ಐಟಿ ರಿಟರ್ನ್ಸ್, ಆಧಾರ್ -ಪ್ಯಾನ್ ಕಾರ್ಡ್ ಲಿಂಕ್ ಜೂನ್ 30ರವರೆಗೆ ವಿಸ್ತರಣೆ
ಕೊರೊನಾವೈರಸ್ನಿಂದಾಗಿ ವಿಶ್ವದೆಲ್ಲೆಡೆ ರಾಷ್ಟ್ರಗಳು ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಸಮಯದಲ್ಲಿ ಭಾರತವೂ ಕೂಡ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುತ್ತಿದೆ. ಆರ್ಥಿಕ ಬಿಕ್ಕಟ್ಟನ್ನು ಸುಧಾರಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಮಾರ್ಚ್ 24) ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದರು.
ಐಟಿ ರಿಟರ್ನ್ಸ್ ಗಡುವು ವಿಸ್ತರಣೆ, ವಿಳಂಭ ಪಾವತಿ ಮೇಲಿನ ಬಡ್ಡಿ ದರ ಇಳಿಕೆ, ಜಿಎಸ್ಟಿ ಗಡುವು ವಿಸ್ತರಣೆ, ಹಾಗೂ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಗಡುವನ್ನು ಮುಂದೂಡಲಾಗಿದೆ.
ಐಟಿ ರಿಟರ್ನ್ಸ್ ಮೇಲಿನ ಗಡುವು ವಿಸ್ತರಿಸಿದ ಕೇಂದ್ರ
2018-19ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆಗೆ ಮಾರ್ಚ್ 31 ಅಂತಿಮ ಡೆಡ್ಲೈನ್ ಆಗಿತ್ತು. ಆದರೆ ಈ ದಿನಾಂಕವನ್ನು ವಿಸ್ತರಿಸಲಾಗಿದ್ದು ಜೂನ್ 30 ರ ತನಕ ವಿಸ್ತರಣೆ ಮಾಡಲಾಗಿದೆ.
ಈ ಮೂಲಕ ಆದಾಯ ತೆರಿಗೆ ಪಾವತಿ ಮಾಡದೇ ಇರುವವರಿಗೆ ಕೊಂಚ ರಿಲೀಫ್ ಸಿಕ್ಕಿದೆ.
ವಿಳಂಬದ ಮೇಲೆ ಪಾವತಿಸುವ ಬಡ್ಡಿ ದರ ಇಳಿಕೆ
ಇನ್ನು ಐಟಿ ರಿಟರ್ನ್ಸ್ ವಿಳಂಬದ ಮೇಲೆ ಪಾವತಿಸಬೇಕಿರುವ ಬಡ್ಡಿ ದರವನ್ನೂ ಕೂಡ ಇಳಿಕೆ ಮಾಡಲಾಗಿದೆ. ಬಡ್ಡಿ ದರವನ್ನು ಈಗಿನ 12 ರಿಂದ 8 ಪರ್ಸೆಂಟ್ ತಗ್ಗಿಸಲಾಗಿದೆ.
ಜೊತೆಗೆ ಪಾವತಿ ವಿಳಂಭವಾದಲ್ಲಿ 9 ಪರ್ಸೆಂಟ್ ಬಡ್ಡಿ ಕಟ್ಟಬೇಕಿತ್ತು. ಆದರೆ ಆ ಶುಲ್ಕವನ್ನು ಕಟ್ಟಬೇಕಿಲ್ಲ. ಹೀಗಾಗಿ ಜೂನ್ 30ರವರೆಗೆ ಹೆಚ್ಚುವರಿ ಶುಲ್ಕ ಪಾವತಿಯಿಲ್ಲ.
ಆಧಾರ್ ಕಾರ್ಡ್ -ಪ್ಯಾನ್ ಕಾರ್ಡ್ ಲಿಂಕ್ ಗಡುವು ವಿಸ್ತರಣೆ
ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡಲು ಇದೇ ತಿಂಗಳು ಅಂದರೆ ಮಾರ್ಚ್ 31 ಕೊನೆ ದಿನಾಂಕವಾಗಿತ್ತು. ಆದರೆ ಈ ಗಡುವನ್ನು ಸಹ ಸಾರ್ವಜನಿಕರ ಅನುಕೂಲಕ್ಕಾಗಿ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 31ರಿಂದ- ಜೂನ್ 30, 2020ಕ್ಕೆ ಗಡುವನ್ನು ವಿಸ್ತರಿಸಲಾಗಿದೆ
ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಯ ಅವಧಿಯು ವಿಸ್ತರಣೆ
ಮಾರ್ಚ್ ಏಪ್ರಿಲ್ ಹಾಗೂ ಮೇ ತಿಂಗಳ ಜಿಎಸ್ಟಿ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಯ ಅವಧಿಯನ್ನು ಕೂಡ ಜೂನ್ 30ಕ್ಕೆ ವಿಸ್ತರಣೆ ಮಾಡಲಾಗಿದೆ. ಹಾಗೂ ಮಾರ್ಚ್, ಏಪ್ರಿಲ್, ಮೇ GST ಪಾವತಿ ಅವಧಿ ಜಿಎಸ್ಟಿ ಪಾವತಿ ವಿಳಂಬಕ್ಕೆ ಯಾವುದೇ ದಂಡ ಪಾವತಿ ಮಾಡಬೇಕಿಲ್ಲ.
5 ಕೋಟಿ ಒಳಗಿನ ಕಂಪನಿಗಳಿಗೆ ಜಿಎಸ್ಟಿಗೆ ದಂಡ ಇಲ್ಲ
ಐದು ಕೋಟ ರುಪಾಯಿ ಒಳಗೆ ವಹಿವಾಟು ನಡೆಸುವ ಕಂಪನಿಗಳು ವಿಳಂಭವಾಗಿ ಜಿಎಸ್ಟಿ ಪಾವತಿಸಿದ್ದಲ್ಲಿ ವಿಳಂಭ ಪಾವತಿ ಶುಲ್ಕ ಕಟ್ಟಬೇಕಿಲ್ಲ. ಬೃಹತ್ ಕಂಪನಿಗಳಿಗೂ ಯಾವುದೇ ವಿಳಂಭ ಪಾವತಿ ಶುಲ್ಕ ಕಟ್ಟುವಂತಿಲ್ಲ ಆದ್ರೆ ಶೇಕಡಾ 9 ರಷ್ಟು ಕಡಿಮೆ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.
ಆಮದು/ರಫ್ತುದಾರರಿಗೆ ಅನುಕೂಲ
ಕಸ್ಟಮ್ಸ್ ಇಲಾಖೆ ತನ್ನ ಕರ್ತವ್ಯ ಪಾಲನೆಯಲ್ಲಿದೆ. ಜೂನ್ 30, 2020 ರವರೆಗೆ ಈ ವಿಭಾಗವು 24x7 ಅತ್ಯಗತ್ಯ ಸೇವೆಯಾಗಿ ಮುಂದುವರಿಯಲಿದೆ.
ಸಂಪತ್ತು ತೆರಿಗೆ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಬೆನಾಮಿ ವಹಿವಾಟು ಕಾಯ್ದೆ, ಕಪ್ಪು ಹಣ ಕಾಯ್ದೆ ಅಡಿಯಲ್ಲಿರುವ ಎಲ್ಲಾ ಅನುಸರಣೆಗಳನ್ನು 2020 ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಸಣ್ಣ ಉದ್ಯಮಗಳಿಗೆ ಪರಿಹಾರ
ಸಣ್ಣ ಉದ್ಯಮಗಳಿಗೆ ಪರಿಹಾರವಾಗಿ, ದಿವಾಳಿತನ ಪ್ರಕ್ರಿಯೆಗಳ ಮಿತಿಯನ್ನು ಅಸ್ತಿತ್ವದಲ್ಲಿರುವ 1 ಲಕ್ಷ ರುಪಾಯಿಯಿಂದ 1 ಕೋಟಿ ರುಪಾಯಿಗೆ ವಿಸ್ತರಿಸಲಾಗಿದೆ.