ಪಿಎಂ ಕಿಸಾನ್: ಕೆವೈಸಿ ಮಾಡಿದರೂ ಹಣ ಬಂದಿಲ್ಲವಾ? ಹೀಗೆ ಮಾಡಿ
ಬೆಂಗಳೂರು, ಅ. 19: ಪಿಎಂ ಕಿಸಾನ್ ಯೋಜನೆ ಅಡಿ ಸಣ್ಣ ರೈತರ ಕೃಷಿಗಾರಿಕೆಗೆ ಸಹಾಯಾರ್ಥವಾಗಿ ಕೇಂದ್ರ ಸರಕಾರ ವರ್ಷಕ್ಕೆ ನೀಡುತ್ತಿರುವ 6 ಸಾವಿರ ರೂಗಳ ತ್ರೈಮಾಸಿಕ ಕಂತು ನಿನ್ನೆ ಮಂಗಳವಾರ ಬಿಡುಗಡೆ ಆಗಿದೆ. 8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂ ಹಣ ನೇರವಾಗಿ ಹಾಕಲಾಗಿದೆ. 2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಕೇಂದ್ರ ಸರಕಾರ ನೀಡಿರುವ 12ನೇ ಕಂತು ಇದಾಗಿದೆ.
ಆದರೆ, ಆನ್ಲೈನ್ನಲ್ಲಿ ಕೆವೈಸಿ ತುಂಬದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಈ ಬಾರಿಯ ಕಂತು ತಲುಪುವುದಿಲ್ಲ. ಅನೇಕ ರೈತರು ಇ-ಕೆವೈಸಿ ತುಂಬಿಲ್ಲ. ಹೀಗಾಗಿ, ಬಹಳ ಮಂದಿಗೆ 12ನೇ ಕಂತು ತಲುಪಿರುವುದಿಲ್ಲ.
MICR Code of bank: ಎಂಐಸಿಆರ್ ಕೋಡ್ ಎಂದರೇನು, ಅದನ್ನು ಪತ್ತೆಹಚ್ಚುವುದು ಹೇಗೆ?
ನೀವು ಇ-ಕೆವೈಸಿ ತುಂಬಿದರೂ ಕಂತಿನ ಹಣ ಸಿಕ್ಕಿಲ್ಲವೆಂದರೆ ಕೆಲ ಮಾರ್ಗೋಪಾಯಗಳುಂಟು. ಇಂಥ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲ ಸಹಾಯವಾಣಿ ಮತ್ತು ಇಮೇಲ್ ಐಡಿಯನ್ನು ಕೊಡಲಾಗಿದೆ.
ಪಿಎಂ ಕಿಸಾನ್ ಟಾಲ್ ಫ್ರೀ ನಂಬರ್: 18001155266
ಪಿಎಂ ಕಿಸಾನ್ ಸಹಾಯವಾಣಿ ನಂಬರ್: 155261, 011-24300606, 0120-6025109
ಪಿಎಂ ಕಿಸಾನ್ ಲ್ಯಾಂಡ್ಲೈನ್ ನಂಬರ್: 011-23381092 23382401
ಇಮೆಲ್ ಐಡಿ: [email protected]
ಕೆಲವರಿಗೆ 4 ಸಾವಿರ ರೂ?
ಈಗ ಹಾಕಲಾಗಿರುವ 12ನೇ ಕಂತು ಆಗಸ್ಟ್ನಲ್ಲೇ ಬರಬೇಕಿತ್ತು. ಆದರೆ ಇ-ಕೆವೈಸಿ ಭರ್ತಿ ಮಾಡುವ ಪ್ರಕ್ರಿಯೆಯಿಂದಾಗಿ ವಿಳಂಬವಾಗಿ ಬಂದಿದೆ. ಇನ್ನು, ಈ ಬಾರಿ 12ನೇ ಕಂತು ಹಲವರಿಗೆ ಇ-ಕೆವೈಸಿ ಭರ್ತಿ ಮಾಡದ ಕಾರಣಕ್ಕೆ ತಲುಪಿಲ್ಲವಾದರೆ, ಇನ್ನೂ ಕೆಲ ಫಲಾನುಭವಿಗಳ ಖಾತೆಗೆ 4 ಸಾವಿರ ರೂ ತಲುಪಿದೆ.
ಇದಕ್ಕೆ ಕಾರಣ, ತಾಂತ್ರಿಕ ತೊಂದರೆಯಿಂದಾಗಿ ಕೆಲವರಿಗೆ 11ನೇ ಕಂತು ತಲುಪಿರಲಿಲ್ಲ. ಇಂಥವರಿಗೆ ಈ ಬಾರಿ 11 ಮತ್ತು 12, ಎರಡೂ ಕಂತುಗಳ ಹಣ ಒಟ್ಟಿಗೆ ಬಂದಿವೆ.
ಲುಲು ಗ್ರೂಪ್ನಿಂದ ಭಾರತದ ಅತಿದೊಡ್ಡ ಮಾಲ್, 3 ಸಾವಿರ ಕೋಟಿ ವೆಚ್ಚದ ಯೋಜನೆ
ನಿಯಮದಲ್ಲಿ ಬದಲಾವಣೆ
ಪಿಎಂ ಕಿಸಾನ್ ಯೋಜನೆಯಲ್ಲಿ ನಿಮ್ಮ ಫಲಾನುಭವಿ ಸ್ಥಿತಿಯನ್ನು ವೀಕ್ಷಿಸಲು ಒಂದು ನಿಯಮ ಬದಲಾವಣೆ ಮಾಡಲಾಗಿದೆ. ನಿಮ್ಮ ಬೆನಿಫಿಷಿಯರಿ ಸ್ಟೇಟಸ್ ಪರಿಶೀಲಿಸಲು ಆಧಾರ್ ನಂಬರ್ ಬದಲು ಮೊಬೈಲ್ ನಂಬರ್ ನಮೂದಿಸುವುದು ಅಗತ್ಯ. ಈ ಮುಂಚೆ ಆಧಾರ್ ನಂಬರ್ ನಮೂದಿಸಬೇಕಿತ್ತು. ಆದರೆ, ಈಗ ನೊಂದಾಯಿತ ಮೊಬೈಲ್ ನಂಬರ್ ಹಾಕಬೇಕಾಗುತ್ತದೆ. ಅದರ ಪ್ರಕ್ರಿಯೆ ಇಲ್ಲಿದೆ
ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋದರೆ ಅಲ್ಲಿ ಮಧ್ಯದ ಕ್ಲಸ್ಟರ್ನಲ್ಲಿ ಬೆನಿಫಿಷಿಯರಿ ಸ್ಟೇಟಸ್ ಹೆಸರಿನ ಸಣ್ಣ ಬಾಕ್ಸ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ತೆರೆಯುವ ಹೊಸ ಪುಟದಲ್ಲಿ ನಿಮ್ಮ ನೊಂದಾಯಿತ ಮೊಬೈಲ್ ನಂಬತ್ ಅಥವಾ ರಿಜಿಸ್ಟ್ರೇಶನ್ ನಂಬರ್ ಮೂಲಕ ಬೆನಿಫಿಷಿಯರಿ ಸ್ಟೇಟಸ್ ಪರಿಶೀಲಿಸುವ ಅವಕಾಶ ಇರುತ್ತದೆ.
ನೊಂದಾಯಿತ ಮೊಬೈಲ್ ನಂಬರ್ ಯಾವುದು ಎಂದು ಗೊತ್ತಿಲ್ಲದಿದ್ದರೆ "ನೋ ಯುವರ್ ರಿಜಿಸ್ಟ್ರೇಷನ್ ನಂಬರ್" ಎಂಬ ಲಿಂಕ್ ಕ್ಲಿಕ್ ಮಾಡಿರಿ. ಅದರದಲ್ಲಿ ನೀವು ಇ-ಕೆವೈಸಿ ಭರ್ತಿ ಮಾಡುವಾಗ ನೀಡಿದ್ದ ಮೊಬೈಲ್ ಸಂಖ್ಯೆಯನ್ನು ನಮೂದಿಸಿರಿ. ಆಗ ನಿಮ್ಮ ಫಲಾನುಭವಿ ಸ್ಥಿತಿಯ ವಿವರ ಕಾಣಿಸುತ್ತದೆ. ಇದೂವರೆಗೆ ನಿಮಗೆ ಸಿಕ್ಕಿರುವ ಕಂತಿನ ಹಣದ ವಿವರ ಅದರಲ್ಲಿರುತ್ತದೆ.
ನೀವು ಇ-ಕೆವೈಸಿ ಮಾಡಿಲ್ಲದಿದ್ದರೆ ಅಲ್ಲಿಯೇ ನಿಮಗೆ ಕೆವೈಸಿ ಭರ್ತಿ ಮಾಡಲು ಲಿಂಕ್ ಕಾಣಿಸುತ್ತದೆ. ಅದನ್ನು ಉಪಯೋಗಿಸಬಹುದು.
ಏನಿದು ಕೆವೈಸಿ?
ಕೆವೈಸಿ ಎಂಬುದು ಗ್ರಾಹಕರ ಬಗ್ಗೆ ಅಪ್ಟು ಡೇಟ್ ಮಾಹಿತಿ ಇರುವ ದಾಖಲೆ. ಇಂಗ್ಲೀಷ್ನಲ್ಲಿ ನೋ ಯುವರ್ ಕಸ್ಟಮರ್ ಎನ್ನುವುದರ ಕಿರುರೂಪ. ಬ್ಯಾಂಕ್ನಿಂದ ಹಿಡಿದು ಅನೇಕ ಕಡೆ ಗ್ರಾಹಕರಿಂದ ಕೆವೈಸಿಯನ್ನು ಆಗಾಗ್ಗೆ ತುಂಬಿಸಿಕೊಳ್ಳಲಾಗುತ್ತದೆ.
ಏನಿದು ಯೋಜನೆ?
2019ರಲ್ಲಿ ಕೇಂದ್ರ ಸರಕಾರ ಸಣ್ಣ ರೈತರಿಗೆ ಸಹಾಯವಾಗಿ ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಿದೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ ಅನ್ನು 2 ಸಾವಿರ ರೂಗಳಂತೆ ಮೂರು ಕಂತುಗಳಲ್ಲಿ ಕೊಡಲಾಗುತ್ತದೆ. ಕರ್ನಾಟಕದ ರೈತರಿಗೆ ನಮ್ಮ ರಾಜ್ಯ ಸರಕಾರ 2 ಕಂತು ಪ್ರತ್ಯೇಕವಾಗಿ ನೀಡುತ್ತದೆ. ಅಂದರೆ ಇಲ್ಲಿನ ರೈತರಿಗೆ ವರ್ಷಕ್ಕೆ ಒಟ್ಟು 10 ಸಾವಿರ ರೂ ಸಿಗುತ್ತದೆ.
ದೇಶಾದ್ಯಂತ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿತರಾಗಿರುವ ಅರ್ಹ ರೈತರ ಸಂಖ್ಯೆ 12 ಕೋಟಿಯಾಗಿದೆ. ಕೇಂದ್ರ ಸರಕಾರ ಇದೂವರೆಗೆ 12 ಕಂತುಗಳಿಂದ ಒಟ್ಟು 2 ಲಕ್ಷಕ್ಕೂ ಹೆಚ್ಚು ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದೆ.
ಪಿಎಂ ಕಿಸಾನ್ ಯೋಜನೆಗೆ ರೈತರು ತಮ್ಮ ಪ್ರದೇಶದ ಸ್ಥಳೀಯ ರೈತ ಕೇಂದ್ರಕ್ಕೆ ಹೋಗಿ ನೊಂದಾಯಿಸಿಕೊಳ್ಳಬಹುದು. ಜಮೀನಿನ ಪಹಣಿ ಪತ್ರ, ಆಧಾರ್ ಪ್ರತಿ ಕೊಡಬೇಕಾಗುತ್ತದೆ.