ಈ ಹಬ್ಬದ ಸೀಸನ್ನಲ್ಲಿ ಭಾರತದಲ್ಲಾದ ವ್ಯಾಪಾರ ವಹಿವಾಟು ಎಷ್ಟು?
ನವದೆಹಲಿ, ಅ. 25: ಹಬ್ಬದ ಋತು ಬಂತೆಂದರೆ ಭಾರತದ ಬಹುತೇಕ ಭಾಗಗಳಲ್ಲಿ ವ್ಯಾಪಾರದ ಭರಾಟೆ ಹೆಚ್ಚಿರುತ್ತದೆ. ದಿನನಿತ್ಯ ಬಳಕೆಯ ಎಫ್ಎಂಸಿಜಿಗಳಿಂದ ಹಿಡಿದು ಪ್ರವಾಸೋದ್ಯಮದವರೆಗೂ ಅನೇಕ ಕ್ಷೇತ್ರಗಳು ಹಬ್ಬದ ಸಂದರ್ಭದಲ್ಲಿ ಉತ್ತಮ ವಹಿವಾಟು ಕಂಡು ಹೆಚ್ಚು ಕಳೆಗಟ್ಟುತ್ತವೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಪ್ರಕಾರ, ಈ ವರ್ಷದ ಹಬ್ಬದ ಸೀಸನ್ನಲ್ಲಿ 1.25 ಲಕ್ಷ ಕೋಟಿ ರೂಪಾಯಿಯಷ್ಟು ವ್ಯಾಪಾರ ವಹಿವಾಟು ಆಗಿದೆಯಂತೆ.
ದಸರಾ ಅಥವಾ ನವರಾತ್ರಿಯ ಆರಂಭವಾದ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 23ರವರೆಗೆ ನಡೆದ ವ್ಯಾಪಾರ ವಹಿವಾಟಿನ ಅಂಕಿ ಅಂಶವನ್ನು ಸಿಎಐಟಿ ಉಲ್ಲೇಖಿಸಿದೆ. ಹಬ್ಬದ ಸೀಸನ್ನಲ್ಲಿ ದೀಪಾವಳಿಯೂ ಇದ್ದು, ಇದು ಬಹುತೇಕ ರಾಷ್ಟ್ರವ್ಯಾಪಿ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಹೀಗಾಗಿ, ಹಬ್ಬದ ಸೀಸನ್ನಲ್ಲಿ ಒಟ್ಟು ಆಗುವ ವ್ಯಾಪಾರ ವಹಿವಾಟಿನ ಮೊತ್ತ ಇನ್ನೂ ಹೆಚ್ಚಿರಲಿದೆ. ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲವಾಲ್ ಕೂಡ ಇದೇ ನಿರೀಕ್ಷೆಯಲ್ಲಿದ್ದು, ಭಾರತದಲ್ಲಿ ದೀಪಾವಳಿ ಹಬ್ಬದ ಒಟ್ಟು ವ್ಯಾಪಾರ ವಹಿವಾಟು ಒಂದೂವರೆ ಲಕ್ಷ ಕೋಟಿ ರೂಪಾಯಿ ದಾಟಬಹುದು ಎಂದು ಅಂದಾಜು ಮಾಡಿದ್ದಾರೆ.
ಮುಹೂರ್ತ ಟ್ರೇಡಿಂಗ್ ಅಂತ್ಯ: ಷೇರುಪೇಟೆಯಲ್ಲಿ ಗೂಳಿಯಾಟ
ನಮ್ಮ ದೀಪಾವಳಿ ಭಾರತೀಯ ದೀಪಾವಳಿ
ಈ ಬಾರಿ ದೀಪಾವಳಿ ಹಬ್ಬಕ್ಕೆ ವ್ಯಾಪಾರಸ್ಥರು ಬಹಳ ಒತ್ತು ಕೊಟ್ಟಿದ್ದರು. ಸಿಎಐಟಿ ಸಲಹೆ ಮೇರೆಗೆ "ನಮ್ಮ ದೀಪಾವಳಿ, ಭಾರತೀಯ ದೀಪಾವಳಿ" ಥೀಮ್ ಅನ್ನು ವ್ಯಾಪಾರೋದ್ಯಮ ಅನುಸರಿಸಿತ್ತು. ಈ ಬಾರಿ ಭಾರತೀಯ ಉತ್ಪನ್ನಗಳ ಮಾರಾಟಕ್ಕೆ ವ್ಯಾಪಾರಸ್ಥರು ಹೆಚ್ಚು ಆದ್ಯತೆ ನೀಡಿದ್ದರೆನ್ನಲಾಗಿದೆ. ಸಣ್ಣ ಕೈಗಾರಿಕೆಗಳು, ಸ್ಥಳೀಯ ಉದ್ದಿಮೆಗಳು, ಕುಶಲಕರ್ಮಿಗಳು ಇವರೆಲ್ಲರ ಉತ್ಪನ್ನಗಳು ಈ ಬಾರಿ ಭರ್ಜರಿಯಾಗಿ ಮಾರಾಟವಾಗಿರುವುದು ತಿಳಿದುಬಂದಿದೆ.
ದೀಪಾವಳಿ ವೇಳೆ ಆಗಿರುವ ವ್ಯಾಪಾರ ವಹಿವಾಟಿನಿಂದ ಭಾರತದಲ್ಲಿ ರೀಟೇಲ್ ಉದ್ದಿಮೆಗೆ ಒಳ್ಳೆಯ ಪುಷ್ಟಿ ಸಿಕ್ಕಂತಾಗಿದೆ ಎಂದು ಹೇಳುವ ಸಿಎಐಟಿ ಪ್ರಧಾನ ಕಾರ್ಯದರ್ಶಿ, ಭಾರತದಲ್ಲಿ ವ್ಯಾಪಾರಸ್ಥರ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುತ್ತಿರುವ ಸಂಗತಿಯನ್ನು ಎತ್ತಿ ತೋರಿಸಿದ್ದಾರೆ.
ಹಣದುಬ್ಬರದ ನಡುವೆಯೂ ಧನತ್ರಯೋದಶಿ ದಿನ ಬಂಪರ್ ಚಿನ್ನ ಖರೀದಿ!
ಅಪ್ಡೇಟ್ ಆಗಿರುವ ವ್ಯಾಪಾರಸ್ಥರು
ವಿಶ್ವಾದ್ಯಂತ ವ್ಯವಹಾರ ನಡೆಯುವ ರೀತಿ ಬಹಳ ವೇಗವಾಗಿ ಬದಲಾಗುತ್ತಿದೆ. ಭಾರತದಲ್ಲೂ ಕೂಡ ವ್ಯಾಪಾರಸ್ಥರು ಇಂದಿನ ವ್ಯವಹಾರ ರೀತಿಗೆ ಬದಲಾಗುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಪ್ರವೀಣ್ ಖಂಡೇಲವಾಲ್ ಹೇಳುತ್ತಾರೆ.
"ಇವತ್ತು, ದೀಪಾವಳಿ ಹಬ್ಬದಂದು ದೇಶಾದ್ಯಂತ ವ್ಯಾಪಾರಸ್ಥರು ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ಗಳನ್ನು ಪೂಜಿಸುವುದರ ಜೊತೆಗೆ ಬಯೋಮೆಟ್ರಿಕ್ ಮೆಷೀನ್, ಎಲೆಕ್ಟ್ರಾನಿಕ್ ಕ್ಯಾಷ್ ಟೆಲರ್, ಪಿಒಎಸ್ ಇತ್ಯಾದಿಯನ್ನೂ ಬಳಕೆ ಮಾಡುತ್ತಾರೆ.
"ಈಗ ಎಲ್ಲಾ ವ್ಯವಹಾರಗಳೂ ಜಿಎಸ್ಟಿ ಪೋರ್ಟಲ್ ಮೂಲಕ ನಡೆಯುತ್ತಿವೆ. ಸಾಂಪ್ರದಾಯಿಕ ಲೆಡ್ಜರ್ ಅಕೌಂಟ್ಗಳ ಸ್ಥಾನವನ್ನು ಜಿಎಸ್ಟಿ ಪೋರ್ಟಲ್ ತುಂಬಿದೆ. ಹಲವು ರೀತಿಯ ಜಿಎಸ್ಟಿ ತಂತ್ರಾಂಶಗಳು ಬಂದಿವೆ. ವ್ಯಾಪಾರಸ್ಥರು ಈಗ ಜಿಎಸ್ಟಿ ಪೋರ್ಟಲ್ ಅನ್ನೂ ಪೂಜಿಸುತ್ತಿದ್ದಾರೆ" ಎಂದು ಸಿಎಐಟಿ ಸೆಕ್ರೆಟರಿ ಜನರಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಈಗ ವ್ಯಾಪಾರದ ಸ್ವರೂಪ ಬದಲಾಗುತ್ತಿದೆ. ವ್ಯಾಪಾರ ರೀತಿ ನೀತಿಯಲ್ಲಿ ಬದಲಾವಣೆ ಆಗುತ್ತಿದೆ. ತಂತ್ರಜ್ಞಾನಗಳು ಬಹಳ ವೇಗವಾಗಿ ಬದಲಾಗುತ್ತಿವೆ. ಅದಕ್ಕೆ ತಕ್ಕಂತೆ ವ್ಯಾಪಾರಸ್ಥರೂ ಆ ವೇಗಕ್ಕೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಭಾರತದ ರೀಟೇಲ್ ಉದ್ಯಮಕ್ಕೆ ಒಳ್ಳೆಯ ಪುಷ್ಟಿ ಸಿಕ್ಕಿದೆ.
ಆರ್ಥಿಕತೆಗೆ ಪುಷ್ಟಿ
ಈ ಹಬ್ಬದ ಸೀಸನ್ನಲ್ಲಿ ಆಗಿರುವ ಅಮೋಘ ವ್ಯವಹಾರವು ಹಣದುಬ್ಬರವನ್ನು ಅಪಾಯಕಾರಿ ಮಟ್ಟಕ್ಕಿಂತ ಕೆಳಗೆ ಎಳೆಯಲು ಸಹಾಯವಾಗುವ ನಿರೀಕ್ಷೆ ಇದೆ. ಸದ್ಯ ಭಾರತದಲ್ಲಿ ಗ್ರಾಹಕ ಬೆಲೆ ಸೂಚಿ (ಸಿಪಿಐ) ಆಧಾರಿತವಾಗಿ ಅಳೆಯಲಾಗುವ ಹಣದುಬ್ಬರ ಭಾರತದಲ್ಲಿ ಶೇ. 7.41 ಇದೆ. ಇದನ್ನು ಶೇ. 4ಕ್ಕಿಂತ ಕೆಳಗೆ ಇಳಿಸುವುದು ಆರ್ಬಿಐನ ಗುರಿ. ಈ ನಿಟ್ಟಿನಲ್ಲಿ ಹಬ್ಬದ ಸೀಸನ್ನಲ್ಲಿ ಆಗಿರುವ ವ್ಯಾಪಾರ ವಹಿವಾಟು ಜಿಡಿಪಿ ವೃದ್ಧಿಗೆ ಸಹಾಯವಾಗುವುದರ ಜೊತೆಗೆ ಹಣದುಬ್ಬರ ಇಳಿಕೆಗೆ ಪೂರಕವಾಗಿ ಕೆಲಸ ಮಾಡುವ ಸಾಧ್ಯತೆ ಇದೆ.