Union Budget 2023: ಕೇಂದ್ರ ಬಜೆಟ್ ಹಿಂದಿರುವ ಪ್ರಮುಖ ವ್ಯಕ್ತಿಗಳಿವರು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಹಣಕಾಸು ವರ್ಷ 2023-24ರ ಸಾಲಿನ ಬಜೆಟ್ ಅನ್ನು ಮಂಡಿಸಲಿದ್ದಾರೆ. 2023ರ ಏಪ್ರಿಲ್ನಿಂದ 2024ರ ಮಾರ್ಚ್ವರೆಗೆ ದೇಶದ ಆರ್ಥಿಕ ಯೋಜನೆಗಳು ಹೇಗಿರಲಿದೆ ಎಂಬುವುದರ ಕನ್ನೋಟವೇ ಈ ಕೇಂದ್ರ ಬಜೆಟ್ ಆಗಿದೆ. ಆದರೆ ಬಜೆಟ್ ಹಿಂದೆ ಕೆಲವು ಪ್ರಮುಖ ವ್ಯಕ್ತಿಗಳ ಶ್ರಮವಿರಲಿದೆ.
ಪ್ರತಿ ವರ್ಷವೂ ಕೂಡಾ ಕೇಂದ್ರ ಹಣಕಾಸು ಸಚಿವರು ಫೆಬ್ರವರಿ ಒಂದರಂದೇ ಬಜೆಟ್ ಅನ್ನು ಮಂಡಿಸುತ್ತಾರೆ. ಅದಕ್ಕೂ ಮುಂಚಿನ ದಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂಡವು ಕೇಂದ್ರ ಸಚಿವರಿಗೆ ಈ ಬಜೆಟ್ ತಯಾರಿಗೆ ಸಹಾಯ ಮಾಡಲಿದೆ.
Union Budget 2023: ಬಜೆಟ್ ಬಗ್ಗೆ ಹೆಚ್ಚಾಗಿ ಕೇಳುವ ಪ್ರಶ್ನೆಗಳಿವು
ಹಣಕಾಸು ಸಚಿವಾಲಯದ ತಂಡವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರ ತಂಡದಲ್ಲಿರಲಿದೆ. ನಿರ್ಮಲಾ ಸೀತಾರಾಮನ್ ಅವರ ತಂಡದಲ್ಲಿ ಇಲಾಖೆಯ ಕಾರ್ಯದರ್ಶಿಗಳು ಇರಲಿದ್ದಾರೆ. ಆರ್ಥಿಕ ಲೆಕ್ಕಾಚಾರ, ಆದಾಯ, ಹೂಡಿಕೆ ಮೊದಲಾದವುಗಳು ಈ ಬಜೆಟ್ನಲ್ಲಿ ಇರಲಿದೆ. ಈ ಬಜೆಟ್ ಹಿಂದಿರುವ ಪ್ರಮುಖ ವ್ಯಕ್ತಿಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್
ಟಿವಿ ಸೋಮನಾಥನ್ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ (Expenditure) ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ಹಣಕಾಸು ಕಾರ್ಯದರ್ಶಿ ಕೂಡಾ ಹೌದು. ಹಣಕಾಸು ಸಚಿವಾಲಯದಲ್ಲಿನ ಅತೀ ಹಿರಿಯ ವ್ಯಕ್ತಿ ಟಿವಿ ಸೋಮನಾಥನ್ ಆಗಿದ್ದಾರೆ. ಮೂಲಭೂತ ಸೌಕರ್ಯ, ಕಲ್ಯಾಣ ಯೋಜನೆಗಳು, ಸಬ್ಸಿಡಿ ಮೊದಲಾದವುಗಳಿಗೆ ಮಾಡಬೇಕಾದ ಖರ್ಚನ್ನು ಲೆಕ್ಕಹಾಕುವಲ್ಲಿ ಕೇಂದ್ರ ವಿತ್ತ ಸಚಿವರಿಗೆ ಸಹಾಯ ಮಾಡಲು ಕಾರ್ಯವನ್ನು ಟಿವಿ ಸೋಮನಾಥನ್ ಮಾಡುತ್ತಾರೆ. ಎಲ್ಲ ಸಚಿವರುಗಳಿಗೆ ಬಜೆಟ್ ಹಂಚಿಕೆ ಮಾಡುವಲ್ಲಿಯೂ ಟಿವಿ ಸೋಮನಾಥನ್ ಮಾರ್ಗದರ್ಶನ ನೀಡಲಿದ್ದಾರೆ.
ಆರ್ಥಿಕ ವ್ಯವಹಾರಗಳ ಇಲಾಖೆ ಮುಖ್ಯಸ್ಥ ಅಜಯ್ ಸೇಠ್
ಆರ್ಥಿಕ ವ್ಯವಹಾರಗಳ ಇಲಾಖೆ ಮುಖ್ಯಸ್ಥ ಅಜಯ್ ಸೇಠ್ ಕೂಡಾ ಬಜೆಟ್ ತಯಾರಿಯಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ಗೆ ಸಹಾಯ ಮಾಡುವ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅಜಯ್ ಸೇಠ್ ಕರ್ನಾಟಕದವರರಾಗಿದ್ದು 1987 ಐಎಎಸ್ ಅಧಿಕಾರಿಯಾಗಿದ್ದಾರೆ. ಬಜೆಟ್ ವಿಭಾಗವು ಅಜಯ್ ಸೇಠ್ ಇಲಾಖೆಯ ಅಡಿಯಲ್ಲಿ ಬರುವ ಕಾರಣದಿಂದಾಗಿ ಬಜೆಟ್ ತಯಾರಿಯಲ್ಲಿ ಅಜಯ್ ಸೇಠ್ ಪ್ರಮುಖ ಪಾತ್ರವಹಿಸುತ್ತಾರೆ.
ಆದಾಯ ಇಲಾಖೆಯ ಸಂಜಯ್ ಮಲ್ಹೋತ್ರಾ
ಆದಾಯ ಇಲಾಖೆಯ ಮುಖ್ಯಸ್ಥ ಸಂಜಯ್ ಮಲ್ಹೋತ್ರಾ ಆಗಿದ್ದಾರೆ. 1990 ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದು, ರಾಜಸ್ಥಾನ ಮೂಲದವರಾಗಿದ್ದಾರೆ. ಅಕ್ಟೋಬರ್ನಿಂದ ಆದಾಯ ಇಲಾಖೆಯಲ್ಲಿ ಸಜಯ್ ಮಲ್ಹೋತ್ರಾ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ತೆರಿಗೆ ಹಾಗೂ ತೆರಿಗೆ ಸಂಬಂಧಿತ ಘೋಷಣೆ ಮಾಡಲು ಆದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಕೇಂದ್ರ ಹಣಕಾಸು ಸಚಿವರಿಗೆ ಸಹಾಯ ಮಾಡಿದ್ದಾರೆ.
ತುಹಿನ್ ಕಾಂತ ಪಾಂಡೆ ಬಗ್ಗೆ ಮಾಹಿತಿ
ತುಹಿನ್ ಕಾಂತ ಪಾಂಡೆ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ಆಗಿದ್ದಾರೆ. ಖಾಸಗೀಕರಣ ಯೋಜನೆಗಳ ವಿಚಾರದಲ್ಲಿ ಹಣಕಾಸು ಸಚಿವೆ ನಿರ್ಮಕಾ ಸೀತಾರಾಮನ್ಗೆ ತುಹಿನ್ ಕಾಂತ ಪಾಂಡೆ ಸಹಾಯ ಮಾಡುತ್ತಾರೆ.
ವಿವೇಕ್ ಜೋಷಿ ಬಗ್ಗೆ ಮಾಹಿತಿ
ವಿವೇಕ್ ಜೋಷಿ ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಇದರೊಂದಿಗೆ ಖಾಸಗಿ ಉದ್ಯಮಗಳ ನಿರ್ವಹಣಾ ಕಾರ್ಯದರ್ಶಿ ಆಲಿ ರಝಾ ರಿಝ್ವಿ ಕೂಡಾ ಸಹಾಯ ಮಾಡಲಿದ್ದಾರೆ. ಇಬ್ಬರು ಪಿಎಸ್ಯು ಬ್ಯಾಂಕ್ಗಳು ಮತ್ತು ಸಂಸ್ಥೆಗಳ ಸಂಬಂಧಿತ ಕಾರ್ಯವನ್ನು ನಿರ್ವಹಣೆ ಮಾಡುತ್ತಾರೆ.
ವಿ ಅನಂತ ನಾಗೇಶ್ವರನ್ ಬಗ್ಗೆ ಮಾಹಿತಿ
ಮುಖ್ಯ ಹಣಕಾಸು ಸಲಹೆಗಾರ ವಿ ಅನಂತ ನಾಗೇಶ್ವರನ್ ಆಗಿದ್ದಾರೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಂಡದಲ್ಲಿ ವಿ ಅನಂತ ನಾಗೇಶ್ವರನ್ ಪ್ರಮುಖ ವ್ಯಕ್ತಿಯಾಗಿದ್ದಾರೆ. ಜಾಗತಿಕ ಆರ್ಥಿಕತೆ ಬಗ್ಗೆಗಿನ ವಿಚಾರವನ್ನು ಸಚಿವರಿಗೆ ಮಾಹಿತಿ ನೀಡುವ ಕಾರ್ಯವನ್ನು ವಿ ಅನಂತ ನಾಗೇಶ್ವರನ್ ಮಾಡುತ್ತಾರೆ, ಹಾಗೆಯೇ ಆರ್ಥಿಕ ಯೋಜನೆಗಳ ಬಗ್ಗೆ ಡೇಟಾವನ್ನು ಕೂಡಾ ನೀಡುತ್ತಾರೆ. ಬಜೆಟ್ ಮುಂಚಿನ ದಿನ ಆರ್ಥಿಕ ಸಮೀಕ್ಷೆಯನ್ನು ಕೂಡಾ ಪ್ರಸ್ತುತ ಪಡಿಸಲಿದ್ದಾರೆ.