ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಅಂದಾಜು ಮಾಡಿರುವ ಖರ್ಚಿನಲ್ಲಿ 30% ಕಡಿತ ಮಾಡುವಂತೆ ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ. ಸಂಸತ್ ಸದಸ್ಯರ ಭತ್ಯೆಯಲ್ಲಿ ಹಾಗೂ ವೇತನದಲ್ಲಿ ಕಡಿತ ಮಾಡಿ ಈಗಾಗಲೇ ಸರ್ಕಾರದಿಂದ ಆದೇಶ ಬಂದಿದೆ. ಅದರ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋನಿಯಾ ಪತ್ರ ಬರೆದಿದ್ದಾರೆ.
ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಆದ ನಂತರ ಸೋನಿಯಾ ಗಾಂಧಿ ಅವರು ಪ್ರಧಾನಿಗೆ ಬರೆಯುತ್ತಿರುವ ಮೂರನೇ ಪತ್ರ ಇದು. ಕೊರೊನಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತಮಗೆ ಪ್ರಧಾನಿ ಕರೆ ಮಾಡಿದ್ದನ್ನು ಹಾಗೂ ಸಲಹೆ ಕೇಳಿದ್ದನ್ನು ಪ್ರಸ್ತಾವ ಮಾಡಿರುವ ಸೋನಿಯಾ, ಸಂಸದರ ವೇತನ ಕಡಿತ ಮಾಡುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇನ್ನು ಎಲ್ಲ ವೆಚ್ಚಗಳನ್ನು ತಗ್ಗಿಸುವಂತೆ ಒತ್ತಾಯ ಮಾಡಿರುವ ಅವರು, PM CARES ಫಂಡ್ ನಲ್ಲಿ ಇರುವ ಎಲ್ಲ ಮೊತ್ತವನ್ನೂ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ವರ್ಗಾವಣೆ ಮಾಡಬೇಕು ಎಂದಿದ್ದು, ಆ ಮೂಲಕ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಖಾತ್ರಿ ಪಡಿಸಿದಂತೆ ಆಗುತ್ತದೆ ಎಂದು ತಿಳಿಸಿದ್ದಾರೆ. ಅಂದ ಹಾಗೆ ಸೋನಿಯಾ ಗಾಂಧಿ ಅವರು ನೀಡಿರುವ ಐದು ಸಲಹೆಗಳೇನು ಎಂಬುದರ ಡೀಟೇಲ್ಸ್ ಇಲ್ಲಿದೆ.
ಬಜೆಟ್ ವೆಚ್ಚದಲ್ಲಿ 30% ಕಡಿಮೆ ಮಾಡಬೇಕಿದೆ
ಕೊರೊನಾ ವಿರುದ್ಧ ಹೋರಾಡುವುದಕ್ಕೆ ಸಮಗ್ರ ನಿಧಿ ಸ್ಥಾಪನೆ ಮಾಡಬೇಕು. ವೇತನ, ಪಿಂಚಣಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಿಗೆ ಮೀಸಲಾದ ಮೊತ್ತವನ್ನು ಹೊರತುಪಡಿಸಿ ಬಜೆಟ್ ನ ಪ್ರಸ್ತಾವಿತ ವೆಚ್ಚದಲ್ಲಿ 30% ಕಡಿಮೆ ಮಾಡಬೇಕಿದೆ. ಹೀಗೆ 30 ಪರ್ಸೆಂಟ್ ಕಡಿಮೆ ಆಗುವ ಮೊತ್ತವೇ ವರ್ಷಕ್ಕೆ ಅಂದಾಜು 2.5 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಆ ನಂತರ ಮೊತ್ತವನ್ನು ವಲಸೆ ಕಾರ್ಮಿಕರು, ರೈತರು, ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಹಾಗೂ ಅಸಂಘಟಿತ ವಲಯಕ್ಕೆ ಮೀಸಲಿರಿಸಬೇಕು.
ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಿ
PM CARES ಫಂಡ್ ನಲ್ಲಿ ಸಂಗ್ರಹವಾದ ಮೊತ್ತವನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾವಣೆ ಮಾಡಬೇಕು. ಆ ಮೂಲಕ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಖಾತ್ರಿ ಪಡಿಸಬೇಕು. ಈ ಹಣ ಹೇಗೆ ವಿತರಣೆ ಆಗುತ್ತದೆ ಮತ್ತು ಖರ್ಚಾಗುತ್ತದೆ ಎಂಬ ಬಗ್ಗೆ ಆಡಿಟ್ ಆಗಬೇಕು. ಹಣ ವಿತರಣೆಗೆ ಎರಡು ಪ್ರತ್ಯೇಕ ವ್ಯವಸ್ಥೆ ಮಾಡುವುದು ಸಮಂಜಸ ಅಲ್ಲ. ಪ್ರಧಾನಮಂತ್ರಿ ವಿಪತ್ತು ಪರಿಹಾರ ನಿಧಿಯಲ್ಲಿ 3800 ಕೋಟಿ ಬಳಸದೆ ಉಳಿದಿದೆ. ಈ ಮೊತ್ತ ಹಾಗೂ PM CARES ಫಂಡ್ ಎರಡನ್ನೂ ಆಹಾರ ಭದ್ರತೆಗಾಗಿ ಬಳಸಬಹುದು.
ಸೆಂಟ್ರಲ್ ವಿಸ್ಟಾ ಯೋಜನೆ ನಿಲ್ಲಿಸಿ
'ಸೆಂಟ್ರಲ್ ವಿಸ್ಟಾ' ಸೌಂದರ್ಯ ಯೋಜನೆ ಮತ್ತು ನಿರ್ಮಾಣ ಕಾಮಗಾರಿಗಾಗಿ ಎತ್ತಿಟ್ಟಿರುವ 20 ಸಾವಿರ ಕೋಟಿ ರುಪಾಯಿಯನ್ನು ಸರ್ಕಾರವು ತಕ್ಷಣವೇ ನಿಲ್ಲಿಸಬೇಕು. ಈ ಮೊತ್ತವನ್ನು ಹೊಸ ಆಸ್ಪತ್ರೆಗಳು, ಮೂಲಸೌಕರ್ಯ, ಡಯಾಗ್ನೋಸಿಸ್ ಹಾಗೂ ಇದರ ಜತೆಗೆ ಮುಂಚೂಣಿಯಲ್ಲಿ ಶ್ರಮಿಸುತ್ತಿರುವ ಕೆಲಸಗಾರರಿಗೆ ಇನ್ನೂ ಉತ್ತಮ ಸೌಕರ್ಯ ಒದಗಿಸಲು ಬಳಸಬೇಕು.
ವಿದೇಶ ಪ್ರವಾಸಕ್ಕೆ ತಡೆ
ಪ್ರಧಾನಿಯೂ ಒಳಗೊಂಡಂತೆ ಸಂಪುಟ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು, ಅಧಿಕಾರಿಗಳು ಎಲ್ಲರ ವಿದೇಶ ಪ್ರವಾಸವನ್ನು ತಡೆ ಹಿಡಿಯಬೇಕು. ಆ ಪ್ರವಾಸದ ವೆಚ್ಚವನ್ನು ಬಿಕ್ಕಟ್ಟನ್ನು ಎದುರಿಸಲು ಬಳಸಬೇಕು. ಇದರ ಜತೆಗೆ ಸರ್ಕಾರದಿಂದ, ಸಾರ್ವಜನಿಕ ವಲಯದ ಕೈಗಾರಿಕೆ- ಸಂಸ್ಥೆಗಳಿಂದ ಮಾಧ್ಯಮಗಳಿಗೆ ನೀಡುವ ಜಾಹೀರಾತಿಗೆ ಎರಡು ವರ್ಷದ ಮಟ್ಟಿಗೆ ಸಂಪೂರ್ಣ ನಿಷೇಧ ಹೇರಬೇಕು. ಸಾರ್ವಜನಿಕರ ಎಚ್ಚರಿಕೆ ದೃಷ್ಟಿಯಿಂದ ನೀಡುವ ಜಾಹಿರಾತುಗಳನ್ನು ಹೊರತುಪಡಿಸಿ ಇನ್ಯಾವುದೂ ನೀಡಬಾರದು.


Click it and Unblock the Notifications