ ವತಿಯಿಂದ ಗಣಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 41 ವಾಣಿಜ್ಯ ಗಣಿ ಬ್ಲಾಕ್ ಗಳನ್ನು ಗುರುವಾರ ಹರಾಜಿಗಿಡಲಾಗಿದೆ. ಈ ಮೂಲಕ ದೇಶದ ವಿದ್ಯುತ್ ಪೂರೈಕೆ ಬೇಡಿಕೆಯನ್ನು ನೀಗಿಸುವುದು ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಸರ್ಕಾರದ ಉದ್ದೇಶ.
''ಕೊವಿಡ್ 19 ಸಂದರ್ಭವನ್ನು ಅವಕಾಶವನ್ನಾಗಿ ಬದಲಾಯಿಸೋಣ, ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಇದು ಮೊದಲ ಹೆಜ್ಜೆ, ಈ ಮೂಲಕ ಆಮದು ಪ್ರಮಾಣವನ್ನು ತಗ್ಗಿಸಬಹುದು'' ಎಂದು ಪ್ರಧಾನಿ ಮೋದಿ ಹೇಳಿದರು.
2030ರ ವೇಳೆಗೆ 100 ಮಿಲಿಯನ್ ಟನ್ ನಷ್ಟು ಕಲ್ಲಿದ್ದಲು ಹೊಂದುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ನಾಲ್ಕು ಪ್ರತ್ಯೇಕ ಯೋಜನೆಗಳನ್ನು ಇಂಧನ ಸಚಿವಾಲಯ ರೂಪಿಸಿದೆ. 20 ಸಾವಿರ ಕೋಟಿ ರು ಹೂಡಿಕೆಯಾಗಲಿದೆ ಎಂದು ಹೇಳಿದರು.
ಕೊವಿಡ್ 19 ಲಾಕ್ಡೌನ್ ನಿಂದಾಗಿ ಉಂಟಾಗಿರುವ ಆರ್ಥಿಕ ಅಸಮತೋಲನ ಸರಿಪಡಿಸಲು ಬೇಡಿಕೆ ಹಾಗೂ ಪೂರೈಕೆ ಸರಿದೂಗಿಸಲು ಇಂಥ ಕ್ರಮ ಅಗತ್ಯವಾಗಿದೆ. ಇದು ಹೊಸ ಆರಂಭಕ್ಕೆ ನಾಂದಿ ಹಾಡಲಿದೆ ಎಂದು ಮೋದಿ ತಿಳಿಸಿದರು.