ಹಣ ಉಳಿಯುತ್ತಿಲ್ಲವೆ? ಲಕ್ಷ್ಮಿ ದೇವಿ ಅನುಗ್ರಹಕ್ಕೆ ಪವರ್ ಫುಲ್ ಟಿಪ್ಸ್
ದುಡಿದ ಹಣ ಉಳಿಯಬೇಕು ಎಂಬುದೇ ನಮ್ಮೆಲ್ಲರ ಪ್ರಯತ್ನ, ಆಶಯ ಎಲ್ಲವೂ ಆಗಿರುತ್ತದೆ. ಆದರೆ ಹಲವು ಸಲ ಅದು ಸಾಧ್ಯವಾಗುವುದೇ ಇಲ್ಲ. ಹಣ ಉಳಿಸಲು ಸಾಧ್ಯವಾಗುತ್ತಿಲ್ಲ ಅಂದರೆ ಅದಕ್ಕೆ ದೇವತೆ ಲಕ್ಷ್ಮಿ, ಕುಬೇರರ ಅನುಗ್ರಹ ಇಲ್ಲದಿರುವುದೇ ಕಾರಣ ಎಂಬುದು ನಂಬಿಕೆ ಇರುವವರ ಮಾತು. ಆ ನಂಬಿಕೆ ಇರಬಹುದು, ಇಲ್ಲದಿರಬಹುದು. ಆದರೆ ಯಾರು ನಂಬುತ್ತಾರೋ ಅವರು ಈ ವಿಚಾರದಲ್ಲಿ ಕೆಲ ಸಲಹೆ ನೀಡುತ್ತಾರೆ.
ಅವರು ಹೇಳುವ ಈ ಸಲಹೆಗಳನ್ನು ಪಾಲಿಸಿದರೆ ಹಣಕಾಸು ಉಳಿಯುತ್ತದೆ. ಆರ್ಥಿಕವಾಗಿ ಸದೃಢರಾಗಬಹುದು ಇತ್ಯಾದಿ ಮಾತುಗಳನ್ನು ಆಡುತ್ತಾರೆ. ಹಾಗಾದರೆ ಆ ಸಲಹೆಗಳು ಏನು? ಅವುಗಳನ್ನು ತಿಳಿಸಿಕೊಡುವುದೇ ಈ ಲೇಖನದ ಉದ್ದೇಶ. ಮೊದಲಿಗೆ ಹೇಳುತ್ತಿದ್ದೇವೆ. ಇದು ನಂಬಿಕೆ ಮಾತು. ನಂಬಿದರೆ ನಂಬಬಹುದು, ಇಲ್ಲದಿದ್ದಲ್ಲಿ ಇಲ್ಲ.
ದಕ್ಷಿಣದ ಗೋಡೆಗೆ ಲಾಕರ್ ಅಥವಾ ಕಬೋರ್ಡ್ ಇರಬೇಕು
ಹಣದ ಲಾಕರ್ ಅಥವಾ ಹಣ ಇರುವ ಕಬೋರ್ಡ್ ಅನ್ನು ದಕ್ಷಿಣ ಅಥವಾ ನೈರುತ್ಯದ ಗೋಡೆಗೆ ಇಡಬೇಕು. ಆ ಲಾಕರ್ ಅಥವಾ ಕಬೋರ್ಡ್ ನ ಬಾಗಿಲು ತೆರೆದರೆ ಅದು ಉತ್ತರಕ್ಕೆ ತೆರೆದುಕೊಳ್ಳಬೇಕು. ಏಕೆಂದರೆ, ಉತ್ತರ ದಿಕ್ಕೆಂದರೆ ಕುಬೇರನ ದಿಕ್ಕು. ಹೀಗೆ ಮಾಡುವುದರಿಂದ ಪದೇ ಪದೇ ಹಣವಿರುವ ಸ್ಥಳ ತುಂಬುತ್ತಲೇ ಇರುತ್ತದೆ. ಹ್ಞಾಂ, ಲಾಕರ್ ನ ಎದುರಿಗೆ ಕನ್ನಡಿಯೊಂದನ್ನು ಇಡಬೇಕು. ಲಾಕರ್ ಒಳಗಿನ ನಗದು, ಚಿನ್ನ ಅಥವಾ ಬೆಲೆ ಬಾಳುವ ಯಾವುದೇ ವಸ್ತುವಿನ ಪ್ರತಿಫಲನ ಕನ್ನಡಿಯಲ್ಲಿ ಆಗಬೇಕು.
ತಪ್ಪು ದಾರಿಯಲ್ಲಿ ದುಡಿದ ಹಣ ಉಳಿಯುವುದಿಲ್ಲ
ಯಾವುದನ್ನು ಪುಕ್ಕಟೆ ತೆಗೆದುಕೊಳ್ಳಬಾರದು. ಯಾವುದೇ ಸೇವೆಯನ್ನು ಉಚಿತವಾಗಿ ಮಾಡಬಾರದು. ಸಣ್ಣ ಪ್ರಮಾಣದಲ್ಲಿಯೇ ಆದರೂ ಮಾಡಿದ ಸೇವೆಗೆ ಹಣ ಪಡೆದುಕೊಳ್ಳಬೇಕು. ಇನ್ನು ತಪ್ಪು ದಾರಿಯಲ್ಲಿ ದುಡಿದ ಹಣ ಉಳಿಯುವುದಿಲ್ಲ. ಆದ್ದರಿಂದ ಯಾವುದೇ ತಪ್ಪು ವ್ಯವಹಾರ ಮಾಡಬಾರದು. ಪ್ರತಿ ತಿಂಗಳು ಸಹ ದುಡಿಮೆಯಲ್ಲಿ ಒಂದಿಷ್ಟು ಹಣ ದಾನ ಮಾಡಬೇಕು. ಇದರಿಂದ ಲಕ್ಷ್ಮಿ ಅನುಗ್ರಹವಾಗಿ, ಸಂಪತ್ತು ವೃದ್ಧಿಯಾಗುತ್ತದೆ.
ಕೇಸರಿ ಬಣ್ಣದ ತಿಲಕ ಇಡಬೇಕು
ಮನೆಯ ಹೆಣ್ಣುಮಕ್ಕಳು ಲಕ್ಷ್ಮಿ ಸಮಾನರಾದ್ದರಿಂದ ಅವರನ್ನು ಗೌರವಿಸಬೇಕು. ದೇವರ ಮನೆಯಲ್ಲಿ ಕೆಂಪು ಬಣ್ಣದ ಬಟ್ಟೆಯಲ್ಲಿ ಕುಬೇರ ಯಂತ್ರ ಇಟ್ಟು, ನಿತ್ಯ ಪೂಜಿಸಬೇಕು. ಮನೆಯಲ್ಲಿ ತುಳಸಿ ಗಿಡ ನೆಟ್ಟು, ಪ್ರತಿ ಸಂಜೆ ಮಣ್ಣಿನ ಹಣತೆಯಲ್ಲಿ ತುಪ್ಪದ ದೀಪ ಹಚ್ಚಬೇಕು. ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಲಕ್ಷ್ಮಿ ಅನುಗ್ರಹ ಉತ್ತಮವಾಗಿರುತ್ತದೆ. ಮುರಿದ ಪಾತ್ರೆಗಳನ್ನು ಮನೆಯಲ್ಲಿ ಇಡಬಾರದು, ಬಳಸಬಾರದು. ಪ್ರತಿ ಶುಕ್ರವಾರ ದಕ್ಷಿಣ ದಿಕ್ಕಿನಲ್ಲಿ ತೆರೆದ ಸ್ಥಳದಲ್ಲಿ ಮಹಾವಿಷ್ಣುವಿಗಾಗಿ ನೀರನ್ನು ಇಡಬೇಕು. ಪ್ರತಿ ದಿನ ಸ್ನಾನದ ನಂತರ ಲಕ್ಷ್ಮಿ ದೇವಿಗೆ ನಮಸ್ಕರಿಸಿ, ಹಣೆಗೆ ಕೇಸರಿ ಬಣ್ಣದ ತಿಲಕ ಇಡಬೇಕು.
ಗೋವಿಗೆ ಹಸಿರು ಮೇವನ್ನು ನೀಡಬೇಕು
ಮನೆಯ ಯಜಮಾನಿ ಆದವರು ಪ್ರತಿ ದಿನ ಬೆಳಗ್ಗೆ ಒಂದು ಲೋಟದ ತುಂಬ ನೀರನ್ನು ಮನೆಯ ಹೊಸ್ತಿಲಿನ ಆಚೆಗೆ ಚೆಲ್ಲಬೇಕು. ಇದರಿಂದ ಮನೆಯೊಳಗೆ ಸಂಪತ್ತಿನ ಪ್ರವೇಶಕ್ಕೆ ಅನುಕೂಲ ಆಗುತ್ತದೆ. ಇನ್ನು ಆರ್ಥಿಕ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಹಸುವಿಗೆ ಹಸಿರು ಹುಲ್ಲಿನ ಮೇವನ್ನು ನೀಡಬೇಕು. ತಿಂಗಳ ಯಾವುದೇ ಶುಕ್ರವಾರದಂದು ಮೂವರು ಅವಿವಾಹಿತ ಹೆಣ್ಣುಮಕ್ಕಳಿಗೆ ಖೀರು ನೀಡಬೇಕು. ಜತೆಗೆ ಹಳದಿ ಬಣ್ಣದ ವಸ್ತ್ರ, ಸ್ವಲ್ಪ ಹಣ ನೀಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವಾಗುತ್ತದೆ.