ನವದೆಹಲಿ, ಅ. 26: ಇಂಡೋನೇಷ್ಯಾ ಮುಸ್ಲಿಂ ದೇಶವಾದರೂ ಅಲ್ಲಿಯ ಕರೆನ್ಸಿ ನೋಟುಗಳಲ್ಲಿ ಗಣೇಶನ ಫೋಟೋ ಸೇರಿಸಲಾಗಿರುವ ವಿಚಾರ ಇತ್ತೀಚೆಗೆ ಭಾರತದಲ್ಲಿ ಸದ್ದು ಮಾಡಿತ್ತು. ಎಲ್ಲರೂ ಅಚ್ಚರಿಯ ಹುಬ್ಬೇರಿಸುತ್ತಿರುವ ಹೊತ್ತಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗಣೇಶ ಮತ್ತು ಲಕ್ಷ್ಮೀ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ರೂಪಾಯಿ ನೋಟುಗಳ ಮೇಲೆ ಮಹಾತ್ಮ ಗಾಂಧಿಯ ಫೋಟೋ ಜೊತೆ ಗಣೇಶ ಮತ್ತು ಲಕ್ಷ್ಮೀ ದೇವರುಗಳ ಫೋಟೋಗಳನ್ನು ಒಳಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರೆನ್ಸಿಗಳಲ್ಲಿ ದೇವರ ಫೋಟೋ ಇದ್ದರೆ ದೇಶದ ಜನರಿಗೆ ಆಶೀರ್ವಾದ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
ದೈವದ ಬೆಂಬಲ
"ಕರೆನ್ಸಿ ನೋಟುಗಳ ಮೇಲೆ ದೇವರುಗಳಿದ್ದರೆ ಇಡೀ ದೇಶಕ್ಕೆ ಆಶೀರ್ವಾದ ಸಿಗುತ್ತದೆ. ಐಶ್ವರ್ಯ, ಸಂಪತ್ತಿಗೆ ಲಕ್ಷ್ಮೀ ಅಧಿದೇವತೆಯಾದರೆ, ಗಣೇಶ ನಮ್ಮ ವಿಘ್ನಗಳನ್ನು ನಿವಾರಿಸುವ ದೇವರು," ಎಂದು ದೆಹಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
"ರೂಪಾಯಿ ಮೌಲ್ಯ ನಿರಂತರವಾಗಿ ಕಡಿಮೆ ಆಗುತ್ತಿದ್ದು ಭಾರತದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ. ಆರ್ಥಿಕತೆ ಉತ್ತಮಪಡಿಸಲು ಹೆಚ್ಚು ಶಾಲೆ, ಕಾಲೇಜುಗಳನ್ನು ಕಟ್ಟುವುದು, ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು....
"ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ತಕ್ಕ ಫಲ ಪ್ರಾಪ್ತಿ ಆಗುವುದಿಲ್ಲ. ಆಗ ನಮಗೆ ದೇವರುಗಳ ಆಶೀರ್ವಾದ ಬೇಕಾಗುತ್ತದೆ... ಕೆಲ ಉದ್ಯಮಿಗಳು ತಮ್ಮ ಕೆಲಸ ಸ್ಥಳದಲ್ಲಿ ಎರಡು ಹಿಂದೂ ದೇವರುಗಳ ವಿಗ್ರಹಗಳನ್ನು ಇಟ್ಟುಕೊಂಡು ಪ್ರತೀ ದಿನ ಕೆಲಸ ಆರಂಭಕ್ಕೆ ಮುನ್ನ ಪೂಜೆ ಮಾಡುತ್ತಾರೆ. ಅದೇ ರೀತಿ ಕರೆನ್ಸಿ ನೋಟುಗಳ ಮೇಲೆ ದೇವರುಗಳ ಫೋಟೋ ಇಟ್ಟರೆ ದೇಶದ ಆರ್ಥಿಕತೆಯ ಸುಧಾರಣೆ ನಾವು ಮಾಡುವ ಪ್ರಯತ್ನ ಫಲ ಕೊಡಬಹುದು" ಎಂಬುದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರ ಸಲಹೆಯಾಗಿದೆ.
ಹಳೆಯ ನೋಟುಗಳ ಕಥೆ?
ಗಣೇಶ ಮತ್ತು ಲಕ್ಷ್ಮೀ ಚಿತ್ರಗಳಿರುವ ಕರೆನ್ಸಿ ನೋಟುಗಳನ್ನು ಚಲಾವಣೆ ತರಬೇಕೆಂದರೆ ಹಳೆಯ ನೋಟುಗಳನ್ನು ಹಿಂಪಡೆಯಬೇಕಾಗಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, ಪ್ರತೀ ತಿಂಗಳು ಮುದ್ರಿಸುವ ಹೊಸ ನೋಟುಗಳಿಗೆ ದೇವರ ಚಿತ್ರಗಳನ್ನು ಹಾಕಿದರೆ ಸಾಕು ಎಂದು ಅಭಿಪ್ರಾಯಪಟ್ಟಿದ್ಧಾರೆ.
ಈಗಿನ ಕರೆನ್ಸಿ ನೋಟುಗಳನ್ನು ಹಿಂಪಡೆಯುವ ಅವಶ್ಯಕತೆ ಇಲ್ಲ. ಪ್ರತೀ ತಿಂಗಳು ಮುದ್ರಿಸಲಾಗುವ ಹೊಸ ನೋಟುಗಳಲ್ಲಿ ದೇವರುಗಳ ಚಿತ್ರಗಳನ್ನು ಸೇರಿಸಬಹದು. ಈ ಹೊಸ ನೋಟುಗಳು ಎಲ್ಲೆಡೆ ಚಲಾವಣೆ ಆಗುತ್ತವೆ" ಎಂದಿದ್ದಾರೆ.
ಇಂಡೋನೇಷ್ಯಾದಲ್ಲೇ ಆಗಿದೆ, ಇಲ್ಯಾಕೆ ಆಗಲ್ಲ?
ದೇವರ ಫೋಟೋಗಳಿರುವ ಕರೆನ್ಸಿ ನೋಟುಗಳನ್ನು ಭಾರತದಲ್ಲಿ ಮುದ್ರಿಸಲು ಸಾಧ್ಯವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಕೇಜ್ರಿವಾಲ್, ಯಾಕೆ ಸಾಧ್ಯವಿಲ್ಲ ಎಂದು ಕೇಳಿದರು.
"ಇಂಡೋನೇಷ್ಯಾದಲ್ಲಿ ಹಿಂದೂ ಜನಸಂಖ್ಯೆ ಶೇ. 2ರಷ್ಟೂ ಇಲ್ಲ. ಅಲ್ಲಿಯ ಕರೆನ್ಸಿ ನೋಟುಗಳ ಮೇಲೆ ಗಣೇಶನ ಚಿತ್ರ ಮುದ್ರಿಸಲಾಗುತ್ತಿದೆ. ಭಾರತದಲ್ಲಿ ಇದು ಯಾಕೆ ಆಗುವುದಿಲ್ಲ? ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯವಹಿಸುವುದು ಬಹಳ ಒಳ್ಳೆಯದು," ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ಧಾರೆ.


Click it and Unblock the Notifications