ಬುಧವಾರ ಭಾರತ್ ಬಂದ್ ಇಲ್ಲ, ಮುಷ್ಕರ ಮಾತ್ರ : ಆದರೆ ಬ್ಯಾಂಕಿಂಗ್ ಸೇವೆ ವ್ಯತ್ಯಯ?
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ಕೆಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 10 ಕಾರ್ಮಿಕ ಸಂಘಟನೆಗಳು ಬುಧವಾರ (ಜನವರಿ 08) ಮುಷ್ಕರಕ್ಕೆ ಕರೆ ನೀಡಿದ್ದು, ಇದು ಭಾರತ್ ಬಂದ್ ಅಲ್ಲ ಎಂದು ತಿಳಿಸಿವೆ. ಆದರೆ ಈ ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಎಡಪಕ್ಷಗಳೊಂದಿಗೆ ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮುಷ್ಕರಕ್ಕೆ ಬೆಂಬಲ ನೀಡಿವೆ. ಈ ಮುಷ್ಕರದಲ್ಲಿ ಹೆಚ್ಚಿನ ಬ್ಯಾಂಕ್ ನೌಕರರು ಪ್ರತಿಭಟನೆಗೆ ಇಳಿಯಲಿದ್ದಾರೆ. ಹೀಗಾಗಿ ಬುಧವಾರ ಬ್ಯಾಂಕ್ ವ್ಯವಹಾರಗಳಿಗೂ ಅದರ ಬಿಸಿ ತಟ್ಟಲಿದೆ.
ಎಸ್ಬಿಐ ಬ್ಯಾಂಕ್ ಸೇವೆ ಇರಲಿದೆ
ರಾಷ್ಟ್ರವ್ಯಾಪಿ ಮುಷ್ಕರವು ತನ್ನ ಬ್ಯಾಂಕಿಂಗ್ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಗ್ರಾಹಕರಿಗೆ ಅನಾನುಕೂಲ ಆಗದ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಬ್ಯಾಂಕ್ ಆಫ್ ಬರೋಡಾ ಮೇಲೆ ಮಷ್ಕರದ ಪರಿಣಾಮ ಬೀಳಲಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದು, ಇನ್ನುಳಿದ ಬ್ಯಾಂಕ್ಗಳ ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ.
ಯಾವ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ
ಬುಧವಾರ ಕರೆ ನೀಡಿರುವ ಬಂದ್ನಲ್ಲಿ 25 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಾರ್ಮಿಕ ಸಂಘಟನೆಗಳು ಅಂದಾಜಿಸಿವೆ. ಐ.ಎನ್.ಟಿ.ಯು.ಸಿ, ಎ.ಐ.ಟಿ.ಯು.ಸಿ. ಹೆಚ್.ಎಂ.ಎಸ್., ಸಿ.ಐ.ಟಿ.ಯು., ಎ.ಐ.ಯು.ಟಿ.ಯು.ಸಿ., ಟಿ.ಯು.ಸಿ.ಸಿ., ಸೇವಾ, ಎ.ಐ.ಸಿ.ಸಿ.ಟಿ.ಯು., ಎಲ್.ಪಿ.ಎಫ್., ಯು.ಟಿ.ಯು.ಸಿ. ಮತ್ತು ಇನ್ನಿತರ ಸಹ ಕಾರ್ಮಿಕ ಸಂಘಟನೆಗಳು ಈ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.
ರಾಜ್ಯದಲ್ಲಿ ಬಸ್, ಆಟೋ, ಕ್ಯಾಬ್ ಸೇವೆ ಇರುತ್ತಾ?
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು, ಆಟೊ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮತ್ತು ಸರಕು ಸಾಗಣೆ ಚಾಲಕರು ಮತ್ತು ಮಾಲೀಕರ ಸಂಘಗಳು ಮುಷ್ಕರಕ್ಕೆ ಬಾಹ್ಯ ಬೆಂಬಲ ನೀಡಿವೆ. ಆದರೆ, ಸೇವೆ ಸ್ಥಗಿತಗೊಳಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು, ಆಟೊ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳು ಎಂದಿನಂತೆ ಸೇವೆ ಒದಗಿಸಲಿವೆ.
ಕಾರ್ಮಿಕ ಸಂಘಟನೆಗಳ ಬೇಡಿಕೆ ಏನು?
ದುಡಿಯುವ ಜನರ ಹಕ್ಕುಗಳನ್ನು ಸಂರಕ್ಷಿಸಿ, ಪರ್ಯಾಯ ಆರ್ಥಿಕ ನೀತಿಗಳನ್ನು ಜಾರಿಗೆ ತರಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ 21 ಸಾವಿರ ರೂ. ವೇತನ ನಿಗದಿ ಸೇರಿದಂತೆ ಒಟ್ಟು 13 ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳು ಮುಂದಿಟ್ಟಿವೆ.