ಕ್ರಿಪ್ಟೋ ಜಗತ್ತು ಭಯಾನಕ; ಭಾರತದ ಹೂಡಿಕೆ ವ್ಯವಸ್ಥೆ ಅದ್ಭುತ: ಕನ್ನಡಿಗ ಸಿಇಒ ನಿತಿನ್ ಕಾಮತ್
ಕಾಂತಾರಾ ಸಿನಿಮಾ ನೋಡಿ ತಾನೊಬ್ಬ ಹೆಮ್ಮೆಯ ಕನ್ನಡಿಗ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿ ಗಮನ ಸೆಳೆದಿದ್ದ ಝೀರೋಧಾ ಸಿಇಒ ನಿತಿನ್ ಕಾಮತ್, ಇದೀಗ ಷೇರುಪೇಟೆ, ಕ್ರಿಪ್ಟೋಪೇಟೆ ಇತ್ಯಾದಿ ಬಗ್ಗೆ ಲಿಂಕಡ್ಇನ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಆಗುತ್ತಿರುವ ಕ್ರಿಪ್ಟೋಕರೆನ್ಸಿಗಳ ಕುಸಿತ, ಕ್ರಿಪ್ಟೋ ಹ್ಯಾಕಿಂಗ್, ಎಫ್ಟಿಎಕ್ಸ್ ಕ್ರಿಪ್ಟೋ ಎಕ್ಸ್ಚೇಂಜ್ ನಷ್ಟ ಇತ್ಯಾದಿ ಬೆಳವಣಿಗೆ ಹಿನ್ನೆಲೆಯಲ್ಲಿ ಅದರ ಬಗ್ಗೆ ಪ್ರತಿಕ್ರಿಯಿಸಿರುವ ನಿತಿನ್ ಕಾಮತ್, ಕ್ರಿಪ್ಟೋ ಜಗತ್ತು ಭಯಾನಕ ಎಂದು ಬಣ್ಣಿಸಿದ್ದಾರೆ.
ಕಾಂತಾರಾ ನೋಡಿ ಬೆರಗಾದ ಝೀರೋಧ ಸಿಇಒ ಹೇಳಿದ್ದೇನು?
"...ಇವತ್ತು ಕ್ರಿಪ್ಟೋ ಜಗತ್ತಿನಲ್ಲಿ ಏನು ಆಗುತ್ತಿದೆಯೋ ನಿಜಕ್ಕೂ ಹುಚ್ಚುತನ ಮತ್ತು ಭಯಾನಕ ಎನಿಸುತ್ತದೆ. ಕ್ರಿಪ್ಟೋ ಬ್ರೋಕರ್ಗಳು ಮತ್ತು ಎಕ್ಸ್ಚೇಂಜ್ಗಳು ಬಹಳಷ್ಟು ಮಾರುಕಟ್ಟೆಗಳಲ್ಲಿ ಬ್ಯಾಂಕ್ಗಳಂತೆ ಕಾರ್ಯವಹಿಸಬಹುದು. ಇದು ಗ್ರಾಹಕರಿಗೆ ಸದಾ ಅಪಾಯ ತಂದಿಟ್ಟಂತೆಯೇ" ಎಂದು ಲಿಂಕ್ಡ್ಇನ್ನಲ್ಲಿ ಝೀರೋಧಾ ಸಂಸ್ಥೆಯ ಸಿಇಒ ನಿತಿನ್ ಕಾಮತ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕ್ರಿಪ್ಟೋದಲ್ಲಿ ಏನಾಗುತ್ತಿದೆ?
ಕ್ರಿಪ್ಟೋ ಕರೆನ್ಸಿ ಜಗತ್ತಿನ ಬಗ್ಗೆ ನಿತಿನ್ ಕಾಮತ್ ಈ ರೀತಿ ಹೇಳಲು ಕಾರಣ ಇದೆ. ಎಫ್ಟಿಎಕ್ಸ್ ಅನ್ನು ಕೊಳ್ಳುವ ಬೈನಾನ್ಸ್ನ ಒಪ್ಪಂದ ಮುರಿದುಬಿದ್ದು ಕ್ರಿಪ್ಟೋ ಜಗತ್ತು ಅಲುಗಾಡಿ ಹೋಗಿದೆ. ಬೈನಾನ್ಸ್ ವಿಶ್ವದ ಅತಿದೊಡ್ಡ ಕ್ರಿಪ್ಟೋ ವಿನಿಮಯದ ಪ್ಲಾಟ್ಫಾರ್ಮ್ ಆಗಿದೆ. ಎಫ್ಟಿಎಕ್ಸ್ ಕೂಡ ಕ್ರಿಪ್ಟೋ ಎಕ್ಸ್ಚೇಂಜ್ ಪ್ಲಾಟ್ಫಾರ್ಮ್ ಆಗಿದೆ. ಆದರೆ, ಎಫ್ಟಿಎಕ್ಸ್ನಲ್ಲಿ ಗ್ರಾಹಕರ ಹಣವನ್ನು ದುರುಪಯೋಗ ಮಾಡಲಾಗಿದ್ದು ಅಮೆರಿಕದ ತನಿಖಾ ಸಂಸ್ಥೆಗಳಿಂದ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎಫ್ಟಿಎಕ್ಸ್ ಅನ್ನು ಖರೀದಿಸುವ ತಮ್ಮ ಪ್ರಯತ್ನವನ್ನು ಬೈನಾನ್ಸ್ ನಡುನೀರಿನಲ್ಲೇ ಬಿಟ್ಟಿತು.
ಈ ಬೆಳವಣಿಗೆ ಬೆನ್ನಲ್ಲೇ ಎಫ್ಟಿಎಕ್ಸ್ ಸಿಇಒ ಸ್ಯಾಮ್ ಬ್ಯಾಂಕ್ಮ್ಯಾನ್ ಫ್ರೈಡ್ ತಮ್ಮ ಶೇ. 90ಕ್ಕೂ ಹೆಚ್ಚು ಆಸ್ತಿ ಕಳೆದುಕೊಂಡರು. ಕ್ರಿಪ್ಟೋ ಬ್ರೋಕರ್ಗಳಿಂದ ತಮ್ಮ ಹಣದ ದುರುಪಯೋಗ ಆಗುತ್ತಿದೆ ಎಂದು ಜನರು ಬೆಚ್ಚಿದ್ದಾರೆ. ಕ್ರಿಪ್ಟೋ ಜಗತ್ತು ನಡುಗಾಡುತ್ತಿದೆ. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ ಬಂಡವಾಳ ಶೇ. 7ಕ್ಕೂ ಹೆಚ್ಚು ಕುಸಿತ ಕಂಡಿದೆ. ಬಿಟ್ಕಾಯಿನ್, ಇದಿರಿಯಮ್ ಇತ್ಯಾದಿ ಕ್ರಿಕ್ಟೋಕರೆನ್ಸಿಗಳು ಇಳಿಕೆಯಾಗಿವೆ ಎಂದು ಹೇಳಲಾಗುತ್ತಿದೆ.
ಭಾರತದ ಮಾರುಕಟ್ಟೆ ಬೆಸ್ಟ್ ಎಂದ ಕಾಮತ್
ಇದೇ ವೇಳೆ, ಭಾರತದಲ್ಲಿರುವ ಷೇರುಪೇಟೆ ವ್ಯವಸ್ಥೆ ಮತ್ತು ನಿಯಮಾವಳಿಗಳನ್ನು ನಿತಿನ್ ಕಾಮತ್ ಬಹಳ ಶ್ಲಾಘನೆ ಮಾಡಿದ್ದಾರೆ. ನಮ್ಮ ಪೇಮೆಂಟ್ ವ್ಯವಸ್ಥೆ ಜಗತ್ತಿನಲ್ಲೇ ಅತ್ಯುತ್ತಮ ಎಂದು ನಾವೆಲ್ಲಾ ಹೇಗೆ ಸಂಭ್ರಮಿಸುತ್ತೇವೆಯೋ ಅದೇ ರೀತಿ ನಮ್ಮ ಮಾರುಕಟ್ಟೆ ವ್ಯವಸ್ಥೆ ಬಗ್ಗೆಯೂ ಹೆಮ್ಮೆ ಪಡಬೇಕು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಷೇರುಪೇಟೆಯ ಬ್ರೋಕರೇಜ್ ವ್ಯವಸ್ಥೆ ಬಗ್ಗೆ ನಿತಿನ್ ಕಾಮತ್ ವ್ಯಾಖ್ಯಾನ ಹೀಗಿದೆ: "ಭಾರತದಲ್ಲಿ ಗ್ರಾಹಕ ತನ್ನ ಎಲ್ಲಾ ಷೇರುಗಳನ್ನು ಡೆಪಾಸಿಟರಿಯಲ್ಲೇ ಇಟ್ಟುಕೊಳ್ಳುತ್ತಾನೆ. ಬಳೆಯಾಗದ ಹಣವನ್ನು ಮಾಸಿಕವಾಗಿಯೂ ತ್ರೈಮಾಸಿಕವಾಗಿಯೋ ವಾಪಸ್ ಮಾಡಲಾಗುತ್ತದೆ. ಒಬ್ಬ ಗ್ರಾಹಕನ ಹಣವನ್ನು ಇನ್ನೊಬ್ಬರಿಗೆ ಬಳಸಲು ಆಗುವುದಿಲ್ಲ...ಆದರೆ, ಬೇರೆ ಬಹುತೇಕ ಮಾರುಕಟ್ಟೆಗಳಲ್ಲಿ ಗ್ರಾಹಕರ ಷೇರು ಮತ್ತು ಫಂಡ್ಗಳನ್ನು ಬ್ರೋಕರ್ಗಳೇ ಅನಿರ್ದಿಷ್ಟಾವಧಿಗೆ ಇರಿಸಿಕೊಂಡು ತಮಗೆ ಬೇಕಾದರೆ ಬಳಸಿಕೊಳ್ಳುತ್ತಾರೆ" ಎಂದು ಬರೆದಿದ್ದಾರೆ.
ಭಾರತದಲ್ಲಿ ರೀಟೇಲ್ ಇನ್ವೆಸ್ಟರ್ಗಳ ಹಿತ ರಕ್ಷಣೆಗಾಗಿ ಷೇರುಪೇಟೆಯಲ್ಲಿ ಸೆಬಿ ನಿರಂತರವಾಗಿ ನಿಯಮ ಬದಲಾವನೆಗಳನ್ನು ಮಾಡುತ್ತಿದೆ ಎಂದೂ ನಿತಿನ್ ಕಾಮತ್ ಶ್ಲಾಘನೆ ಮಾಡಿದ್ದಾರೆ.
ಝೀರಾಧಾದ ಕಥೆ
ಷೇರುಪೇಟೆಯ ಬ್ರೋಕರೇಜ್ ಸಂಸ್ಥೆ ಝೀರೋಧಾದ ಸಿಇಒ ನಿತಿನ್ ಕಾಮತ್. ಇವರು ತಮ್ಮ ಸಹೋದರ ನಿಖಿಲ್ ಕಾಮತ್ ಜೊತೆ 2010ರಲ್ಲಿ ಹುಟ್ಟುಹಾಕಿದ ಝೀರೋಧಾ ಇದೀಗ ಭಾರತದ ಅತಿದೊಡ್ಡ ಸ್ಟಾರ್ಟಪ್ಗಳಲ್ಲಿ ಒಂದಾಗಿದೆ. ಯೂನಿಕಾರ್ನ್ ಸಂಸ್ಥೆಯಾಗಿ ಬೆಳೆದಿದೆ. ಸ್ಟಾಕ್ ಮಾರ್ಕೆಟ್ನ ಮಧ್ಯವರ್ತಿ ಮಾತ್ರವಲ್ಲ, ಇದರ ಒಂದು ಅಂಗಸಂಸ್ಥೆಯು ಭಾರತದಲ್ಲಿ ಹಲವು ಹಣಕಾಸು ತಂತ್ರಜ್ಞಾನ ಸ್ಟಾರ್ಟಪ್ಗಳಿಗೆ ಫಂಡಿಂಗ್ ಮೂಲಕ ಉತ್ತೇಜನ ಕೂಡ ನೀಡುತ್ತದೆ.
ಎಂಬಿಎ ಮಾಡದ ಸಿಇಒ
ಇಂದಿನ ಬಹುತೇಕ ಸಿಇಒಗಳು ಐಐಟಿ, ಐಐಎಂ ಇತ್ಯಾದಿಯಲ್ಲಿ ಓದಿ ಎಂಜಿನಿಯರಿಂಗ್, ಎಂಬಿಎ ಇತ್ಯಾದಿ ಮಾಡಿರುವವರೇ. ಇಂಥವರಲ್ಲಿ ಅಪರೂಪವಾಗಿ ಬೆಳೆದವರು ನಿತಿನ್ ಕಾಮತ್. ಶಿವಮೊಗ್ಗದ ಇವರು ಝೀರೋಧಾ ಸಂಸ್ಥೆಯನ್ನು ತಮ್ಮ ಸಹೋದರನೊಂದಿಗೆ ಸೇರಿ ಹುಟ್ಟುಹಾಕುವ ಮುನ್ನ 10-12 ವರ್ಷ ಷೇರುಪೇಟೆಯಲ್ಲಿ ಟ್ರೇಡಿಂಗ್ ಮಾಡಿದ ಅನುಭವ ಪಡೆದಿದ್ದರು. ಅದರ ಮೇಲಿನ ಆಸಕ್ತಿಯಿಂದ ಝೀರೋಧಾ ಸಂಸ್ಥೆಯನ್ನು ಸ್ಥಾಪಿಸಿದರು.
"ನಾನು ಐಐಎಂ ಅಥವಾ ಹಾರ್ವರ್ಡ್ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿದಿದ್ದರೆ ಈ ಕೆಲಸ ಕೈಗೂಡದೇ ಹೋದಾಗ ಬೇರೆ ಕೆಲಸ ಪಡೆಯಲು ನನಗೆ ಸಾಧ್ಯವಾಗಿರುತ್ತಿತ್ತು. ಬ್ಯುಸಿನೆಸ್ ಸ್ಕೂಲ್ನಲ್ಲಿ ಸಿಗುವ ಶಿಕ್ಷಣ ನಮಗೆ ಪ್ಯಾರಚ್ಯೂಟ್ನಂತೆ ರಕ್ಷಣೆ ಒದಗಿಸುತ್ತದೆ. ಆದರೆ, ನಾನು ಬಿಸಿನೆಸ್ ಓದಿದ್ದರೆ ನನ್ನ ಕನಸಿನ ಪಥದಲ್ಲಿ ಮುಂದುವರಿಯಲು ಆಗುತ್ತಿರಲಿಲ್ಲವೇನೋ" ಎಂದು ನಿತಿನ್ ಕಾಮತ್ ಹೇಳುತ್ತಾರೆ.
ಕೆಲಸ ಹುಡುಕುವವರೇ ಬಹುತೇಕರು
ಭಾರತದಲ್ಲಿರುವ ನೂರಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಲ್ಲಿ ಝಿರೋಧಾವೂ ಒಂದು. ನಮ್ಮ ದೇಶದಲ್ಲಿ ಡಿಪಿಐಐಟಿಯಲ್ಲಿ ನೊಂದಣಿಯಾಗಿರುವ 77 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್ಗಳಿವೆ. ಅಮೆರಿಕ ಮತ್ತು ಚೀನಾ ಬಿಟ್ಟರೆ ವಿಶ್ವದಲ್ಲೇ ಅತೀದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಭಾರತದಲ್ಲಿ ಇದೆ. ಆದರೆ, ಭಾರತದ ಜನಸಂಖ್ಯೆಗೆ ಪೂರಕವಾದ ಸಂಖ್ಯೆಯಲ್ಲಿ ಸ್ಟಾರ್ಟಪ್ಗಳಿಲ್ಲ ಎಂಬುದು ತಜ್ಞರ ಅನಿಸಿಕೆ.
"ಭಾರತದಲ್ಲಿರುವ ಭೌಗೋಳಿಕ ವೈವಿಧ್ಯತೆ, ಜನಸಂಖ್ಖೆ, ಗ್ರಾಹಕ ನೆಲೆಯ ವ್ಯಾಪಕತೆ, ಸಮಸ್ಯೆಯ ಜಟಿಲತೆ ಇತ್ಯಾದಿಯನ್ನು ಗಮನಿಸಿದರೆ ನಮಗೆ ಲಕ್ಷಾಂತರ ಉದ್ಯಮಿಗಳ ಅವಶ್ಯಕತೆ ಇದೆ. ಆದರೆ, ಶೇ. 90ರಷ್ಟು ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಳಿಕ ದೊಡ್ಡ ಸಂಬಳದ ಕೆಲಸ ಪಡೆಯುವುದರತ್ತಲೇ ಗಮನ ನೆಟ್ಟಿರುತ್ತಾರೆ. ನಮ್ಮದು ಉದ್ಯೋಗಮುಖಿ ಆರ್ಥಿಕತೆಯಾಗಿದೆಯೇ ಹೊರತು ಇನ್ನೂ ಕೂಡ ಸ್ಟಾರ್ಟಪ್ ಎಕನಾಮಿಯಾಗಿ ಪರಿವರ್ತನೆಯಾಗಿಲ್ಲ" ಎಂದು ಉದ್ಯಮಿಗಳಾದ ಪದ್ಮಜಾ ರೂಪಾರೆಲ್ ಮತ್ತು ರಾಜೀವ್ ವಾರಿಯರ್ ಹೇಳುತ್ತಾರೆ.
ಭಾರತದ ಮೊದಲ ಸವರನ್ ಗ್ರೀನ್ ಬಾಂಡ್ನ ಯೋಜನೆಗೆ ವಿತ್ತ ಸಚಿವೆ ಅನುಮೋದನೆ