ಬಜೆಟ್ ನಿರೀಕ್ಷೆ: ಚಿನ್ನ, ರತ್ನದ ಆಭರಣಗಳ ಮೇಲಿನ ಜಿಎಸ್ಟಿ ಕಡಿತ ಆಗುತ್ತಾ?
ನವದೆಹಲಿ, ಜನವರಿ 18: ಭಾರತದಲ್ಲಿ ಬಂಗಾರ ಮತ್ತು ದುಬಾರಿ ರತ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅನ್ನು ಶೇ.3 ರಿಂದ ಶೇ.1.25ಕ್ಕೆ ತಗ್ಗಿಸುವಂತೆ ಆಭರಣ ಮತ್ತು ರತ್ನಗಳ ಉದ್ಯಮದ ಅತ್ಯುನ್ನತ ಸಂಸ್ಥೆಯಾದ ಆಲ್ ಇಂಡಿಯಾ ಜೆಮ್ ಮತ್ತು ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (GJC) ಮನವಿ ಮಾಡಿಕೊಂಡಿದೆ.
ಮುಂಬರುವ ಕೇಂದ್ರ ಬಜೆಟ್ನಲ್ಲಿ ಆಭರಣಗಳ ಮೇಲಿನ ಜಿಎಸ್ಟಿ ದರವನ್ನು ಈಗಿರುವ ಶೇಕಡಾ 3 ರಿಂದ ಶೇಕಡಾ 1.25ಕ್ಕೆ ಇಳಿಸಲು ಪ್ರಯತ್ನಿಸಲಾಗುತ್ತಿದೆ. ಇದರ ಜೊತೆಗೆ ಜಿಜೆಸಿ ಸಹ ಪ್ಯಾನ್ ಕಾರ್ಡ್ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಲು ಹಣಕಾಸು ಸಚಿವರಿಗೆ ಒತ್ತಾಯಿಸಿದೆ.
ಆದಾಯ ತೆರಿಗೆ ವಿನಾಯಿತಿ ಕಡಿತ ಪ್ರಮಾಣ ಹೆಚ್ಚಳದ ಕೂಗು
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕುಟುಂಬಗಳು ಪ್ಯಾನ್ ಕಾರ್ಡ್ಗಳನ್ನು ಹೊಂದಿಲ್ಲ. ಅಗತ್ಯವಿರುವ ಸಮಯದಲ್ಲಿ, ವಿಶೇಷವಾಗಿ ಸಾಂಕ್ರಾಮಿಕ ನಂತರದ ಕನಿಷ್ಠ ಆಭರಣಗಳನ್ನು ಖರೀದಿಸುವ ವೇಳೆಯಲ್ಲಿ ಸಮಸ್ಯೆಯನ್ನು ಎದುರಿಸಲಾಗುತ್ತದೆ ಎಂಬು ಉಲ್ಲೇಖಿಸಲಾಗಿದೆ.
ಆಭರಣ ಮತ್ತು ರತ್ನಗಳ ವಲಯದಲ್ಲಿ ಭೀತಿ:
2020ರಲ್ಲಿ ಕೊರೊನಾವೈರಸ್ ಮೊದಲನೇ ಅಲೆ 2021ರಲ್ಲಿ ಕೊವಿಡ್-19 ಎರಡನೇ ಅಲೆಯ ನಂತರ ರತ್ನಗಳು ಮತ್ತು ಆಭರಣದ ಉದ್ಯಮ ಚೇತರಿಕೆ ಹಾದಿಯಲ್ಲಿದೆ. ಇದರ ಮಧ್ಯೆ ಹೊಸ ರೂಪಾಂತರಿ ಒಮಿಕ್ರಾನ್ ಭಯ ಹುಟ್ಟಿಕೊಳ್ಳುತ್ತಿದ್ದು, ಹೆಚ್ಚುವರಿ ನಿರ್ಬಂಧಗಳನ್ನು ಹೇರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಭಾರತದಲ್ಲಿ ಲಾಕ್ಡೌನ್ಗಳು ಮತ್ತು ಚಿಲ್ಲರೆ ವಲಯದ ಮೇಲಿನ ನಿರ್ಬಂಧಗಳಿಂದ ವ್ಯಾಪಾರ ವೇಗ ತಗ್ಗಿದೆ. ಗ್ರಾಹಕರು ಆಭರಣಗಳ ಮೇಲೆ ಹೆಚ್ಚು ಹಣ ಖರ್ಚು ಮಾಡುತ್ತಿಲ್ಲ. ಮತ್ತು ಸ್ಥಳೀಯ ಉದ್ಯಮದ ಬಹುಭಾಗವನ್ನು ಒಳಗೊಂಡಿರುವ MSME ಆಭರಣಕಾರರು, ಕುಶಲಕರ್ಮಿಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುವಂತಾ ಸ್ಥಿತಿ ನಿರ್ಮಾಣವಾಗಿದೆ.
ಚಿನ್ನ ಖರೀದಿಗೆ ಇಎಂಐ ಸೌಲಭ್ಯ:
ಚಿನ್ನದ ನಗದೀಕರಣ ಯೋಜನೆ (ಜಿಎಂಎಸ್) ಅಡಿಯಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ಪ್ರಶ್ನಿಸದಂತೆ ವ್ಯಕ್ತಿಯೊಬ್ಬರು ಕನಿಷ್ಠ ಎಷ್ಟು ಪ್ರಮಾಣದ ಚಿನ್ನವನ್ನು ಠೇವಣಿ ಇಡಬಹುದು ಎಂಬುದರ ಬಗ್ಗೆ ಸೂಕ್ತ ಸ್ಪಷ್ಟೀಕರಣ ನೀಡಬೇಕು ಎಂದು ಜಿಜೆಸಿ ಸರ್ಕಾರವನ್ನು ಒತ್ತಾಯಿಸಿದೆ. ಇದರ ಜೊತೆಗೆ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಆಭರಣ ಮತ್ತು ರತ್ನಗಳ ಉದ್ಯಮ ಸುಧಾರಿಸಬೇಕಿದ್ದಲ್ಲಿ 22K ಸಿದ್ಧ ಆಭರಣಗಳನ್ನು ಖರೀದಿಸಲು ಇಎಂಐ ಸೌಲಭ್ಯಕ್ಕೆ ಅವಕಾಶ ನೀಡಬೇಕು ಎಂದು ಜಿಜೆಸಿ ಕೇಳಿದೆ.
ಒತ್ತಡ ವಲಯಗಳಲ್ಲಿ ಗುರುತು:
"ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಈ ಕಠಿಣ ಸಮಯದಲ್ಲಿ ನಮ್ಮ ಉದ್ಯಮವು ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಇದು ಶ್ರೀಕೆ ವಿ ಕಾಮತ್ ಅವರ ವರದಿಯಲ್ಲಿ 'ಒತ್ತಡದ ವಲಯ'ಗಳಲ್ಲಿ ಒಂದಾಗಿದೆ ಎಂದು ಗುರುತಿಸಲಾಗಿದೆ. ಆದ್ದರಿಂದ, GJC ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 40A ನಲ್ಲಿ ಬದಲಾವಣೆಗಳನ್ನು ತರುವಂತೆ ಪ್ರಸ್ತಾಪಿಸಿದೆ. ಇದರಿಂದ ದಿನಕ್ಕೆ 10,000 ರೂಪಾಯಿಗಳ ದೈನಂದಿನ ನಗದು ಮಿತಿಯನ್ನು ದಿನಕ್ಕೆ 1 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ಗಳ ಮೂಲಕ ಆಭರಣಗಳನ್ನು ಖರೀದಿಸುವಾಗ ಬ್ಯಾಂಕ್ ಕಮಿಷನ್ (1-1.5%) ಮನ್ನಾ ಮಾಡುವಂತೆ GJC ಸರ್ಕಾರವನ್ನು ಒತ್ತಾಯಿಸಿದೆ," ಎಂದು ಜಿಜೆಸಿ ಅಧ್ಯಕ್ಷ ಆಶಿಶ್ ಪೇಠೆ ಹೇಳಿದ್ದಾರೆ.
ಹೊಸ ಆಭರಣಗಳ ಮೇಲೆ ಮರುಹೂಡಿಕೆ:
- ಮಾರಾಟ ಮಾಡಿದ ಆಭರಣಗಳನ್ನು ಹೊಸ ಆಭರಣಗಳಲ್ಲಿ ಮರುಹೂಡಿಕೆ ಮಾಡಿದರೆ, ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 54F ರ ಪ್ರಕಾರ ಕ್ಯಾಪಿಟಲ್ ಗೇನ್ನಿಂದ ವಿನಾಯಿತಿಯನ್ನು ರತ್ನಗಳು ಮತ್ತು ಆಭರಣ ಉದ್ಯಮಕ್ಕೆ ವಿಸ್ತರಿಸಬೇಕು ಎಂದು ಜಿಜೆಸಿ ಸರ್ಕಾರವನ್ನು ಒತ್ತಾಯಿಸಿದೆ. ಇದು ಉದ್ಯಮವು ಸಂಘಟಿತ ಸ್ವರೂಪದಲ್ಲಿ ವ್ಯವಹರಿಸುವುದಕ್ಕೆ ಸಹಾಯ ಮಾಡುತ್ತದೆ ಎಂದು ಜಿಜೆಸಿ ಹೇಳಿದೆ.
- GJC ಚಿನ್ನ, ಅಮೂಲ್ಯ ಲೋಹಗಳು, ರತ್ನಗಳು ಮತ್ತು ಅಂತಹ ಸರಕುಗಳಿಂದ ಮಾಡಿದ ಆಭರಣಗಳ ಮೇಲಿನ ಆದಾಯ ಸಮಾನತೆಯ ತತ್ವವನ್ನು ಆಧರಿಸಿ ಶೇ.1.25ರ ಒಟ್ಟು GST ದರವನ್ನು ಕೋರಿದೆ. ಈ ಮೊದಲು, ಆಭರಣಗಳು ಶೇ.1% (ಇನ್ಪುಟ್ ಕ್ರೆಡಿಟ್ ಇಲ್ಲದೆ) ಅಥವಾ ಶೇ.12.5% (ಇನ್ಪುಟ್ ಕ್ರೆಡಿಟ್ನೊಂದಿಗೆ) ಅಬಕಾರಿ ಸುಂಕಕ್ಕೆ ಒಳಪಟ್ಟಿವೆ. ಆದಾಗ್ಯೂ, ಒಟ್ಟು ವಹಿವಾಟು ರೂ.10 ಕೋಟಿಯ ಮಿತಿಯನ್ನು ದಾಟಿದರೆ ಮಾತ್ರ ಆಭರಣಗಳು ಅಬಕಾರಿ ಸುಂಕಕ್ಕೆ ಒಳಪಟ್ಟಿವೆ. ಅದರಂತೆ, ಉದ್ಯಮದ ಅತ್ಯಂತ ಸಣ್ಣ ಭಾಗ (ಅಂದಾಜು 15% ರಿಂದ 20%) ಮೇಲೆ ಅಬಕಾರಿ ಸುಂಕಕ್ಕೆ ಒಳಪಟ್ಟಿತ್ತು.
- ಮೇಘಾಲಯ, ಕೇರಳ ಮತ್ತು ತ್ರಿಪುರಾ ಹೊರತುಪಡಿಸಿ ಆಭರಣಗಳು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಶೇ.1ರಷ್ಟು ಮೌಲ್ಯವರ್ಧಿತ ತೆರಿಗೆಗೆ (ವ್ಯಾಟ್) ಒಳಪಟ್ಟಿವೆ. ಆದ್ದರಿಂದ, ಹೆಚ್ಚಿನ ಜನರು ಸ್ಥಳೀಯವಾಗಿ ತಯಾರಿಸಿದ ರತ್ನ ಮತ್ತು ಆಭರಣಗಳ ಮೇಲಿನ ಪರಿಣಾಮಕಾರಿ ತೆರಿಗೆಯು ಶೇ.1 ಅಥವಾ ಶೇ. 2ರಷ್ಟು ಆಗಿತ್ತು.
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್:
ಕಳೆದ 2015ರಲ್ಲಿ ಭೌತಿಕ ಚಿನ್ನದ ಬಾರ್ಗಳು, ನಾಣ್ಯಗಳು ಅಥವಾ ಆಭರಣಗಳನ್ನು ಚಿನ್ನದ ಉಳಿತಾಯ ಖಾತೆಯಲ್ಲಿ ಸಂಗ್ರಹಿಸಿಡುವ ಅವಕಾಶವನ್ನು ನೀಡುವ ಉದ್ದೇಶಕ್ಕಾಗಿ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (GMS) ಅನ್ನು ಪರಿಚಯಿಸಲಾಯಿತು. ಇದರಿಂದ ಚಿನ್ನವನ್ನು ಆಸ್ತಿಯಾಗಿ ಸಂಗ್ರಹಿಸಿ ಇಡುವುದಕ್ಕೆ ಅವಕಾಶ ಸಿಕ್ಕಿತು. ಆದಾಗ್ಯೂ, GMS ಅಡಿಯಲ್ಲಿ ಬ್ಯಾಂಕುಗಳು ಒಟ್ಟುಗೂಡಿಸಿರುವ ಒಟ್ಟು ಠೇವಣಿಗಳು ಸುಮಾರು 11.1 ಟನ್ಗಳು, ಇದು 23,000-24000 ಟನ್ಗಳ ಅಂದಾಜು ಹಿಡುವಳಿಗಳಿಗೆ ಹೋಲಿಸಿದರೆ ತೀರಾ ಕಡಿಮೆ ಎನಿಸುತ್ತದೆ.
ಚಾಲ್ತಿ ಖಾತೆ ಕೊರತೆ (CAD) ಸಮಸ್ಯೆಯನ್ನು ಪರಿಹರಿಸಲು GMS ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಮುಖ್ಯವಾಗಿದೆ. ಮನೆಗಳಲ್ಲಿ ಯಾವುದೇ ಇಲಾಖೆ ಪ್ರಶ್ನೆ ಮಾಡದಂತೆ ಕನಿಷ್ಠ 500 ಗ್ರಾಂ ಚಿನ್ನವನ್ನು ಠೇವಣಿ ಇಡುವುದಕ್ಕೆ ವಿನಾಯಿತಿ ನೀಡಬೇಕಿದೆ. ಇದರಿಂದ GMS ಹೆಚ್ಚು ಪರಿಣಾಮಕಾರಿಯಾಗಿ ಆಗುವುದುರ ಜೊತೆ ಸರ್ಕಾರ ಮತ್ತು ಭಾಗವಹಿಸುವವರಿಗೆ ಹೆಚ್ಚು ಪ್ರಯೋಜನಕಾರಿ ಆಗಿರುತ್ತದೆ ಎಂದು GJC ಹೇಳಿದೆ.