ದೀಪಾವಳಿ ಧಮಾಕ: ಉದ್ಯೋಗಿಗಳಿಗೆ ಕಾರು, ಬೈಕು ಉಡುಗೊರೆ ನೀಡಿದ ಮಾಲೀಕ!
ಚೆನ್ನೈನಲ್ಲಿ ಜ್ಯುವೆಲ್ಲರಿ ಶಾಪ್ ಮಾಲೀಕರೊಬ್ಬರು ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಬೈಕ್, ಕಾರುಗಳನ್ನು ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲೂ ತಮ್ಮ ಸಂಸ್ಥೆಯ ಬೆಳವಣಿಗೆಗಾಗಿ ದುಡಿದ ಉದ್ಯೋಗಿಗಳಿಗೆ ಬೆಲೆ ಬಾಳುವ ಉಡುಗೊರೆಯನ್ನು ಜಯಂತಿ ಲಾಲ್ ಚಲಾನಿ ನೀಡಿದ್ದಾರೆ. ತಮಗೆ ದೊರಕಿದ ಉಡುಗೊರೆ ನೋಡಿ ಉದ್ಯೋಗಿಗಳು ಖುಷ್ ಆಗಿದ್ದಾರೆ.
ಈ ಬಗ್ಗೆ ಮಾತನಾಡಿದ ಚಲಾನಿ ಜ್ಯುವೆಲ್ಲರಿಯ ಮಾರುಕಟ್ಟೆಯನ್ನು ನಿರ್ವಹಣೆ ಮಾಡುವ ಎಸ್ ಬಾಲಾಜಿ, "ದೇಶದಲ್ಲೇ ಮೊದಲ ಬಾರಿಗೆ ಒಬ್ಬ ಮಾಲೀಕ ತನ್ನ ಉದ್ಯೋಗಿಗಳಿಗೆ ಬೈಕ್ ಹಾಗೂ ಕಾರುಗಳನ್ನು ಉಡಗೊರೆಯಾಗಿ ನೀಡುತ್ತಿರುವುದು. ಎಂಟು ಉದ್ಯೋಗಿಗಳಿಗೆ ಕಾರು ನೀಡಿದ್ದರೆ, 18 ಉದ್ಯೋಗಿಗಳಿಗೆ ಬೈಕ್ ನೀಡಲಾಗಿದೆ," ಎಂದು ವಿವರಣೆ ನೀಡಿದ್ದಾರೆ.
ದೀಪಾವಳಿ 2022: ನಿಮ್ಮ ಕುಟುಂಬಕ್ಕೆ ಈ ಗಿಫ್ಟ್ಸ್ ನೀಡಿ
ಇನ್ನು ಉದ್ಯೋಗಿಗಳಿಗೆ ಈ ಗಿಫ್ಟ್ ನೀಡಿರುವ ಜ್ಯುವೆಲ್ಲರಿ ಮಾಲೀಕರು ತಮ್ಮ ಜ್ಯುವೆಲ್ಲರಿ ಮಳಿಗೆಯನ್ನು 2013ರಲ್ಲಿ ಆರಂಭ ಮಾಡಿದ್ದಾರೆ. ಈಗ ಉದ್ಯೋಗಿಗಳಿಗೆ ಭಾರೀ ಗಿಫ್ಟ್ ನೀಡುವಷ್ಟು ಮಟ್ಟಿಗೆ ಬಂದು ತಲುಪಿದೆ. ಇನ್ನು ಯಾಕಾಗಿ ದುಬಾರಿ ಗಿಫ್ಟ್ ನೀಡಲಾಗಿದೆ ಎಂದು ಕೂಡಾ ಬಾಲಾಜಿ ತಿಳಿಸಿದ್ದಾರೆ.
ಯಾಕಾಗಿ ದುಬಾರಿ ಗಿಫ್ಟ್?
"ಅರ್ಹ ಸಿಬ್ಬಂದಿಗಳನ್ನು ಶ್ಲಾಘಿಸಬೇಕು ಎಂದು ನಾವು ನಿರ್ಧಾರ ಮಾಡಿದ್ದೆವು. ಕಾರುಗಳನ್ನು ಉಡುಗೊರೆಯಾಗಿ ಪಡೆದ ಎಂಟು ಜನರು ಚಲಾನಿ ಜ್ಯುವೆಲ್ಲರಿ ಆರಂಭವಾದ ಸಂದರ್ಭದಿಂದಲೂ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ," ಎಂದು ಹೇಳಿದ್ದಾರೆ.
Dhanteras : ಧನತ್ರಯೋದಶಿ ದಿನವೇ ಜನರು ಚಿನ್ನ ಖರೀದಿಸುವುದೇಕೆ?
"ಈ ಚಿಲ್ಲರೆ ಉದ್ಯಮಕ್ಕೆ ನಾವು ಸಂಪೂರ್ಣವಾಗಿ ಹೊಸಬರು. ಆರಂಭದ ನಾಲ್ಕೈದು ತಿಂಗಳುಗಳವರೆಗೆ ನಮಗೆ ಹೆಚ್ಚು ವ್ಯಾಪಾರ ನಡೆಯುತ್ತಿರಲಿಲ್ಲ. ಆದರೆ ಈ ಜನರು ನಮ್ಮನ್ನು ನಂಬಿದ್ದರು. ಆರು ತಿಂಗಳ ನಂತರ ಮಾತ್ರ ಕಂಪನಿಯು ಬೆಳೆಯಲು ಪ್ರಾರಂಭಿಸಿತು," ಎಂದು ತಿಳಿಸಿದ್ದಾರೆ.
ಕೋವಿಡ್ ಸಂದರ್ಭದ ಅಡೆತಡೆ
"ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಉತ್ತಮ ಸಂಬಳಕ್ಕಾಗಿ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಹೋಗುವುದು ಈ ಉದ್ಯಮದಲ್ಲಿ ಸಾಮಾನ್ಯವಾಗಿದೆ. ಆದರೆ ಈ ಜನರು ನಮ್ಮೊಂದಿಗೆಯೇ ಇದ್ದರು. ಕಷ್ಟ ಸಂದರ್ಭದಲ್ಲೂ ನಮಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಅವರಿಗೆ ಬಹುಮಾನ ನೀಡಲು ಕಂಪನಿ ನಿರ್ಧರಿಸಿದೆ," ಎಂದು ವಿವರಿಸಿದ್ದಾರೆ.
ಕಂಪನಿಯು ಉದ್ಯೋಗಿಗಳಿಗೆ ದೀಪಾವಳಿಗೆ ನಗದು ಬೋನಸ್ ನೀಡುವುದನ್ನು ವಿರೋಧಿಸಲು ನಾವು ನಿರ್ಧರಿಸಿದೆವು. ಹಣವನ್ನು ನೀಡಿದರೆ ಅದನ್ನು ಒಂದೆರಡು ತಿಂಗಳಲ್ಲಿ ಖರ್ಚು ಮಾಡಿ ಬಿಡುತ್ತಾರೆ. ಹಾಗೆಯೇ ಸಂಸ್ಥೆ ಬೋನಸ್ ನೀಡಿದೆ ಎಂಬುವುದನ್ನೇ ಮರೆತುಬಿಡುತ್ತಾರೆ. ಆದರೆ ಜನರು ಮರೆಯಬಾರದು ಎಂಬ ನಿಟ್ಟಿನಲ್ಲಿ ವಾಹನವನ್ನು ನೀಡುವ ಆಯ್ಕೆ ಮಾಡಿದ್ದೇವೆ ಎಂದು ಬಾಲಾಜಿ ಹೇಳಿದ್ದಾರೆ.
"ಈ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿರಲಿಲ್ಲ. ನಾನು ಕಂಪನಿಯಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದೇನೆ. ಆದರೆ ನನ್ನನ್ನು ಕತ್ತಲೆಯಲ್ಲಿ ಇರಿಸಲಾಯಿತು. ಕಾರು, ಬೈಕ್ಗಳನ್ನು ಪರದೆ ಹಾಕಿ ಮುಚ್ಚಲಾಗಿತ್ತು. ಎಲ್ಲರನ್ನೂ ಅಚ್ಚರಿಗೊಳಿಸಲು ನಮ್ಮ ಮಾಲಕರು ಜಯಂತಿ ಲಾಲ್ ಚಲಾನಿ ಅವರ ಕಲ್ಪನೆಯಾಗಿದೆ. ಕಂಪನಿಯ ಉಡುಗೊರೆ ನೋಡಿ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಭಾವುಕರಾಗಿ ಕಣ್ಣೀರಿಟ್ಟರು," ಎಂದು ತಿಳಿಸಿದ್ದಾರೆ.
"ಇವುಗಳು ನಾವು ನಮ್ಮ ಉದ್ಯೋಗಿಗಳಿಗೆ ನೀಡುತ್ತಿರುವ ಕೆಲವು ಸಾಮಾನ್ಯ ಕಾರುಗಳಲ್ಲ. ಇದು ಆಟೋಮ್ಯಾಟಿಕ್ ಕಾರುಗಳು. ಐದು ವರ್ಷಗಳ ಗ್ಯಾರಂಟಿ, ವಿಮಾ ಕವರೇಜ್ ಮತ್ತು ಸಂಪೂರ್ಣ ಪೆಟ್ರೋಲ್ ಹಾಕಿರುವ ಕಾರುಗಳು ಆಗಿದೆ," ಎಂದು ಹೇಳಿದರು.