ತಿರುಪತಿ ದೇವಸ್ಥಾನ ಪುನಾರಂಭ: 14 ದಿನಗಳಲ್ಲಿ ಬಂದ ಆದಾಯವೆಷ್ಟು?
ತಿರುಪತಿ: ಕೊರೊನಾವೈರಸ್ ಲಾಕ್ಡೌನ್ ಪರಿಣಾಮವಾಗಿ ಮಾರ್ಚ್ 24 ರಿಂದ ಜೂನ್ 10 ರವರೆಗೆ ತಿರುಮಲ ತಿರುಪತಿ ದೇವಸ್ಥಾನ ಸಂಪೂರ್ಣ ಬಾಗಿಲು ಮುಚ್ಚಿತ್ತು.
ಇದರಿಂದ ದೇವಸ್ಥಾನಕ್ಕೆ ಸುಮಾರು 500 ಕೋಟಿ ರುಪಾಯಿಗೂ ಹೆಚ್ಚು ನಷ್ಟ ಸಂಭವಿಸಿತ್ತು. ಇದೀಗ ಜೂನ್ 11 ರಿಂದ ದೇವಸ್ಥಾನ ಭಕ್ತರಿಗೆ ಮತ್ತೆ ಬಾಗಿಲು ತೆಗೆದಿದೆ. ಬಾಗಿಲು ತೆರೆದು 14 ದಿನಗಳು ಕಳೆದಿದ್ದು, ಕೊರೊನಾ ಭಯದ ನಡುವೆಯೂ ನಿಧಾನಗತಿಯಲ್ಲಿ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.
ಲಾಕ್ಡೌನ್ ಪರಿಣಾಮ: ಕರ್ನಾಟಕ ಪ್ರವಾಸೋದ್ಯಮಕ್ಕೆ 15 ಸಾವಿರ ಕೋಟಿ ರು ನಷ್ಟ
ಕಳೆದ 14 ದಿನಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 7.5 ಕೋಟಿ ರುಪಾಯಿ ಹಣ ಹರಿದು ಬಂದಿದೆ. ಹುಂಡಿ ನಿಧಿಯಿಂದ 6 ಕೋಟಿ ರುಪಾಯಿ ಸಂಗ್ರಹವಾಗಿದೆ. ದರ್ಶನಕ್ಕಾಗಿ ಆನ್ಲೈನ್ ಬುಕ್ಕಿಂಗ್ನಿಂದ 1.5 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೇ ಆದಾಯ ಸಂಗ್ರಹದಲ್ಲಿ ಇನ್ನೂ ಹೆಚ್ಚಳವಾಗಲಿದ್ದು, ಹುಂಡಿಗೆ ಬಂದಿರುವ ಚಿನ್ನ ಬೆಳ್ಳಿಯನ್ನು ಇನ್ನೂ ಲೆಕ್ಕ ಹಾಕಿಲ್ಲ ಎಂದು ಟಿಟಿಡಿಯ ಅಧಿಕಾರಿಗಳು ಹೇಳಿದ್ದಾರೆ.
ಕೊರೊನಾವೈರಸ್ ಲಾಕ್ಡೌನ್ ಪರಿಣಾಮವಾಗಿ ಟಿಟಿಡಿಗೆ ಆದಾಯದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಇದರಿಂದ ದೇವಸ್ಥಾನದ ಗುತ್ತಿಗೆ ಕಾರ್ಮಿಕರಿಗೆ ಸಂಬಳ ಕೊಡಲು ಆಗುವುದಿಲ್ಲ ಎಂದು ಟಿಟಿಡಿ ಹೇಳಿತ್ತು.