'ನಾನು ಬರ್ತಾ ಇಲ್ಲಾ ರೀ' ಎಂದು ವಾಟ್ಸಪ್ ಮೆಸೇಜ್ ಕಳುಹಿಸಿದ ವಿಜಯ್ ಮಲ್ಯ
ಲಂಡನ್, ಜೂನ್ 4: ಆರ್ಥಿಕ ಅಪರಾಧಿ ಆಗಿರುವ ವಿಜಯ್ ಮಲ್ಯ ಕುರಿತಾಗಿ ನಿನ್ನೆಯಷ್ಟೇ ಎದ್ದಿದ್ದ ಸುದ್ದಿಯೊಂದು ಠುಸ್ ಆಗಿದೆ. ಮಂಗಳವಾರ ರಾತ್ರಿಯಿಂದ ಬುಧವಾರದವರೆಗೂ, ವಿಜಯ್ ಮಲ್ಯ ಇನ್ನೇನು ಯಾವುದೇ ಸಮಯದಲ್ಲಿ ಭಾರತಕ್ಕೆ ಹಸ್ತಾಂತರ ಆಗಬಹುದು. ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ತಿಯಾಗಿವೆ ಎಂದು ಕೆಲ ಮಾಧ್ಯಮಗಳು ಹೇಳಿದ್ದವು.
ಆರ್ಥಿಕ ಅಪರಾಧಿ ವಿಜಯ್ ಮಲ್ಯ ಭಾರತಕ್ಕೆ ಕರೆತರಲು ಇನ್ನೇನು ದಿನಗಣನೆ
ವಿಜಯ್ ಮಲ್ಯ ಇನ್ನೇನು ಭಾರತಕ್ಕೆ ಹಸ್ತಾಂತರ ಆಗಿ ಸಿಬಿಐ ಕಸ್ಟಡಿ ಅಡಿ ಮುಂಬೈನ ಅರ್ಥರ್ ರಸ್ತೆಯ ಜೈಲಿನಲ್ಲಿ ಇರಲಿದ್ದಾರೆ ಎಂದು ಊಹಾಪೋಹಗಳು ಹರಿದಾಡಿದ್ದವು. ಆದರೆ, ಈ ಬಗ್ಗೆ ಗುರುವಾರ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, 'ವಿಜಯ್ ಮಲ್ಯ ಸದ್ಯ ಭಾರತಕ್ಕೆ ಹಸ್ತಾಂತರ ಆಗುತ್ತಿಲ್ಲ, ಸಿಬಿಐ ಅವರನ್ನು ಕರೆದುಕೊಂಡೂ ಬರುತ್ತಿಲ್ಲ' ಎಂದು ಹೇಳಿದೆ.
ವಿಜಯ್ ಮಲ್ಯ ಆಪ್ತರು ಹಸ್ತಾಂತರ ವರದಿಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸದ್ಯ ಅವರು ಇಂಗ್ಲೆಂಡ್ನಲ್ಲಿದ್ದಾರೆ. ಕಾನೂನು ಹೋರಾಟ ನಡೆಸುತ್ತಿದ್ದಾರೆ. ಊಹಾಪೋಹಗಳ ಸುದ್ದಿಗಳನ್ನು ಹೇಳುತ್ತಿರುವವರು ಅದು ಅವರಿಗಷ್ಟೇ ಗೊತ್ತು ಎಂಬುದಾಗಿ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳುತ್ತದೆ. ಈ ಮೂಲಕ ವಿಜಯ್ ಮಲ್ಯ ಸದ್ಯ ಭಾರತಕ್ಕೆ ಆಗಮಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ವಾಟ್ಸಪ್ ಮೆಸೇಜ್ ಕಳುಹಿಸಿದ ಮಲ್ಯ!
ಮಲ್ಯ ವಕೀಲ ಆನಂದ ದುಬೆ ಅವರು, ಈ ಕುರಿತು ಪ್ರತಿಕ್ರಿಯೆ ನೀಡಲು ನೀರಾಕರಿಸಿದಾಗ, ಸ್ವತಃ ಮಲ್ಯ ಅವರೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ವಾಟ್ಸಪ್ ಮೂಲಕ, ''ನನ್ನ ಹಸ್ತಾಂತರದ ಬಗ್ಗೆ ಯಾರು ಏನು ಸುದ್ದಿ ಮಾಡಿದ್ದಾರೋ ಅದು ಅವರಿಗಷ್ಟೇ ಗೊತ್ತು'' ಎಂದು ಮಲ್ಯ ಹೇಳಿರುವುದಾಗಿ ಪತ್ರಿಕೆ ತಿಳಿಸಿದೆ.
ಸಿಬಿಐ ನ ಹಳೇ ದಾಖಲೆಗಳನ್ನು ಇಟ್ಟುಕೊಂಡು
ಇಂಗ್ಲೆಂಡ್ನಲ್ಲಿ ಭಾರತದ ಹೈಕಮೀಷನರ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ''ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಲಂಡನ್ನಲ್ಲಿ ಯಾವುದೇ ಬೆಳವಣಿಗೆಗಳು ಆಗಿಲ್ಲ. ಸಿಬಿಐ ನ ಹಳೇ ದಾಖಲೆಗಳನ್ನು ಇಟ್ಟುಕೊಂಡು ಕೆಲ ಮಾಧ್ಯಮಗಳು ಸುದ್ದಿ ಹಬ್ಬಿಸಿರಬಹುದು. ಸದ್ಯ ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಇಲ್ಲಿ ಶುರು ಆಗಿಲ್ಲ. ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ'' ಎಂದು ಹೇಳಿದ್ದಾರೆ.
ಕರೆತರುವ ಪ್ರಕ್ರಿಯೆ ಚಾಲ್ತಿಯಲ್ಲಿ
ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಯು.ಕೆ. ಉಚ್ಚ ನ್ಯಾಯಾಲಯದಲ್ಲಿ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅದು ತಿರಸ್ಕೃತವಾಗಿತ್ತು. ಭಾರತಕ್ಕೆ ವಿಜಯ್ ಮಲ್ಯರನ್ನು ಕರೆತರಲು ಸಿಬಿಐ ಹಾಗೂ ಇ.ಡಿ. ತಂಡಗಳು ಈಗಾಗಲೇ ಪ್ರಕ್ರಿಯೆ ಆರಂಭಿಸಿವೆ. ಸಿಬಿಐ ಮೂಲಗಳು ಹೇಳಿರುವ ಪ್ರಕಾರ, ಭಾರತಕ್ಕೆ ಮಲ್ಯ ಹಸ್ತಾಂತರ ಆದ ನಂತರ ತನಿಖಾ ಸಂಸ್ಥೆಯ ವಶಕ್ಕೆ ಅವರನ್ನು ಮೊದಲಿಗೆ ಪಡೆಯಲಾಗುವುದು. ಆ ನಂತರ ಪ್ರಕರಣ ದಾಖಲಿಸಲಾಗುವುದು.
ವಿಜಯ್ ಮಲ್ಯ ಅರ್ಜಿ ತೀರಸ್ಕೃತವಾಗಿತ್ತು
ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಲಂಡನ್ ಹೈ ಕೋರ್ಟ್ ನಲ್ಲಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ಏಪ್ರಿಲ್ 20, 2020ರಲ್ಲಿ ತಿರಸ್ಕೃತವಾಗಿತ್ತು. ಆ ನಂತರ ಯು.ಕೆ. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇ 14ನೇ ತಾರೀಕು ಸುಪ್ರೀಂ ಕೋರ್ಟ್ ಸಹ ಮೇಲ್ಮನವಿ ತಿರಸ್ಕರಿಸಿದ ಮೇಲೆ, ಒಂದು ವೇಳೆ ತಮ್ಮ ವಿರುದ್ಧದ ಕೇಸುಗಳನ್ನು ಮುಕ್ಯಾತ ಮಾಡಿದರೆ ಶೇಕಡಾ 100ರಷ್ಟು ಸಾಲವನ್ನು ಮರಳಿಸುವುದಾಗಿ ಕೇಂದ್ರ ಸರ್ಕಾರವನ್ನು ಮಲ್ಯ ಮತ್ತೊಮ್ಮೆ ಕೇಳಿಕೊಂಡಿದ್ದರು.