ಸರ್ಕಾರಿ ಕೆಲಸ ಬಿಟ್ಟು, ಹೆಂಡತಿ ಒಡವೆ ಅಡವಿಟ್ಟು ಸೈಕಲ್ ಬ್ರ್ಯಾಂಡ್ ಕಟ್ಟಿದ ಉದ್ಯಮಿ ಕಥೆ
ವಾಸು ಅಗರಬತ್ತಿ ಮತ್ತು ಸೈಕಲ್ ಬ್ರ್ಯಾಂಡ್ ಅಗರಬತ್ತಿಗಳನ್ನು ನೋಡದಿರುವವರು ಬಹಳ ವಿರಳ. ಅಗರಬತ್ತಿ ಉದ್ಯಮದಲ್ಲಿ ಹಲವು ದಶಕಗಳಿಂದ ಇವರು ಚಿರಪರಿಚಿತ. ಮೈಸೂರಿನ ಎನ್ ರಂಗರಾವ್ 1948ರಲ್ಲಿ ಸ್ಥಾಪಿಸಿದ ಸೈಕಲ್ ಬ್ರ್ಯಾಂಡ್ ಅಗರಬತ್ತಿ ಈಗ ಭಾರತದ ಅಗರವತ್ತು ಉದ್ಯಮದಲ್ಲಿ ಸಿಂಹಪಾಲು ಹೊಂದಿದೆ. ದೇಶದಲ್ಲಿ ಮಾರಾಟವಾಗುವ ಶೇ. 15ಕ್ಕಿಂತ ಹೆಚ್ಚು ಅಗರಬತ್ತಿ ಸೈಕಲ್ ಬ್ರ್ಯಾಂಡ್ನದ್ದೇ ಆಗಿದೆ.
ದಿವಂಗತ ಎನ್ ರಂಗರಾವ್ ಹಾಗೇ ಸುಮ್ಮನೆ ಅದೃಷ್ಟದ ಮೇಲೆ ಈ ಉದ್ಯಮ ಬೆಳೆಸಿದವರಲ್ಲ. ವ್ಯಾಪಾರ, ಹೈನುಗಾರಿಕೆಯಲ್ಲಿ ವಿಫಲರಾಗಿ, ಸರ್ಕಾರಿ ಕೆಲಸ ಇದ್ದರೂ ಅದನ್ನು ಬಿಟ್ಟು ಅಗರಬತ್ತಿ ವ್ಯವಹಾರಕ್ಕೆ ಇಳಿದಿದ್ದವರು ಎನ್ ರಂಗರಾವ್. ಇದೀಗ ಎನ್ ರಂಗರಾವ್ ಅಂಡ್ ಸನ್ಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ರಂಗರಾವ್ ತಮ್ಮ ತಂದೆಯನ್ನು ಸ್ಮರಿಸಿಕೊಂಡಿದ್ದಾರೆ. ರಂಗರಾವ್ ಹೇಗೆ ತಮ್ಮ ಪತ್ನಿಯ ಒಡವೆಯನ್ನು ಅಡವಿಟ್ಟು ಅಗರಬತ್ತಿ ವ್ಯವಹಾರ ಆರಂಭಿಸಿ ಅದರಲ್ಲಿ ಯಶಸ್ವಿಯಾದರು ಎಂಬುದನ್ನು ಅವರ ಮಗನಾದ ಮೋಹನ್ ರಂಗರಾವ್ ತಿಳಿಸಿದ್ದಾರೆ. ಅಂದಹಾಗೆ, ಅ. 20ರಂದು ಎನ್ ರಂಗರಾವ್ ಅವರ ಜನ್ಮದಿನ ಇತ್ತು. ಆ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮೋಹನ್ ರಂಗರಾವ್ ತಮ್ಮ ತಂದೆಯ ನೆನಪು ಮತ್ತು ಅವರ ಉದ್ಯಮಸಾಹಸವನ್ನು ತೆರೆದಿಟ್ಟಿದ್ದಾರೆ.
ಅಡುಗೆ ಬರುತ್ತಾ? ಬಂಡವಾಳ ಇಲ್ಲದೇ ಉದ್ಯಮಿಯಾಗಿ: ವೆಂಡಿಗೋ ಪ್ರಯೋಗ
"1946ರಲ್ಲಿ ಅವರು ವ್ಯಾಪಾರ ಮತ್ತು ಹೈನುಗಾರಿಕೆಯಲ್ಲಿ ವಿಫಲರಾದರು. ಆದರೆ, ಇಷ್ಟವಿಲ್ಲದಿದ್ದರೂ ಅನಿವಾರ್ಯತೆಯಿಂದ ಅವರು 1948ರಲ್ಲಿ ಕೇಂದ್ರ ಸರ್ಕಾರದ ಕೆಲಸಕ್ಕೆ ಅರ್ಜಿ ಹಾಕಿ ಕೆಲಸವನ್ನೂ ಪಡೆದರು... ವಿನೋಬಾ ರಸ್ತೆಯ ಕಲ್ಲಿನ ಬೆಂಚ್ನಲ್ಲಿ ಕೂತ ಅವರು ಸರ್ಕಾರಿ ಕೆಲಸದ ನೇಮಕಾತಿ ಪತ್ರವನ್ನು ಹರಿದುಹಾಕಿ ಮನೆಗೆ ವಾಪಸ್ ಹೋದರು. ಉದ್ಯಮಿಯಾಗಬೇಕೆಂಬ ತಮ್ಮ ಕನಸನ್ನು ಸಾಕಾರಗೊಳಿಸಲು ನಿರ್ಧರಿಸಿದರು..." ಎಂದು ಮೋಹನ್ ರಂಗರಾವ್ ತಮ್ಮ ತಂದೆಯ ಬಗ್ಗೆ ಬರೆದಿದ್ದಾರೆ.
1948ರಲ್ಲಿ ಎನ್ ರಂಗರಾವ್ ಆರಾಮವಾಗಿ ಇರಬಹುದಾಗಿ ಸರ್ಕಾರಿ ಕೆಲಸವನ್ನು ಬಿಟ್ಟು, ತಮ್ಮ ಪತ್ನಿಯ ಒಡವೆಯನ್ನು ಅಡ ಇಟ್ಟು ಬಂದ 4000 ರೂ ಹಣದಲ್ಲಿ ತಮ್ಮದೇ ಅಗರಬತ್ತಿ ಉದ್ಯಮವನ್ನು ಆರಂಭಿಸಿದ್ದರು. ತನ್ನನ್ನು ನಂಬಿಕೊಂಡು ಹೆಂಡತಿ, ವೃದ್ಧ ತಾಯಿ ಮತ್ತು ನಾಲ್ವರು ಮಕ್ಕಳಿದ್ದರೂ ರಂಗರಾವ್ ತಮ್ಮ ಮನದ ಮಾತನ್ನು ಆಲಿಸಿ ಸಾಹಸಕ್ಕೆ ಇಳಿದಿದ್ದರು.
"ನನ್ನ ತಂದೆ ರಂಗರಾವ್ ಕೇವಲ 4000 ರೂಪಾಯಿ ಬಂಡವಾಳದಲ್ಲಿ ತಮ್ಮ ಸಾಮ್ರಾಜ್ಯದ ಸ್ಥಾಪನೆಗೆ ನಾಂದಿ ಹಾಡಿದರು. 1958ರಷ್ಟರಲ್ಲಿ 10 ಲಕ್ಷ ರೂಪಾಯಿ ಆದಾಯ ಗಳಿಸುವ ಮಟ್ಟಕ್ಕೆ ಬೆಳೆಸಿದರು" ಎಂದು ಹೇಳಿಕೊಂಡಿರುವ ಮೋಹನ್ ರಂಗರಾವ್, "ಅಪ್ಪಾ, ನಿಮ್ಮ ಜೀವನ ಮತ್ತು ನೀವು ಕಲಿಸಿದ ತಿಳಿವಳಿಕೆ ನನ್ನ ಉಸಿರು ಇರುವವರೆಗೂ ನನ್ನೊಂದಿಗೆ ಇರುತ್ತದೆ. ಜನ್ಮ ದಿನದ ಶುಭಾಶಯಗಳು ಅಪ್ಪಾ" ಎಂದು ಲಿಂಕ್ಡ್ ಇನ್ನಲ್ಲಿ ಬರೆದಿದ್ದಾರೆ.
ಎನ್ ಆರ್ ಗ್ರೂಪ್
1948ರಲ್ಲಿ ಮೈಸೂರಿನಲ್ಲಿ ಎನ್ ರಂಗರಾವ್ ಅವರು ಮೈಸೂರ್ ಪ್ರಾಡಕ್ಟ್ಸ್ ಅಂಡ್ ಜನರಲ್ ಟ್ರೇಡಿಂಗ್ ಕಂಪನಿ ಎಂಬ ಹೆಸರಲ್ಲಿ ಹೊಸ ಉದ್ಯಮ ಆರಂಭಿಸಿದರು. ನಂತರ ಇದು ಎನ್ ರಂಗರಾವ್ ಅಂಡ್ ಸನ್ಸ್ ಎಂದು ಬದಲಾಯಿತು. ಇದೀಗ ಕಾರ್ಪೊರೇಟ್ ಸಂಸ್ಥೆಯಾಗಿ ಬೆಳೆದಿದ್ದು, ಎನ್ ರಂಗರಾವ್ ಅವರ ಮೂರನೇ ತಲೆಮಾರಿನ ಜನರು ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ರಂಗರಾವ್ ಮೊಮ್ಮಗ ಅರ್ಜುನ್ಮೂರ್ತಿ ರಂಗ ಅವರು ಈ ಗ್ರೂಪ್ನ ಎಂಡಿ ಮತ್ತು ಸಿಇಒ ಆಗಿದ್ದಾರೆ.
ಪಿಎಂ ಕಿಸಾನ್: ಕೆವೈಸಿ ಮಾಡಿದರೂ ಹಣ ಬಂದಿಲ್ಲವಾ? ಹೀಗೆ ಮಾಡಿ
ಎನ್ ರಂಗರಾವ್ ಅಂಡ್ ಸನ್ಸ್ ಗ್ರೂಪ್ನಲ್ಲಿ ಈಗ ಅಗರಬತ್ತಿ, ಸುಗಂಧದ್ರವ್ಯ, ಎಣ್ಣೆ, ಎಲೆಕ್ಟ್ರಾನಿಕ್ಸ್ ಸೇರಿ ವಿವಿಧ ಉದ್ಯಮಗಳಿಗೆ ವಿಸ್ತರಿಸಿರುವ ಆರು ಕಂಪನಿಗಳಿವೆ. ಆದರೆ, ಈ ಗ್ರೂಪ್ಗೆ ಈಗಲೂ ಅಗರಬತ್ತಿ ಉದ್ಯಮವೇ ಗಟ್ಟಿಯಾಗಿ ಕೈಹಿಡಿದಿರುವುದು. 500 ವಿವಿಧ ರೀತಿಯ ಸುಗಂಧದ ಉತ್ಪನ್ನಗಳನ್ನು ಸೈಕಲ್ ಬ್ರ್ಯಾಂಡ್ ಅಡಿಯಲ್ಲಿ ತಯಾರಿಸಲಾಗುತ್ತಿದೆ.
ಎಣ್ಣೆ ತಯಾರಿಕಾ ಕ್ಷೇತ್ರದಲ್ಲೂ ರಂಗರಾವ್ ಗ್ರೂಪ್ ತೊಡಗಿಸಿಕೊಂಡಿದೆ. ಒಟ್ಟಾರೆ ಎನ್ಆರ್ ಗ್ರೂಪ್ ಭಾರತದಲ್ಲಿ ಮಾತ್ರವಲ್ಲ 65 ದೇಶಗಳಲ್ಲಿ ವ್ಯವಹಾರ ನಡೆಸುತ್ತಿದೆ. ಚಿನ್ನ ಅಡವಿಟ್ಟು ಪಡೆದ ಹಣದಿಂದ ಇಂದು ಒಂದು ದೊಡ್ಡ ಉದ್ಯಮ ಸಾಮ್ರಾಜ್ಯವೇ ನಿರ್ಮಾಣವಾಗಿರುವುದು ಹೊಸ ಪೀಳಿಗೆಯ ಉದ್ಯಮಸಾಹಸಿಗಳಿಗೆ ಸ್ಫೂರ್ತಿದಾಯಕವಾಗಬಹುದು.