Budget 2022: ಬಜೆಟ್ನಿಂದ ಹಣಕಾಸು ವಲಯಕ್ಕೆ ಲಭಿಸಿದ್ದೇನು?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನಾಲ್ಕನೇ ಬಜೆಟ್ 2022 ರ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್ನಲ್ಲಿ ಆರ್ಥಿಕ ಉತ್ತೇಜನಕ್ಕೆ ಕೆಲವು ಪ್ರಸ್ತಾಪಗಳನ್ನು ಮಾಡಿದ್ದಾರೆ. ಆದರೆ ಈ ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿರುವ ಸಾಮಾನ್ಯ ಜನರ ಜೀವನಕ್ಕೆ ಅನುಕೂಲಕರವಾದ ಯಾವ ಅಂಶವು ಈ ಬಜೆಟ್ನಲ್ಲಿ ಕಂಡು ಬಂದಿಲ್ಲ. ಆದರೆ ಹಣಕಾಸು ಕ್ಷೇತ್ರಕ್ಕೆ ಕೆಲವೊಂದು ಘೋಷಣೆಗಳನ್ನು ಮಾಡಲಾಗಿದೆ.
ಹೆಚ್ಚುತ್ತಿರುವ ಹಣದುಬ್ಬರ ಮತ್ತು ಮುಂದುವರಿದ ಕೋವಿಡ್ ಬಿಕ್ಕಟ್ಟಿನ ನಡುವೆ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕ್ರಮಗಳನ್ನು ಸರ್ಕಾರ ಕೊಂಚ ಕೈಗೊಳ್ಳುವ ಪ್ರಯತ್ನ ಮಾಡಿದಂತೆ ಕಂಡು ಬಂದಿದೆ. ಆದರೆ ಆದಾಯ ತೆರಿಗೆ ವಿನಾಯಿತಿ ಹೆಚ್ಚಳವನ್ನು ಮಾಡಿಲ್ಲ. ಇನ್ನು ಹಲವಾರು ಬೇಡಿಕೆಗಳನ್ನು ಹಣಕಾಸು ವಲಯದ ಪರವಾಗಿ ತಜ್ಞರು ಸರ್ಕಾರ ಮುಂದಿಟ್ಟಿದ್ದರು.
Budget 2022: ಆರ್ಥಿಕ ವಲಯಕ್ಕೆ ಸಿಕ್ಕಿದ್ದೇನು? ಮುಖ್ಯಾಂಶ ಇಲ್ಲಿದೆ
ಹೂಡಿಕೆಯನ್ನು ವೇಗಗೊಳಿಸಲು, ಡಿಜಿಟಲ್ ರೂಪಾಯಿ, ಡಿಜಿಟಲ್ ಪಾವತಿ ಉತ್ತೇಜನ, ಮೊದಲಾದ ಹಣಕಾಸು ವಲಯದಲ್ಲಿ ಡಿಜಿಟಲ್ ಅಳವಡಿಕೆಗೆ ಸಂಬಂಧಿಸಿದ ಹಲವಾರು ಪ್ರಸ್ತಾಪಗಳನ್ನು ಸರ್ಕಾರ ಮಾಡಿದೆ, ಹಾಗಾದರೆ ಈ ಬಜೆಟ್ನಲ್ಲಿ ಹಣಕಾಸು ವಲಯಕ್ಕೆ ಏನು ಲಭಿಸಿದೆ ಎಂದು ತಿಳಿಯಲು ಮುಂದೆ ಓದಿ...
ಬಜೆಟ್ನಿಂದ ಹಣಕಾಸು ವಲಯಕ್ಕೆ ಲಭಿಸಿದ್ದೇನು?
* ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ಜಾರಿಗೊಳಿಸಲಾಗುವುದು. ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಹಾಗೆಯೇ 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.
* ಸಹಕಾರ ಸಂಘಗಳ ಮೇಲಿನ ಸರ್ಚಾರ್ಜ್ ಇಳಿಕೆ ಮಾಡುವ ಕ್ರಮವನ್ನು ಸರ್ಕಾರವು ಕೈಗೊಂಡಿದೆ. ಶೇಕಡಾ 12ರಿಂದ ಶೇಕಡಾ 7ಕ್ಕೆ ಇಳಿಕೆ ಮಾಡಲು ಕೇಂದ್ರ ಸರ್ಕಾರವು ತೀರ್ಮಾನ ಮಾಡಿದೆ. 10 ಕೋಟಿಯೊಳಗಿನ ಆದಾಯದ ಸಹಕಾರ ಸಂಘಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಕೋ- ಆಪರೇಟಿವ್ ಸೊಸೈಟಿಗಳಿಗೂ ಇನ್ನು ಮುಂದೆ ಶೇ 15ರ ತೆರಿಗೆ. ತೆರಿಗೆ ಪದ್ಧತಿಯಲ್ಲಿ ಇರುವ ಹಲವು ಸಂಕೀರ್ಣ ಅಂಶಗಳನ್ನು ಸರಳಗೊಳಸಲಿ ಸರ್ಕಾರ ಮುಂದಾಗಿದೆ.
* 50 ವರ್ಷ ಕಾಲ ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಡಿಜಿಟಲೈಸೇಷನ್ ಹಾಗೂ ನಗರ ಯೋಜನೆಗಳಿಗಾಗಿ 50 ವರ್ಷಗಳ ಕಾಲ ಸಾಲ ನೀಡಲು ತೀರ್ಮಾನ ಮಾಡಲಾಗಿದೆ.
* ಆದಾಯ ತೆರಿಗೆ ಘೋಷಣೆ ಅಥವಾ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ವೇಳೆ ಯಾವುದಾದರೂ ಆದಾಯ ಬಿಟ್ಟುಹೋಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಹಾಗೂ ಹೊಸದಾಗಿ ಮತ್ತೊಮ್ಮೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಎರಡು ವರ್ಷಗಳ ಅವಕಾಶ ತೆರಿಗೆದಾರರಿಗೆ ದೊರೆಯಲಿದೆ. ಅಂಗ ವೈಕಲ್ಯ ಇರುವವರಿಗೆ ಹೆಚ್ಚುವರಿಯಾದ ತೆರಿಗೆ ಡಿಡಕ್ಷನ್. ಅಂಥವರ ಪೋಷಕರು, ಪಾಲಕರಿಗೆ ದೊರೆಯಲಿದೆ.
* ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಪ್ಡೇಟೆಡ್ ರಿಟರ್ನ್ ಫೈಲ್ ಮಾಡಬಹುದು. ಆ ಆದಾಯ ರಿಟರ್ನ್ ಸಲ್ಲಿಕೆ ಮಾಡಿದ ಎರಡು ವರ್ಷದೊಳಗೆ ಈ ಬದಲಾವಣೆಯನ್ನು ಮಾಡಬಹುದು. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿ ಜಾರಿಮಾಡಲಾಗುವುದು. ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ 2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ.
* 2022-23ರಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಡಿಜಿಟಲ್ ಹಣ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆರ್ಬಿಐ ತನ್ನದೇ ಆದ ವರ್ಚ್ಯುವಲ್ ಕರೆನ್ಸಿ ಆವೃತ್ತಿಯನ್ನು ಹೊರತರುವ ಪ್ರಕ್ರಿಯೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
* ಈ ಬಾರಿಯ ಬಜೆಟ್ನಲ್ಲಿ ಬಂಡವಾಳ ವೆಚ್ಚವನ್ನು (Capital Expenditure) ಶೇ 35.4ರಷ್ಟು ಹೆಚ್ಚಿಳ ಮಾಡಲಾಗಿದೆ. ದೇಶದ ರಾಷ್ಟ್ರೀಯ ಆಸ್ತಿ ಹೆಚ್ಚಿಸುವ ಉದ್ದೇಶಕ್ಕೆ ಈ ನಿಧಿ ಬಳಕೆಯಾಗಲಿದೆ. ಒಟ್ಟು ಜಿಡಿಪಿಯ ಶೇ 2.9ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. 2022-2023ರ ಆರ್ಥಿಕ ವರ್ಷದಲ್ಲಿ ಭಾರತ ಸರ್ಕಾರವು 10.9 ಲಕ್ಷ ಕೋಟಿ ರೂ. ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಬಳಸಲು ನಿರ್ಧಾರ ಮಾಡಲಾಗಿದೆ.
* ತೆರಿಗೆ ಪಾವತಿಯಲ್ಲಿ ಉಂಟಾದ ದೋಷವನ್ನು ಸರಿಪಡಿಸಲು ಅವಕಾಶವನ್ನು ಕೂಡಾ ಒದಗಿಸಲಾಗುತ್ತದೆ. ತೆರಿಗೆದಾರರು ಇದೀಗ ಸಂಬಂಧಿತ ಮೌಲ್ಯಮಾಪನ ವರ್ಷದಿಂದ 2 ವರ್ಷಗಳಲ್ಲಿ ನವೀಕರಿಸಿದ ರಿಟರ್ನ್ ಅನ್ನು ಸಲ್ಲಿಸಬಹುದು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್