MSMEಗಳು 35%ನಷ್ಟು ಬಾಗಿಲು ಮುಚ್ಚಲು ಆರಂಭ: ಸಮೀಕ್ಷೆಯಲ್ಲಿ ಸ್ಫೋಟಕ ಸಂಗತಿ
ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳು (MSME) 35% ಹಾಗೂ ಸ್ವಂತ ಉದ್ಯೋಗಿಗಳು 37%ನಷ್ಟು ಮಂದಿ ತಮ್ಮ ವ್ಯಾಪಾರ- ವ್ಯವಹಾರ ನಿಲ್ಲಿಸಲು ಆರಂಭಿಸಿದ್ದಾರೆ. ಕೊರೊನಾ ಆರ್ಥಿಕ ಹೊಡೆತದಿಂದ ಆರ್ಥಿಕ ಚೇತರಿಕೆ ಹಾದಿಯೇ ಸಿಗುತ್ತಿಲ್ಲವಾದ್ದರಿಂದ ಅವರಿಗೆ ಯಾವುದೇ ಅವಕಾಶ ಕಾಣುತ್ತಿಲ್ಲ ಎಂದು ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಆರ್ಗನೈಸೇಷನ್ (AIMO) ಸಮೀಕ್ಷೆ ತಿಳಿಸಿದೆ.
ಸರ್ಕಾರದ ಆರ್ಥಿಕ ಪ್ಯಾಕೇಜ್ ಎಂಎಸ್ ಎಂಇಗಳಿಗೆ ತಲುಪಿಲ್ಲ. ಇನ್ನು ಸರ್ಕಾರ ಘೋಷಿಸಿದ ಪ್ಯಾಕೇಜ್ ಕೂಡ ಲಾಕ್ ಡೌನ್ ಅವಧಿಯಲ್ಲಿ ಆದ ನಷ್ಟವನ್ನು ತುಂಬಿಕೊಡುವಷ್ಟು ಸಮರ್ಥವಾಗಿಲ್ಲ ಎಂದು AIMO ತಿಳಿಸಿದೆ. ಅಂಥ ದೊಡ್ಡ ಪ್ರಮಾಣದಲ್ಲಿ ವ್ಯಾಪಾರಗಳ ವಿನಾಶ ಹಿಂದೆಂದೂ ಕಂಡಿರಲಿಲ್ಲ ಎಂದಿದೆ.
"ಆತ್ಮನಿರ್ಭರ್ ಭಾರತ್" ಪ್ಯಾಕೇಜ್: MSMEಗಳಿಗೆ 3 ಲಕ್ಷ ಕೋಟಿ ಘೋಷಣೆ
ಮಾರ್ಚ್ 25ನೇ ತಾರೀಕು ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ ಏಪ್ರಿಲ್ 21ರಿಂದ ಹಂತಹಂತವಾಗಿ ಪುನರಾರಂಭ ಮಾಡಲಾಗುತ್ತಿದೆ. ಇದೀಗ ಜೂನ್ 1ನೇ ತಾರೀಕಿನಿಂದ ಹೊಸದಾಗಿ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ.
ಈ ಸಮೀಕ್ಷೆಯಲ್ಲಿ ದೇಶದ ವಿವಿಧ ಒಕ್ಕೂಟ ಮತ್ತು ಕೈಗಾರಿಕೆ ಗುಂಪುಗಳ 46 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ದಾಖಲಿಸಿದ್ದಾರೆ. ಇದರಲ್ಲಿ 32% ಮಂದಿ ಚೇತರಿಕೆಗೆ ಆರು ತಿಂಗಳು ಬೇಕು ಎಂಬ ಅಂದಾಜು ಮಾಡಿದ್ದರೆ, 12ರಷ್ಟು ಮಂದಿ ಮೂರು ತಿಂಗಳಲ್ಲಿ ಚೇತರಿಕೆ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.
ಭಾರತದಲ್ಲಿ 6.50 ಕೋಟಿ ಎಂಎಸ್ ಎಂಇಗಳಿದ್ದು, ಹದಿನೈದು ಕೋಟಿ ಮಂದಿ ಇವುಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಇನ್ನು ಹದಿಮೂರು ಕೋಟಿಗೂ ಹೆಚ್ಚು ಜನ ಸ್ವಂತ ಉದ್ಯೋಗ ಮಾಡಿಕೊಂಡಿದ್ದಾರೆ. ಈ ರೀತಿಯಾಗಿ ವ್ಯಾಪಾರ- ಉದ್ಯಮದ ಸಾಮೂಹಿಕ ವಿನಾಶ ಸ್ವಾತಂತ್ರ್ಯ ನಂತರ ನಡೆದಿರಲಿಲ್ಲ ಎಂದು AIMO ಮಾಜಿ ಅಧ್ಯಕ್ಷ ಕೆ.ಇ. ರಘುನಾಥನ್ ಹೇಳಿದ್ದಾರೆ.
ಎಂಎಸ್ ಎಂಇ ವಲಯಕ್ಕಾಗಿಯೇ ಶ್ಯೂರಿಟಿ ಅಗತ್ಯ ಇಲ್ಲದ ಸಾಲಕ್ಕಾಗಿ 3 ಲಕ್ಷ ಕೋಟಿ ರುಪಾಯಿ ಘೋಷಣೆ ಮಾಡಿದೆ. ಇನ್ನು ಈಕ್ವಿಟಿ ಬಂಡವಾಳ ಎಂದು ಹೂಡಿಕೆ ಮಾಡಲು 50 ಸಾವಿರ ಕೋಟಿ ರುಪಾಯಿಯನ್ನು ಮೀಸಲಿಡುವುದಾಗಿ ಹೇಳಿದೆ.