ಆಯುಷ್ಮಾನ್ ಭಾರತ್ ಯೋಜನೆ: ಅರ್ಹತೆ, ಪ್ರಯೋಜನ ಮೊದಲಾದ ಮಾಹಿತಿ
ಕೇಂದ್ರ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನಧನ ಯೋಜನೆ, ವಯವಂದನ ಯೋಜನೆ, ರೋಜ್ಗಾರ್ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿದೆ. ಈ ಯೋಜನೆಗಳ ಪೈಕಿ ಪಿಎಂಜೆಎವೈ ಅಥವಾ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಭಾರತದ ಸರ್ಕಾರದ ಅತೀ ದೊಡ್ಡ ಆರೋಗ್ಯ ಯೋಜನೆಯಾಗಿದೆ.
ಭಾರತ ಸರ್ಕಾರವು ಮುಖ್ಯವಾಗಿ, ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಆರೋಗ್ಯ ಸೇವೆಯ ಗುಣಮಟ್ಟದ ಸುಧಾರಣೆಗಾಗಿ, ಎಲ್ಲ ಜನರಿಗೂ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯಲ್ಲಿ ಆರಂಭ ಮಾಡಿದೆ. ಪ್ರಮುಖವಾಗಿ ಬಡವರು ಆರೋಗ್ಯ ಸೇವೆಯನ್ನು ಹಣಕಾಸಿನ ತೊಂದರೆ ಇಲ್ಲದೆಯೇ ಪಡೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಆರಂಭ ಮಾಡಿದೆ.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಬಗ್ಗೆ ನಿಮಗೆಷ್ಟು ಗೊತ್ತು?
ಆದರೆ ಈ ಯೋಜನೆಯ ಬಗ್ಗೆ ಅದೆಷ್ಟೋ ಮಂದಿಗೆ ಸಂಪೂರ್ಣವಾದ ಮಾಹಿತಿಯೇ ಇಲ್ಲ. ಆಯುಷ್ಮಾನ್ ಯೋಜನೆ ಎಂದರೇನು, ಅದರ ಮುಖ್ಯ ವಿಚಾರಗಳು ಏನಿದೆ, ಅರ್ಹತಾ ಮಾನದಂಡ ಏನಿದೆ, ಯಾವೆಲ್ಲ ದಾಖಲೆಗಳು ಬೇಕು ಎಂಬ ಮೊದಲಾದ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ... ಮುಂದೆ ಓದಿ...
ಆಯುಷ್ಮಾನ್ ಭಾರತ್ ಯೋಜನೆ ಎಂದರೇನು?
ಆಯುಷ್ಮಾನ್ ಭಾರತ್ ಯೋಜನೆಯು ಬಡವರಿಗೆ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲಿ ಎಂಬ ಉದ್ದೇಶದಿಂದ ಭಾರತ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ಇದು ನಗದುರಹಿತ ಆಸ್ಪತ್ರೆ ಸೌಲಭ್ಯವನ್ನು ಪಡೆಯುವ ಯೋಜನೆಯಾಗಿದೆ. ನಾವು ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡರಲ್ಲೂ ಯೋಜನೆಯ ಸದುಪಯೋಗ ಪಡೆಯಬಹುದು. ಇದು ಆರೋಗ್ಯ ವಿಮೆ ಯೋಜನೆಗೆ ಸಮಾನವಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗುವ ಮುನ್ನ ತಗುಲುವ ಖರ್ಚು, ಔಷಧಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನೀಡಲಾಗುವ ಚಿಕಿತ್ಸೆಯ ಖರ್ಚು ಮೊದಲಾದವುಗಳನ್ನು ಈ ವಿಮೆಯಲ್ಲಿ ಒಳಗೊಳ್ಳುತ್ತದೆ. ಇನ್ನು ಮೊಣಕಾಲು ಆಪರೇಷನ್, ಹೃದಯ ಸರ್ಜರಿ ಮೊದಲಾದವುಗಳ ವೆಚ್ಚವನ್ನು ಕೂಡಾ ಈ ಯೋಜನೆ ಮೂಲಕ ಭರಿಸಬಹುದು.
ಪ್ರಮುಖ ವಿಚಾರಗಳು ತಿಳಿದಿರಿ
* ಆಯುಷ್ಮಾನ್ ಭಾರತ್ ಯೋಜನೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡರಲ್ಲೂ ಒಂದು ಕುಟುಂಬವು ವಿಮೆ ಮೂಲಕ ಸುಮಾರು 5 ಲಕ್ಷ ರೂಪಾಯಿಯ ಚಿಕಿತ್ಸೆಯನ್ನು ಪಡೆಯಲು ಅವಕಾಶವನ್ನು ನೀಡುತ್ತದೆ.
* ಈ ಯೋಜನೆಯನ್ನು ಪ್ರಮುಖವಾಗಿ ಇಂಟರ್ನೆಟ್ ಅಥವಾ ಆನ್ಲೈನ್ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಿರುವ, ಬಡತನದಲ್ಲಿರುವ ಜನರಿಗಾಗಿ ಜಾರಿ ಮಾಡಲಾಗಿದೆ.
* ಈ ಯೋಜನೆಯ ಫಲಾನುಭವಿಗಳು ಯಾವುದೇ ಹಣವನ್ನು ಪಾವತಿ ಮಾಡದೆಯೇ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ.
* ಪ್ರತಿ ವರ್ಷ ಸುಮಾರು 6 ಕೋಟಿಯಷ್ಟು ಭಾರತೀಯರು ಅನಿಶ್ಚಿತವಾಗಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದಾಗಿ ಮಧ್ಯಮ ವರ್ಗದಿಂದ, ಬಡವರ್ಗಕ್ಕೆ ಇಳಿಯುತ್ತಿದ್ದಾರೆ. ಜನರು ಈ ರೀತಿ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
* ಆಸ್ಪತ್ರೆಯಲ್ಲಿ ದಾಖಲಾಗುವ ಮೂರು ದಿನದ ಮುಂಚಿನ ಖರ್ಚು ವೆಚ್ಚಗಳು ಹಾಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 15 ದಿನಗಳವರೆಗಿನ ಖರ್ಚು ವೆಚ್ಚವು ಈ ಯೋಜನೆಯಲ್ಲಿ ಒಳಗೊಳ್ಳುತ್ತದೆ.
* ಒಂದು ಕುಟುಂಬದ ಗಾತ್ರದ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗೆಯೇ ವಯಸ್ಸಿನ ಮಿತಿಯೂ ಕೂಡಾ ಇಲ್ಲ.
ಯೋಜನೆಗೆ ನೀವು ಅರ್ಹತೆ, ಹೀಗೆ ತಿಳಿಯಿರಿ
ಹಂತ 1: ಪಿಎಂಜೆಎವೈ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಹಂತ 2: "Am I Eligible" ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 3: ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಹಾಕಿ
ಹಂತ 4: ಜನರೇಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ, ಒಟಿಪಿ ನಮೂದಿಸಿ
ಹಂತ 5: ನಿಮ್ಮ ರಾಜ್ಯ, ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಮನೆ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ 6: ನೀವು ಅರ್ಹರಾಗಿದ್ದರೆ ನಿಮ್ಮ ಹೆಸರು ಲೀಸ್ಟ್ನಲ್ಲಿ ಇರುತ್ತದೆ.
ಹಂತ 7: ನಿಮ್ಮ ಹೆಸರು ಲೀಸ್ಟ್ನಲ್ಲಿ ಇದ್ದರೆ ನೀವು ಬಳಿಕ ರಿಜಿಸ್ಟ್ರೇಷನ್ ಮಾಡಬಹುದು.
ಯಾವೆಲ್ಲ ದಾಖಲೆಗಳು ಬೇಕು?
* ನಿಮ್ಮ ವಯಸ್ಸು ಹಾಗೂ ಗುರುತಿನ ಪುರಾವೆ (ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್)
* ಸಂಪರ್ಕ ಮಾಹಿತಿ (ಮೊಬೈಲ್ ಫೋನ್, ವಿಳಾಸ, ಇಮೇಲ್ ಐಡಿ)
* ಜಾತಿ ಪ್ರಮಾಣಪತ್ರ
* ಆದಾಯ ಪ್ರಮಾಣಪತ್ರ (ವಾರ್ಷಿಕವಾಗಿ ಗರಿಷ್ಠ ಆದಾಯ ಮಿತಿ 5 ಲಕ್ಷ ರೂಪಾಯಿ)
* ನಿಮ್ಮ ಕುಟುಂಬದ ಬಗ್ಗೆ ಮಾಹಿತಿ (ಅವಿಭಾಜ್ಯ/ಅವಿಭಜಿತ)
ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ?
ಹಂತ 1: https://pmjay.gov.in/ ವೆಬ್ಸೈಟ್ನಲ್ಲಿ ಯೋಜನೆ ಪ್ರಯೋಜನ ಪಡೆಯಲು ಅರ್ಹತೆ ಇದೆಯೇ ಚೆಕ್ ಮಾಡಿಕೊಳ್ಳಿ
ಹಂತ 2: ನೀವು ಅರ್ಹರಾಗಿದ್ದರೆ ನಿಮ್ಮ ಹೆಸರು ಬಲಭಾಗದಲ್ಲಿ ಕಾಣಿಸಿಕೊಳ್ಳಲಿದೆ.
ಹಂತ 3: ಅರ್ಜಿಯನ್ನು ಭರ್ತಿ ಮಾಡಿಕೊಂಡು ಆಯುಷ್ಮಾನ್ ಕಾರ್ಡ್ ಆನ್ಲೈನ್ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
ಹಂತ 4: ದಾಖಲೆಗಳನ್ನು ಲಗತ್ತಿಸಿ ಫಾರ್ಮ್ ಅನ್ನು ಸಬ್ಮಿಟ್ ಮಾಡಿ
ಹಂತ 5: ಸಂಬಂಧಿತ ಇಲಾಖೆಯು ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ
ಹಂತ 6: ನಿಮ್ಮ ಅರ್ಜಿಯು ಅನುಮೋದನೆಯಾದರೆ, ನಿಮಗೆ ಆನ್ಲೈನ್ನಲ್ಲೇ ಆಯುಷ್ಮಾನ್ ಕಾರ್ಡ್ ಲಭ್ಯವಾಗಲಿದೆ.
ಆಯುಷ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ?
ಹಂತ 1: ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಹಂತ 2: ನಿಮ್ಮ ಇಮೇಲ್ ಐಡಿ ಮೂಲಕ್ ಸೈನ್ಇನ್ ಆಗಿ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ
ಹಂತ 3: ಬಳಿಕ ಲಾಗಿನ್ ಆಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ನಮೂದಿಸಿ
ಹಂತ 4: ಅಧಿಕೃತ ಫಲಾನುಭವಿಗಳ ಆಯ್ಕೆಯನ್ನು ಮಾಡಿಕೊಳ್ಳಿ
ಹಂತ 5: ಇದು ಗ್ರಾಹಕರ ಸೇವಾ ಕೇಂದ್ರಕ್ಕೆ ರಿಡೈರೆಕ್ಟ್ ಆಗಲಿದೆ
ಹಂತ 6: ಸಿಎಸ್ಸಿಯಲ್ಲಿ ಪಾಸ್ವರ್ಡ್ ಹಾಗೂ ಪಿನ್ ಸಂಖ್ಯೆಯನ್ನು ನಮೂದಿಸಿ
ಹಂತ 7: ಹೋಮ್ಪೇಜ್ಗೆ ರಿಡೈರೆಕ್ಟ್ ಆಗಲಿದೆ
ಹಂತ 8: ಇಲ್ಲಿ ನಿಮಗೆ ಡೌನ್ಲೋಡ್ ಆಯ್ಕೆ ಲಭ್ಯವಾಗಲಿದೆ. ಇಲ್ಲಿ ನೀವು ಆಯುಷ್ಮಾನ್ ಭಾರತ್ ಗೋಲ್ಡನ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗಲಿದೆ.