ಕೇಂದ್ರ ಬಜೆಟ್ 2021: ಕೊರೊನಾ ಪೀಡಿತ ಆರ್ಥಿಕತೆ ಚೇತರಿಕೆಗೆ ಏನು ನಿರೀಕ್ಷಿಸಬಹುದು?
ಇನ್ನೊಂದು ವಾರ ಕಳೆಯುತ್ತಿದ್ದಂತೆ ಕಣ್ಣೆದುರಿಗೆ ಕೇಂದ್ರ ಬಜೆಟ್ 2021- 22 ಬಂದು ನಿಲ್ಲುತ್ತದೆ. ಕೊರೊನಾ ಬಿಕ್ಕಟ್ಟಿಗೆ ಹೈರಾಣಾಗಿರುವ ಆರ್ಥಿಕತೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಗೆ ಜೀವೋತ್ಸಾಹ ತುಂಬುತ್ತಾರೆ, ಜನರಲ್ಲಿ ಹೇಗೆ ವಿಶ್ವಾಸ ವಾಪಸ್ ತರುತ್ತಾರೆ ಎಂಬ ಬಗ್ಗೆಯೇ ಎಲ್ಲರ ಕುತೂಹಲ.
ಕಳೆದ ವಾರ ನಿರ್ಮಲಾ ಅವರು ಮಾತನಾಡಿ, ಬಜೆಟ್ 2021 ಈ ಹಿಂದೆಂದೂ ಕಂಡಿರದ ರೀತಿಯಲ್ಲಿ ಇರಲಿದ್ದು, ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾತ್ರ ಮಹತ್ತರವಾಗಲಿದೆ ಎಂದು ಹೇಳಿ, ನಿರೀಕ್ಷೆಯನ್ನು ಹೆಚ್ಚು ಮಾಡಿದ್ದಾರೆ. ಈಗಿನ ಸನ್ನಿವೇಶಕ್ಕೆ ಒಂದು ಕಡೆ ಬೆಳವಣಿಗೆಯ ಯಂತ್ರಕ್ಕೆ ಇಂಧನ ತುಂಬಬೇಕು, ಮತ್ತೊಂದು ಕಡೆ ಗ್ರಾಹಕರು ಹೆಚ್ಚು ಖರ್ಚು ಮಾಡುವುದನ್ನು ಉತ್ತೇಜಿಸಿ, ಆರ್ಥಿಕ ಚಟುವಟಿಕೆಯನ್ನು ಪ್ರೋತ್ಸಾಹಿಸಬೇಕು.
2021-22ರ ಹಣಕಾಸು ವರ್ಷದ ಬಜೆಟ್: ಪ್ರಮುಖ ವಿಷಯಗಳು
ಅಷ್ಟೇ ಅಲ್ಲ, ಬೇಡಿಕೆ ಚೇತರಿಕೆ ಕಾಣಬೇಕು, ಭಾರತದಲ್ಲಿ ಉದ್ಯಮ ಆರಂಭಿಸುವುದು ಸಲೀಸು ಎಂಬ ವಾತಾವರಣವನ್ನು ಸೃಷ್ಟಿಸಬೇಕು. ಈ ಎಲ್ಲದರ ಹಿನ್ನೆಲೆಯಲ್ಲಿ ಜನಸಾಮಾನ್ಯರು ಹಾಗೂ ಕೈಗಾರಿಕೆ ವಲಯ ಬಜೆಟ್ 2021ರಿಂದ ನಿರೀಕ್ಷೆ ಮಾಡುತ್ತಿರುವುದೇನು ಎಂಬ ಬಗ್ಗೆ ಈ ಲೇಖನದ ಮೂಲಕ ತಿಳಿಯಲು ಪ್ರಯತ್ನಿಸುತ್ತಿದ್ದೇವೆ.
ಕುಟುಂಬದ ಖರ್ಚು ಉತ್ತೇಜನ ಮತ್ತು ಉಳಿತಾಯದ ನಿರೀಕ್ಷೆ/ಶಿಫಾರಸುಗಳು
ಖಾಸಗಿ ಬಳಕೆ ಉತ್ತೇಜಿಸಬೇಕು ಮತ್ತು ಖರ್ಚು ಮಾಡುವ ಆದಾಯ ಜನರ ಕೈಲಿ ಹೆಚ್ಚು ಉಳಿಯಬೇಕು. ಆ ಕಾರಣದಿಂದ ವೈಯಕ್ತಿಕವಾಗಿ ನೇರ ಆದಾಯ ತೆರಿಗೆ ಸ್ಲ್ಯಾಬ್ ಹೆಚ್ಚಿಸುವ ಬಗ್ಗೆ ಚಿಂತನೆ ಮಾಡಬಹುದು. ನಾನ್ ಕಾರ್ಪೊರೇಟ್ ಆದಾಯ ತೆರಿಗೆ ದರವನ್ನು ಕಡಿಮೆ ಮಾಡಬಹುದು. ಹಣದುಬ್ಬರಕ್ಕೆ ತಕ್ಕಂತೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80C ಅಡಿಯಲ್ಲಿ ಒಟ್ಟಾರೆ ಹೂಡಿಕೆ ಹೆಚ್ಚಳ ಮಾಡಬಹುದು. ಸದ್ಯದ ಕೊರೊನಾ ಸನ್ನಿವೇಶಕ್ಕೆ ಆರೋಗ್ಯ ಪರೀಕ್ಷೆಗೆ ಇರುವ 5000 ರುಪಾಯಿಯ ವಿನಾಯಿತಿ ಮೊತ್ತ ಹೆಚ್ಚಿಸಬಹುದು. ಸದ್ಯದ ಸ್ಥಿತಿಯಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ತೀರಾ ಅಗತ್ಯ.
ಈಚಿನ ದಿನಗಳಲ್ಲಿ ವರ್ಕ್ ಫ್ರಮ್ ಹೋಮ್ ಸಾಮಾನ್ಯ ಎಂಬಂತಾಗಿದೆ. ಕಮ್ಯುನಿಕೇಷನ್ ಮತ್ತು ಮೂಲಸೌಕರ್ಯಕ್ಕಾಗಿ ವೇತನದಾರರು ಹೆಚ್ಚಿನ ಖರ್ಚು ಮಾಡುತ್ತಿದ್ದಾರೆ. ಇನ್ನು ಸ್ವಂತ ಮನೆಗೆ ಸಹ ಬೇಡಿಕೆ ಹೆಚ್ಚಾಗಿದೆ. ಬಹಳ ಮಂದಿ ಭವಿಷ್ಯದಲ್ಲಿ ಸ್ವಂತ ಮನೆಗೆ ತೆರಳಲು ಹಾಗೂ ಅಲ್ಲಿ ಕೆಲಸ ಮಾಡುವುದಕ್ಕೆ ದೊಡ್ಡದೊಂದು ಸ್ಥಳಾವಕಾಶ ಮಾಡಿಕೊಳ್ಳಬೇಕಾಗುತ್ತದೆ. ಇವೆಲ್ಲವನ್ನೂ ಗಮನಿಸಬೇಕಾದ ಸರ್ಕಾರ, ಮನೆ ಸಾಲದ ಮೇಲೆ ಬಡ್ಡಿ ಕಡಿತಕ್ಕೆ ಇರುವ ತೆರಿಗೆ ವಿನಾಯಿತಿಯನ್ನು ಎರಡು ಲಕ್ಷದಿಂದ ಮೂರು ಲಕ್ಷ ರುಪಾಯಿಗೆ ಏರಿಸುವ ಬಗ್ಗೆ ಸರ್ಕಾರ ಆಲೋಚಿಸಬೇಕು.
ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ
ಭಾರತದ ಬೆಳವಣಿಗೆಗೆ ಉದ್ಯೋಗ ಸೃಷ್ಟಿ ತೀರಾ ಅಗತ್ಯ. ಸದ್ಯಕ್ಕೆ ತೆರಿಗೆದಾರರು ಸೆಕ್ಷನ್ 80JJAA ಅಡಿಯಲ್ಲಿ ಉದ್ಯೋಗಿಗಳ ಹೆಚ್ಚುವರಿ ವೆಚ್ಚದ ಜತೆಗೆ ಮೂರು ಅಸೆಸ್ ಮೆಂಟ್ ವರ್ಷ 30% ವಿನಾಯಿತಿ ಕ್ಲೇಮ್ ಮಾಡಬಹುದು. ಆದರೆ ಆ ವಿನಾಯಿತಿಯು ಯಾರಿಗೆ ತಿಂಗಳಿಗೆ 25,000 ರುಪಾಯಿಗಿಂತ ಹೆಚ್ಚಿನ ಸಂಬಳ ಬರುವುದಿಲ್ಲವೋ ಅಂಥವರಿಗೆ ಅನ್ವಯಿಸುತ್ತದೆ. ಈ ಮಿತಿಯನ್ನು 25,000 ರುಪಾಯಿಯಿಂದ 50,000 ರು.ಗೆ ಏರಿಕೆ ಮಾಡಿ, ಕೌಶಲಯುಕ್ತ ಉದ್ಯೋಗ ಸೃಷ್ಟಿಗೆ ಕಾರಣ ಆಗಬೇಕು.
ಈ ವರ್ಷದ ಬಹುತೇಕ ಸಮಯ ಉದ್ಯಮವು ದೇಶಾದ್ಯಂತದ ಲಾಕ್ ಡೌನ್ ಕಾರಣಕ್ಕೆ ಕಾರ್ಯ ನಿರ್ವಹಿಸಿಲ್ಲ. ಆದರೂ ಆ ಅವಧಿಯಲ್ಲಿ ಸಿಬ್ಬಂದಿಗೆ ವೇತನ ನೀಡಿದರು. ಆ ಪ್ರಕಾರವಾಗಿ, ಲಾಕ್ ಡೌನ್ ಅವಧಿಯಲ್ಲಿ ಪಾವತಿಸಿದ ವೇತನದ 150ರಿಂದ 200 ಪರ್ಸೆಂಟ್ ಹೆಚ್ಚುವರಿ ವಿನಾಯಿತಿ ನೀಡಬೇಕು. ಆ ಮೂಲಕ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡಬೇಕು.
ಉದ್ಯಮ ಆರಂಭ ಸಲೀಸಾಗಬೇಕು
ಚೀನಾದಿಂದ ಹೊರಬರುತ್ತಿರುವ ಉದ್ಯಮಗಳಿಗೆ ಭಾರತವು ಆಯ್ಕೆ ಎನ್ನಬೇಕಾದರೆ ಇಲ್ಲಿನ ಪೂರೈಕೆ ಜಾಲ ಬಲಗೊಳ್ಳಬೇಕು. ತೆರಿಗೆ ಕಾನೂನುಗಳು ಸರಳಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಟಿಡಿಎಸ್ ಮತ್ತು ಟಿಸಿಎಸ್ ನಿಯಮದ ವ್ಯಾಪ್ತಿಯನ್ನು ಪುನರ್ ಪರಿಶೀಲಿಸಬೇಕು. ಆದಾಯ ತೆರಿಗೆ ಲೆಕ್ಕಾಚಾರ ವಿಧಾನ ತೆಗೆದುಹಾಕಬೆಕು ಮತ್ತು ಅನಿವಾಸಿ ತೆರಿಗೆದಾರರಿಗೆ ಆದಾಯ ರಿಟರ್ನ್ಸ್ ಫೈಲಿಂಗ್ ನಿಯಮಾವಳಿಗಳಿಂದ ವಿನಾಯಿತಿ ನೀಡಬೇಕು. ಅದರಲ್ಲೂ ಈಚೆಗೆ ಇ ಕಾಮರ್ಸ್ ವ್ಯವಹಾರದ ಮೇಲೆ ತಂದಿರುವ ಶುಲ್ಕದ ಬಗ್ಗೆ ಕೆಲವು ಸ್ಪಷ್ಟನೆ ನೀಡಬೇಕು. ಈ ಪ್ರಯತ್ನಗಳಿಂದ ಹೂಡಿಕೆದಾರರ ವಿಶ್ವಾಸ ಗಳಿಸಬಹುದು. ಭಾರತದಲ್ಲಿ ಸಲೀಸಾಗಿ ಉದ್ಯಮ ನಡೆಸಬಹುದು ಎಂಬ ಭಾವನೆ ಮೂಡಿಸಿ, ಮತ್ತೆ ಆರ್ಥಿಕತೆಗೆ ಜೀವ ತುಂಬಬಹುದು.