ನಮ್ಮನ್ನು ಗುಲಾಮರಂತೆ ನೋಡಲಾಗಿದೆ: ಬೈಜೂಸ್ ಉದ್ಯೋಗಿ ಗಂಭೀರ ಆರೋಪ
ಪ್ರಸಿದ್ಧ ಆಪ್ಗಳಲ್ಲಿ ಒಂದಾದ ಬೈಜೂಸ್ ಸಂಸ್ಥೆಯ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿದೆ. ಸಂಸ್ಥೆಯು ಶೋಘಣೆ, ದೌರ್ಜನ್ಯವನ್ನು ಮಾಡಿ ನಮ್ಮಲ್ಲಿ ಕೆಲಸ ಮಾಡಿಸಿ ಆದಾಯವನ್ನು ಹೆಚ್ಚಿಸಿದೆ ಎಂದು ಬೈಜೂಸ್ನ ಹಲವಾರು ಉದ್ಯೋಗಿಗಳು ಆರೋಪ ಮಾಡಿದ್ದಾರೆ. ಅತೀ ಕಡಿಮೆ ಆದಾಯವಿರುವ ಕುಟುಂಬವನ್ನು ಟಾರ್ಗೆಟ್ ಮಾಡಿ, ಅವರ ಬೈಜೂನ್ ಕೋರ್ಸ್ ಖರೀದಿ ಮಾಡುವಂತೆ ಒತ್ತಾಯ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಕೂಡಾ ದೂರಲಾಗಿದೆ.
2011ರಲ್ಲಿ ಬೈಜೂಸ್ ಅನ್ನು ಸ್ಥಾಪನೆ ಮಾಡಲಾಗಿದ್ದು, ಇದು 2015ರಲ್ಲಿ ತನ್ನ ಕಲಿಕಾ ಆಪ್ ಅನ್ನು ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಈ ಸಂಸ್ಥೆಯು ಮಲ್ಟಿ-ಬಿಲಿಯನರ್ ಸಂಸ್ಥೆಯಾಗಿ ಪರಿವರ್ತನೆಯಾಗಿದೆ. ಹೆಚ್ಚಾಗಿ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳು ಬೈಜೂಸ್ನ ಆನ್ಲೈನ್ ಕ್ಲಾಸ್ಗಳನ್ನು ಹಾಜರಾಗುವಂತೆ ನೋಡಿಕೊಳ್ಳಲು ಆರಂಭ ಮಾಡಿದ್ದರು.
ಬೈಜೂಸ್ ನಿಂದ ಆಕಾಶ್ ಎಜುಕೇಷನ್ 7300 ಕೋಟಿ ರು.ಗೂ ಹೆಚ್ಚು ಮೊತ್ತಕ್ಕೆ ಖರೀದಿ
ಆದರೆ ಪ್ರಸ್ತುತ ಸಂಸ್ಥೆಯು ಭಾರೀ ನಷ್ಟವನ್ನು ಕಂಡಿದೆ. ಆದಾಯ ಕುಸಿತದ ನಡುವೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಈ ನಡುವೆ ಸಂಸ್ಥೆಯ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿಬಂದಿದೆ. ಪ್ರಸ್ತುತ ಬೈಜೂಸ್ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ 18 ಉದ್ಯೋಗಿಗಳು ಈ ಹಿಂದೆ ಕಾರ್ಯನಿರ್ವಹಣೆ ಮಾಡಿದ್ದ 8 ಮಂದಿ ಸೇರಿ ಒಟ್ಟು ಸುಮಾರು 21 ಬೈಜೂಸ್ ವಿರುದ್ಧ ಕಿಡಿಕಾರಿದ್ದಾರೆ.
ಏನೆಲ್ಲ ದೌರ್ಜನ್ಯಗಳು ನಡೆಯುತ್ತಿದೆ ಎಂಬ ಆರೋಪ?
ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ಅಧಿಕ ಅವಧಿ ಕೆಲಸ ಮಾಡಿಸಲಾಗುತ್ತಿದೆ. ದೈಹಿಕ ಹಾಗೂ ಮಾತಿನ ಮೂಲಕ ದೌರ್ಜನ್ಯ ಮಾಡಲಾಗುತ್ತಿದೆ. ಸಂಸ್ಥೆಯ ಆಪ್ನಲ್ಲಿ ಜನರು ಕೋರ್ಸ್ ಖರೀದಿ ಮಾಡದಿದ್ದರೆ ನಮ್ಮ ಮೇಲೆ ಒತ್ತಡ ಹೇರಲಾಗುತ್ತದೆ. ವಾರಕ್ಕೆ 72 ಗಂಟೆಗೂ ಅಧಿಕ ಕಾಲ ಕೆಲಸ ಮಾಡಲು ಒತ್ತಡ ಹೇರಲಾಗುತ್ತದೆ ಎಂಬ ಆರೋಪಗಳು ಕೇಳಿಬಂದಿದೆ. 72 ಗಂಟೆಗೂ ಅಧಿಕ ಕಾಲ ಕೆಲಸ ಮಾಡದಿದ್ದರೆ ಕೆಲಸ ತೊರೆದು ಹೋಗಿ ಎಂದು ಕೂಡಾ ಹೇಳಲಾಗುತ್ತಿದೆ. ಬೈಜೂಸ್ ಉದ್ಯೋಗಿಗಳು ಹೆಚ್ಚಾಗಿ ಕಾಲೇಜು ಪದವಿದರರಾಗಿದ್ದಾರೆ ಹಾಗೂ ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬಕ್ಕೆ ಸೇರಿದವರು ಆಗಿದ್ದಾರೆ. ಆದ್ದರಿಂದಾಗಿ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿ ಈ ಉದ್ಯೋಗಿಗಳು ಅವಧಿಗೂ ಅಧಿಕ ದುಡಿಯುತ್ತಿದ್ದಾರೆ ಎಂಬ ಮಾಹಿತಿಯೂ ಕೂಡಾ ಲಭ್ಯವಾಗಿದೆ.
ಗ್ರಾಹಕರಿಗೂ ದೌರ್ಜನ್ಯವೇ, ಹೇಳುವುದೇನು?
ಇನ್ನು ಮಾಧ್ಯಮ ಸಂಸ್ಥೆಯೊಂದು 22 ಮಂದಿ ಬೈಜೂಸ್ ಗ್ರಾಹಕರೊಂದಿಗೆಯೂ ಮಾತನಾಡಿದೆ. ಗ್ರಾಹಕರು ಬೈಜೂಸ್ ಕೋರ್ಸ್ ಅನ್ನು ಖರೀದಿ ಮಾಡುವಂತೆ ಒತ್ತಡ ಹೇರಲಾಗುತ್ತದೆ. ಖರೀದಿ ಮಾಡಿದರೆ, ಎಲ್ಲ ತರಗತಿಯನ್ನು ಮಕ್ಕಳು ಹಾಜರಾಗಬೇಕು ಎಂದು ಒತ್ತಾಯಿಸುತ್ತದೆ. ಹಾಗೆಯೇ ಸಾಲವನ್ನು ಪಡೆಯವಂತೆ ಮನವೊಲಿಸುತ್ತದೆ. ಅಂತಿಮವಾಗಿ ನಾವು ನಮ್ಮಲ್ಲಿ ಇದ್ದ ಹಣವನ್ನು ಕೂಡಾ ಕಳೆದುಕೊಳ್ಳುತ್ತೇವೆ. ಸಾಲದ ಹೊರೆಯು ಇರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಬೈಜೂನ್ನಲ್ಲಿ ಉದ್ಯೋಗ ಮಾಡಿದವರ ಆರೋಪವೇನು?
ಬೈಜೂನ್ನಲ್ಲಿ ಉದ್ಯೋಗ ಮಾಡುತ್ತಿದ್ದ ಪ್ರತೀಕ್ ಮಖೀಜ, ನನಗೆ ಪ್ರತಿದಿನ ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ನನ್ನ ಮ್ಯಾನೇಜರ್ ಕೂಗಾಡುತ್ತಿದ್ದರು. ನಾನು ವಾರದ ಏಳು ದಿನವೂ ಕೂಡಾ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಹಾಗೆಯೇ ಉದ್ಯೋಗಿಗಳ ನಡುವೆಯೇ ಜಗಳವಾಗುವಂತೆ ಮಾಡುತ್ತಿದ್ದರು ಎಂದಿದ್ದಾರೆ. ನಾನು ಒಂದು ಬಾವಿಯಲ್ಲಿ ಸಿಲುಕಿರುವಂತೆ ನನಗೆ ಭಾಸವಾಗಿತ್ತು. ಮೇಲೆ ಏರಲೂ ಕೂಡಾ ಸಾಧ್ಯವಿಲ್ಲದ, ಹೊರಗಿನ ಪ್ರಪಂಚವನ್ನು ಅನುಭವಿಸಲು ಸಾಧ್ಯವಾಗದಂತಹ ಬಾವಿಯಲ್ಲಿ ಸಿಲುಕಿರುವಂತೆ ನನಗೆ ಅನಿಸಿತ್ತು. ಕೆಲಸ ಹಾಗೂ ನಮ್ಮ ವೈಯಕ್ತಿಕ ಜೀವನದ ನಡುವೆ ಯಾವುದೇ ವ್ಯತ್ಯಾಸವೇ ಇಲ್ಲದಂತೆ ಆಗಿತ್ತು ಎಂದು ಸುಮಾರು 18 ತಿಂಗಳುಗಳ ಕಾಲ ಉದ್ಯೋಗ ಮಾಡಿರುವ ಪ್ರತೀಕ್ ಮಖೀಜ ಹೇಳಿದ್ದಾರೆ.
ಗುಲಾಮರಂತಿದ್ದೆವು ನಾವು!
"ನಮ್ಮನ್ನು ಗುಲಾಮರಂತೆ ನೋಡಲಾಗುತ್ತಿತ್ತು. ನಮ್ಮನ್ನು ಜರ್ಜರಿತರನ್ನಾಗಿಸಿ ಅದರಿಂದ ಅವರು ಆದಾಯ ಮಾಡುತ್ತಿರುವುದೇ?," ಎಂದು ಕೂಡಾ ಪ್ರತೀಕ್ ಮಖೀಜ ಹೇಳಿದ್ದಾರೆ. ಇನ್ನು ಉದ್ಯೋಗವನ್ನು ತೊರೆದ ಮಖೀಜ ಆರ್ಥಿಕ ಸಂಕಷ್ಟ ಉಂಟಾದಾಗ ಜುಲೈನಲ್ಲಿ ಮತ್ತೆ ಸಂಸ್ಥೆಯನ್ನು ಸೇರ್ಪಡೆಯಾಗಿದ್ದು, ಆದರೆ ಮ್ಯಾನೇಜರ್ನ ನಡೆಯ ಬಗ್ಗೆ ಆರೋಪ ಮಾಡಿದ ಬಳಿಕ ಒಂದು ತಿಂಗಳ ಕಾಲ ಆಗಸ್ಟ್ನಲ್ಲಿ ಅಮಾನತು ಮಾಡಲಾಗಿದೆ. ಬಳಿಕ ಅಕ್ಟೋಬರ್ನ್ಲಿ ಬೈಜೂಸ್ ಅನ್ನು ಪ್ರತೀಕ್ ಮಖೀಜ ತೊರೆದಿದ್ದಾರೆ. "ನಾನು ಕೊನೆಗೆ ನನ್ನ ಮಾನಸಿಕ ಸ್ಥಿತಿ ಸರಿಯಾಗಲು ವೃತ್ತಿಪರರ ಸಹಾಯಪಡೆಯಬೇಕಾಯಿತು," ಎಂದು ತಿಳಿಸಿದ್ದಾರೆ. ಆದರೆ ಬೈಜೂಸ್ ಮಾತ್ರ ನಮ್ಮ ಸಂಸ್ಥೆಯು ಗ್ರಾಹಕರ ಗೌರವ ಹಾಗೂ ತೃಪ್ತಿಗೆ ಪ್ರಾತಿನಿಧ್ಯ ನೀಡುತ್ತದೆ ಎಂದು ಹೇಳಿದೆ.