ಟೊಮೆಟೊ, ಹಾಲು ಬೆಲೆ ಏರಿಕೆ: ಮಧ್ಯಮ ವರ್ಗದ ಮೇಲೆ ಹಣದುಬ್ಬರ ಪ್ರಭಾವ ಹೀಗಿದೆ
ದಿನ ನಿತ್ಯ ಬಳಸಲಾಗುವ ಅಗತ್ಯ ವಸ್ತುಗಳ ಬೆಲೆಯು ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ದೇಶದಲ್ಲಿ ಇಂಧನ ಬೆಲೆ ಹಾಗೂ ಖಾದ್ಯ ತೈಲ ಬೆಲೆ ಹೆಚ್ಚಳದ ಜೊತೆಗೆಯೇ ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳಾದ ಟೊಮೆಟೊ, ಹಾಲಿನ ಬೆಲೆ ಗಗನಕ್ಕೆ ಏರಿಕೆ ಆಗಿದೆ. ಈ ಬೆಲೆ ಏರಿಕೆಯು ಭಾರತದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿಯ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರುತ್ತಿದೆ.
ಐಎಎನ್ಎಸ್ನ ವರದಿಯ ಪ್ರಕಾರ, ದೇಶದಲ್ಲಿ ಉಳಿತಾಯದ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡಿದೆ. ಜನರಿಗೆ ಆದಾಯವು ಸ್ಥಿರವಾಗಿಯೇ ಇದೆ, ಅಧಿಕ ಆಗಿಲ್ಲ. ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾತ್ರ ನಿರಂತರವಾಗಿ ಆಗುತ್ತಿದೆ. ಈ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಿಂದಾಗಿ ಜನರು ಈ ಹಿಂದೆ ಖರೀದಿ ಮಾಡುತ್ತಿದ್ದುದ್ದಕ್ಕಿಂತ ಕಡಿಮೆಯೇ ಖರೀದಿ ಮಾಡಬಹುದು ಎಂದು ವರದಿಗಳು ಹೇಳುತ್ತದೆ.
ದೇಶದಲ್ಲಿ ಏಕಿಷ್ಟು ದುಬಾರಿ ಜೀವನ, ಹಣದುಬ್ಬರಕ್ಕೆ ಇದೆಯೇ ಅಂತ್ಯ?
ಭಾರತದಲ್ಲಿ ಹಣದುಬ್ಬರ ಅಧಿಕವಾಗಲು ಮುಖ್ಯ ಕಾರಣವೆಂದರೆ ಆಹಾರದ ಬೆಲೆಗಳಲ್ಲಿ ಹೆಚ್ಚಿದ ಹಣದುಬ್ಬರ. ಆಹಾರದ ಬೆಲೆ ಹೆಚ್ಚಳವು ದೇಶದಲ್ಲಿ ಹಣದುಬ್ಬರಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳುತ್ತಾರೆ ತಜ್ಞರು. ಇನ್ನು ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಿಂದಾಗಿ ತರಕಾರಿ ಬೆಲೆಗಳೂ ಕೂಡಾ ಹೆಚ್ಚು ಆಗುತ್ತಿದೆ.
ಕೋವಿಡ್ ಹೊಸ ರೂಪಾಂತರ ಭೀತಿ: ಸೆನ್ಸೆಕ್ಸ್ ಪಾತಾಳಕ್ಕೆ ಕುಸಿತ
ಗಗನಕ್ಕೆ ಏರಿದ ತರಕಾರಿ ಬೆಲೆ
ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಉಂಟಾಗಿ ತರಕಾರಿಯು ನಾಶವಾಗಿದೆ. ಈ ನಡುವೆ ಇಂಧನ ಬೆಲೆಯೂ ಕೂಡಾ ಹೆಚ್ಚಳ ಆಗಿರುವುದು ಕೂಡಾ ದೇಶದಲ್ಲಿ ನಿರಂತರವಾಗಿ ತರಕಾರಿಗಳ ಬೆಲೆ ಏರಿಕೆ ಆಗಲು ಕಾರಣವಾಗಿದೆ. ಹಲವಾರು ನಗರಗಳಲ್ಲಿ ತರಕಾರಿ ಬೆಲೆ ಏರಿಕೆ ಆಗುತ್ತಿರುವ ಬಗ್ಗೆ ನಿರಂತರವಾಗಿ ಮಾಧ್ಯಮಗಳು ವರದಿ ಮಾಡುತ್ತಿದೆ. ಹುರುಳಿಕಾಯಿ- 106 ರೂ., ಬದನೆಕಾಯಿ ಬಿಳಿ- 108 ರೂ., ಬದನೆಕಾಯಿ ಗುಂಡು- 72 ರೂ., ಬಾಟಲ್ ಬದನೆ - 75 ರೂ., ಬೀಟ್ರೂಟ್- 59 ರೂ., ಸುವರ್ಣಗಡ್ಡೆ- 34 ರೂ., ಹಾಗಲಕಾಯಿ- 60 ರೂ., ಸೌತೆಕಾಯಿ- 70 ರೂ., ಸೀಮೆ ಬದನೆಕಾಯಿ- 22 ರೂ. ಇದೆ. ಲೋಕಲ್ ಸೌತೆಕಾಯಿ-24 ರೂ., ಇಸ್ರೇಲ್ ಸೌತೆಕಾಯಿ- 74. ರೂ., ಗೋರಿಕಾಯಿ- 80 ರೂ., ಹಸಿ ಮೆಣಸು- 60 ರೂ., ಬಜ್ಜಿ ಮೆಣಸು- 62 ರೂ., ನಾಟಿ ಕ್ಯಾರೇಟ್- 94 ರೂ., ಅಲಸಂದೆ- 75 ರೂ., ಎಲೆಕೋಸು (ದಪ್ಪ) 60 ರೂ., ಹೂಕೋಸು ಸಣ್ಣ- 64 ರೂ., ಟೊಮೆಟೊ- 150 ರೂ., ನುಗ್ಗೆಕಾಯಿ- 270 ರೂ. ಇದೆ.
ಇನ್ನು ಈ ಬಗ್ಗೆ ಮಾತನಾಡಿರುವ ರಾಹುಲ್ ಕುಮಾರ್ ಎಂಬ ವ್ಯಕ್ತಿ, "ಪೆಟ್ರೋಲ್ ದರ ಏರಿಕೆಯ ಬೆನ್ನಲ್ಲೇ ದೇಶದಲ್ಲಿ ಎಲ್ಲಾ ತರಕಾರಿಗಳ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ, ಇದರಿಂದಾಗಿ ನನಗೆ ಉಳಿತಾಯ ಮಾಡುವುದು ಬಿಡಿ, ಸಾಲ ಆಗದಂತೆ ದಿನ ದೂಡುವುದೇ ಕಷ್ಟವಾಗಿದೆ," ಎಂದು ಹೇಳಿದ್ದಾರೆ. "ಈಗಾಗಲೇ ನಮಗೆ ಸಂಬಳ ಕಡಿತ ಆಗಿದೆ. ಈ ನಡುವೆ ಪೆಟ್ರೋಲ್, ಟೊಮೆಟೊ ಸೇರಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ," ಎಂದಿದ್ದಾರೆ.
ಇಂಧನ ದರ ಏರಿಕೆ ಆಗಿರುವುದೇ ಆತಂಕಕ್ಕೆ ಮುಖ್ಯ ಕಾರಣ
ಹಣದುಬ್ಬರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಸುರಕ್ಷಿತ ತಾಣ ಎಂದರೆ ಶೇಕಡ 6 ಕ್ಕೆ ಇಳಿಕೆ ಆಗಿದೆ. ಆದರೂ ಕೂಡಾ ಇಂಧನ ದರವು ಏರಿಕೆ ಆಗಿದೆ. ಇಂಧನ ಬೆಲೆಯು ಏರಿಕೆ ಆದ ಕೂಡಲೇ ಬೇರೆ ಎಲ್ಲಾ ವಸ್ತುಗಳ ಬೆಲೆಯು ಸಾಮಾನ್ಯವಾಗಿಯೇ ಏರಿಕೆ ಕಾಣುತ್ತದೆ. ಇಂಧನ ದರ ಏರಿಕೆ ಆದಂತೆ ಸರಬರಾಜು ವೆಚ್ಚವೂ ಅಧಿಕ ಆಗುತ್ತದೆ. ಇದರಿಂದಾಗಿ ವಸ್ತುಗಳ ಬೆಲೆಯೂ ಅಧಿಕ ಆಗುತ್ತದೆ. ಇದರಿಂದಾಗಿ ಮುಖ್ಯವಾಗಿ ಹೆಚ್ಚು ಪರಿಣಾಮ ಬೀರಿರುವುದು ಮಧ್ಯಮ ವರ್ಗದ ಜನರಿಗೆ ಆಗಿದೆ. ಈ ಬಗ್ಗೆ ಮಾತನಾಡಿರುವ ದೆಹಲಿ ಮೂಲಕ ಅನಿಲ್ ಕುಮಾರ್ ಎಂಬ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಕ್ಯಾಬ್ ಚಾಲಕ, "ಇಂಧನ ಬೆಲೆ ಏರಿಕೆಯು ನಮಗೆ ಹೆಚ್ಚು ಪ್ರಭಾವವನ್ನು ಉಂಟು ಮಾಡಿದೆ. ನಮ್ಮ ಕಾರಿಗೆ ಇಂಧನ ಹಾಕುವುದಕ್ಕೆಯೇ ಅಧಿಕ ಖರ್ಚು ಆಗುತ್ತಿದೆ. ಇದರಿಂದಾಗಿ ನಮ್ಮ ಆದಾಯವು ಕಡಿಮೆ ಆಗುತ್ತಿದೆ. ನಮಗೆ ವಾಹನದ ಇಎಂಐ ಕಟ್ಟುವುದು ಕಷ್ಟವಾಗಿದೆ. ಈ ಕೊರೊನಾ ವೈರಸ್ ಅಲೆಯು ನಮಗೆ ಬಹಳ ಪರಿಣಾಮ ಬೀರಿದೆ," ಎಂದು ವಿವರಿಸಿದ್ದಾರೆ.