ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಕಚೇರಿ ಯೆಸ್ ಬ್ಯಾಂಕ್ ಸುಪರ್ದಿಗೆ
ಉದ್ಯಮಿ ಅನಿಲ್ ಅಂಬಾನಿಗೆ ಯೆಸ್ ಬ್ಯಾಂಕ್ ನೋಟಿಸ್ ನೀಡಿದೆ. ಅನಿಲ್ ಮುನ್ನಡೆಸುತ್ತಿರುವ ರಿಲಯನ್ಸ್ ಗ್ರೂಪ್ ಗೆ ಸೇರಿದ ಮುಂಬೈನ ಸಾಂತಾಕ್ರೂಜ್ ನಲ್ಲಿ ಇರುವ ಮುಖ್ಯ ಕಚೇರಿ ಮತ್ತು ದಕ್ಷಿಣ ಮುಂಬೈನಲ್ಲಿ ಇರುವ ಇತರ ಎರಡು ಕಚೇರಿಗಳನ್ನು ಸುಪರ್ದಿಗೆ ಪಡೆಯುವುದಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ಯೆಸ್ ಬ್ಯಾಂಕ್ಗೆ ಸಾಲ ಮರುಪಾವತಿಸಲು ಬದ್ಧ: ರಿಲಯನ್ಸ್ ಗ್ರೂಪ್
ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಗೆ ನೀಡಿದ ಸಾಲದ ಹಣ 2,892 ಕೋಟಿ ರುಪಾಯಿಯ ವಸೂಲಿಗಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದೆ. ಇನ್ನು ನಗೀನ್ ಮಹಲ್ ನಲ್ಲಿ ಇರುವ ಎರಡು ಅಂತಸ್ತಿನ ಕಚೇರಿ ಸ್ಥಳವನ್ನು ಕೂಡ ಬ್ಯಾಂಕ್ ವಶಕ್ಕೆ ಪಡೆಯಲು ಕ್ರಮ ತೆಗೆದುಕೊಂಡಿದೆ. ಸಾಲ ಬಾಕಿ ಉಳಿಸಿಕೊಂಡ ಸುಸ್ತಿದಾರರ ಮೇಲೆ ಕಾನೂನುಬದ್ಧವಾಗಿ ಏನು ಕ್ರಮ ಕೈಗೊಳ್ಳಬಹುದೋ ಆ ಪ್ರಕಾರ ಯೆಸ್ ಬ್ಯಾಂಕ್ ಮುಂದುವರಿಯುತ್ತಿದೆ.
21,432 ಚದರ ಮೀಟರ್ ಜಾಗದ ಕಚೇರಿ
ರಿಲಯನ್ಸ್ ಗ್ರೂಪ್ ಮುಖ್ಯ ಕಚೇರಿಯು 21,432 ಚದರ ಮೀಟರ್ ಜಾಗದಲ್ಲಿ ಇದೆ. ಈ ಸ್ಥಳಕ್ಕೆ ಎರಡು ದಶಕಗಳ ಪರಂಪರೆ ಇದೆ. ಅಂದ ಹಾಗೆ ಸಾಂತಾಕ್ರೂಜ್ ನಲ್ಲಿ ಇರುವ ಕಚೇರಿಗೆ ರಿಲಯನ್ಸ್ ಗ್ರೂಪ್ 2018ರಲ್ಲಿ ಸ್ಥಳಾಂತರ ಆಗಿತ್ತು. ಮುಂಬೈ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ಈ ಕಚೇರಿ ಇದೆ. ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಬಳಿಯೇ ರಿಲಯನ್ಸ್ ಹಣಕಾಸು ಸೇವೆ ಒದಗಿಸುವ ಹಲವು ಕಂಪೆನಿಗಳಿವೆ. ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಹೌಸಿಂಗ್ ಫೈನಾನ್ಸ್, ರಿಲಯನ್ಸ್ ಜನರಲ್ ಇನ್ಷೂರೆನ್ಸ್ ಸೇರಿದಂತೆ ಗ್ರೂಪ್ ನ ಇತರ ಸಂಸ್ಥೆಗಳಿವೆ. ಈಚೆಗೆ ಕಂಪೆನಿಗಳ ಕಾರ್ಯ ನಿರ್ವಹಣೆ ಕುಗ್ಗಿದ ಮೇಲೆ ಹಲವು ಕಚೇರಿಗಳನ್ನು ಒಟ್ಟು ಮಾಡಿ ನಾರ್ಥ್ ವಿಂಗ್ ನಲ್ಲಿ ಚಟುವಟಿಕೆ ನಡೆಯುತ್ತಿದೆ.
ಸಂಕಷ್ಟಕ್ಕೆ ಸಿಲುಕಿದ ಯೆಸ್ ಬ್ಯಾಂಕ್
ಖಾಲಿ ಮಾಡಿದ ಆಸ್ತಿಗಳನ್ನು ಜೆಎಲ್ ಎಲ್ ಜತೆ ಲೀಸಿಂಗ್ ಗೆ ಲಿಸ್ಟ್ ಮಾಡಲಾಗಿದೆ. ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ನಂತರ ಬಹುತೇಕ ಸಿಬ್ಬಂದಿಯನ್ನು ವರ್ಕ್ ಫ್ರಮ್ ಹೋಮ್ ಗೆ ಸೂಚಿಸಲಾಗಿದೆ. ಆ ನಂತರ ಇನ್ನಷ್ಟು ಕಚೇರಿಗಳ ಕಾರ್ಯ ನಿರ್ವಹಣೆ ಒಂದೇ ಕಡೆ ಮಾಡಲಾಗುತ್ತಿದೆ. ಬ್ಯಾಡ್ ಡೆಟ್ (ಕೊಟ್ಟ ಸಾಲ ಮರುಪಾವತಿ ಆಗದಿರುವುದು) ನಿಂದಾಗಿ ಈ ವರ್ಷದ ಮಾರ್ಚ್ ನಲ್ಲಿ ಯೆಸ್ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿತ್ತು. ಬ್ಯಾಂಕ್ ಗೆ ಅನಿಲ್ ಅಂಬಾನಿ ಸಮೂಹದಿಂದ ಸಾಲದ ಬಾಕಿ ಬರಬೇಕಿತ್ತು. ಆ ಮೊತ್ತಕ್ಕೆ 12 ಸಾವಿರ ಕೋಟಿ ರುಪಾಯಿ ತನಕ ವಸೂಲಿ ಅವಕಾಶ ಹೊಂದಿದೆ.
ಮೇ 5ನೇ ತಾರೀಕು 60 ದಿನದ ನೋಟಿಸ್
ಕಳೆದ ಇಪ್ಪತ್ತು ವರ್ಷದಲ್ಲಿ ದೊಡ್ಡ ಮೊತ್ತದ ಸಾಲ ಪಡೆದ ಅನಿಲ್ ಅಂಬಾನಿ, ವ್ಯಾಪಾರ ವಿಸ್ತರಣೆಗೆ ಪ್ರಯತ್ನಿಸಿದರು. ಆದರೆ ಅದರಿಂದ ಸಾಲ ಹೆಚ್ಚಾಯಿತೇ ವಿನಾ ಲಾಭ ಕೈ ಹತ್ತಲಿಲ್ಲ. ಪಡೆದ ಸಾಲ ಹಿಂತಿರುಗಿಸುವುದಕ್ಕೆ ಕೂಡ ನಗದು ಇಲ್ಲದಂತಾಯಿತು. ಕೆಲವು ಸಾಲ ವ್ಯವಹಾರಗಳು ಕಾನೂನು ವ್ಯಾಜ್ಯದಲ್ಲಿ ಸಿಲುಕಿಕೊಂಡವು. ಯೆಸ್ ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ರಿಲಯನ್ಸ್ ಸಮೂಹಕ್ಕೆ ಮೇ 5ನೇ ತಾರೀಕು 60 ದಿನದ ನೋಟಿಸ್ ನೀಡಿ, ಸಾಲ ಮರುಪಾವತಿಗೆ ಸೂಚಿಸಲಾಗಿದೆ. ಕಾನೂನು ಬದ್ಧವಾಗಿ ಇರುವ ಕಾಯ್ದೆ ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ಈ ವರೆಗೆ ಯಾವುದೇ ಸಾಲದ ಮೊತ್ತ ಹಿಂತಿರುಗಿಸದ ಕಂಪೆನಿಯ ಆಸ್ತಿಯನ್ನು ಸುಪರ್ದಿಗೆ ತೆಗೆದುಕೊಂಡು, ಕೋರ್ಟ್ ಅನುಮತಿಯ ಅಗತ್ಯ ಕೂಡ ಇಲ್ಲದಂತೆ ಅವುಗಳನ್ನು ಮಾರಿ, ಸುಸ್ತಿದಾರರ ಬಾಕಿಗೆ ಜಮೆ ಮಾಡಿಕೊಳ್ಳಬಹುದಾಗಿದೆ.