'ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣ ರಾಜೀವ್ ಗಾಂಧಿ ಟ್ರಸ್ಟ್ಗೆ ಹೋಗುತ್ತಿತ್ತು'
ನವದೆಹಲಿ, ಜೂನ್ 26: ಇತ್ತೀಚೆಗೆ ಪ್ರಧಾನಮಂತ್ರಿ ಪರಿಹಾರ ನಿಧಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಕೊರೊನಾ ಪಿಎಂ ಕೇರ್ಸ್ ಫಂಡ್ ವಿಚಾರವಾಗಿ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿಯ ಮೇಲೆ ಆರೋಪ ಹೊರಿಸಿದ್ದವು.
ಇದೀಗ ಇದೇ ಅಸ್ತ್ರವನ್ನು ಬಿಜೆಪಿ ಕಾಂಗ್ರೆಸ್ ಮೇಲೆ ಪ್ರಯೋಗಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಗಾಂಧಿ ಕುಟುಂಬ ನಡೆಸುವ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯ ಹಣವನ್ನು ದೇಣಿಗೆ ನೀಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.
ಪ್ರಧಾನಮಂತ್ರಿ- ಕಿಸಾನ್ ಯೋಜನೆ: ವರ್ಷದಲ್ಲಿ 50,850 ಕೋಟಿ ಬಿಡುಗಡೆ
ಇದು ಲಜ್ಜೆಗೆಟ್ಟ ವಂಚನೆ ಮತ್ತು ಜನರಿಗೆ ದೊಡ್ಡ ದ್ರೋಹ ಎಂದ ಜೆ.ಪಿ.ನಡ್ಡಾ ಹೇಳಿದ್ದಾರೆ. ಈ ಆರೋಪ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ.
ಪರೋಕ್ಷವಾಗಿ ಮನಮೋಹನ ಸಿಂಗ್ ಮೇಲೆ ಆರೋಪ
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಲ್ಲಿನ ಹಣವನ್ನು, ಯುಪಿಎ ಸರ್ಕಾರ, ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ದಾನ ಮಾಡುತ್ತಿತ್ತು. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡವರು ಯಾರು ಎಂಬುದು ಹಾಗೂ ಅಂದಿನ ಪ್ರಧಾನಿ ಯಾರ ಕೈಗೊಂಬೆಯಾಗಿದ್ದರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಪರೋಕ್ಷವಾಗಿ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರ ಮೇಲೆ ನಡ್ಡಾ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಕ್ಷಮೆಯಾಚಿಸಬೇಕಾಗಿದೆ
ಭಾರತದ ಜನ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕುಟುಂಬವೊಂದು ನಡೆಸುವ ಪ್ರತಿಷ್ಠಾನಕ್ಕೆ ಕೊಡುವುದು ಲಜ್ಜೆಗೆಟ್ಟ ವಂಚನೆ ಮಾತ್ರವಲ್ಲದೆ ಜನರಿಗೆ ಮಾಡಿದ ದೊಡ್ಡ ದ್ರೋಹ ಕೂಡ ಆಗಿದೆ. ಸ್ವಯಂ ಲಾಭಕ್ಕಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಯನ್ನು ಲೂಟಿ ಮಾಡಿರುವುದಕ್ಕೆ ಕಾಂಗ್ರೆಸ್ ಕ್ಷಮೆಯಾಚಿಸಬೇಕಾಗಿದೆ ಎಂದು ನಡ್ಡಾ ಹೇಳಿದ್ದಾರೆ.
ಮೂರು ಬಾರಿ ಹಣ ವರ್ಗಾವಣೆ
ಯುಪಿಎ ಅಧಿಕಾರದಲ್ಲಿದ್ದಾಗ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಮೂರು ಬಾರಿ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಹಣವನ್ನು ನೀಡಲಾಗಿದೆ ಎಂದು ನಡ್ಡಾ ಆರೋಪಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಪರಿಹಾರ ನಿಧಿ ಮಂಡಳಿಯಲ್ಲಿದ್ದರು ಹಾಗೂ ಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಮುಖ್ಯಸ್ಥರಾಗಿದ್ದರು ಎಂದು ನಡ್ಡಾ ಆರೋಪಿಸಿದ್ದಾರೆ.
ಚೀನಾ ಗಡಿ ಪರಿಸ್ಥಿತಿ ಗಮನ ಬೇರೆಡೆ ಸೆಳೆಯಲು
ಆರೋಪದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಮಾಡುತ್ತಿರುವ ದೊಡ್ಡ ಅಪಚಾರ ಇದು. ಚೀನಾ ವಿರುದ್ಧ ಹೋರಾಡಿ ನಮ್ಮ ದೇಶವನ್ನು ರಕ್ಷಿಸುವ ಬದಲು ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.