ಸಲ್ಮಾನ್ ಗೆ ಖುಲಾಸೆ. ಷೇರುಪೇಟೆಯಲ್ಲಿ ಯಾರಿಗೆ ಲಾಭ?
ಮುಂಬೈ, ಡಿ. 10: 2002ರ ಹಿಟ್ ಅಂಡ್ ರನ್ ಕೇಸಿನ ಪ್ರಮುಖ ಆರೋಪಿಯಾಗಿದ್ದ ನಟ ಸಲ್ಮಾನ್ ಖಾನ್ ಅವರನ್ನು ನಿರ್ದೋಷಿ ಎಂದು ಘೋಷಿಸಿ ಬಾಂಬೆ ಹೈಕೋರ್ಟ್ ಗುರುವಾರ ಪ್ರಕರಣದಿಂದ ಖುಲಾಸೆಗೊಳಿಸಿದೆ. ಇದರ ಪರಿಣಾಮ ಷೇರುಪೇಟೆ ಮೇಲೂ ಆಗಿದೆ.
ಸಲ್ಮಾನ್ ಖಾನ್ ಅವರ ಸರ್ಕಾರೇತರ ಸಂಸ್ಥೆ ಬೀಯಿಂಗ್ ಹ್ಯೂಮನ್ ನ ಎಲ್ಲಾ ಬಗೆಯ ವಸ್ತ್ರ ವಿನ್ಯಾಸ, ನಿರ್ಮಾಣದ ಹೊಣೆ ಹೊತ್ತಿರುವ ಮುಂಬೈ ಮೂಲದ ಜವಳಿ ಸಂಸ್ಥೆ ಮಂಧಾನ(Mandhana) ಗೆ ಗುರುವಾರ ಭರ್ಜರಿ ಸಂಭ್ರಮಾಚರಣೆ ಸಮಯ. ಸಲ್ಮಾನ್ ಖಾನ್ ಖುಲಾಸೆ ಸುದ್ದಿ ಹೊರ ಬರುತ್ತಿದ್ದಂತೆ ಕಂಪನಿಯ ಷೇರುಗಳು ಶೇ 12ರಷ್ಟು ಏರಿಕೆ ಕಂಡಿತು.[ಗುದ್ದೋಡು ಪ್ರಕರಣ: ಸಲ್ಮಾನ್ ನಿರ್ದೋಷಿ ಎಂದ ಹೈಕೋರ್ಟ್]
ಸಲ್ಮಾನ್ ಖಾನ್ ಅವರು ರಾಯಭಾರಿಯಾಗಿರುವ ವಸ್ತ್ರ ವಿನ್ಯಾಸ ಶ್ರೇಣಿಯನ್ನು ರೂಪಿಸುವ, ತಯಾರಿಸುವ ಜವಾಬ್ದಾರಿಯನ್ನು ಮಂಧಾನ ಸಂಸ್ಥೆ ಹೊತ್ತುಕೊಂಡಿದೆ. ಮುಂದಿನ 9 ವರ್ಷಗಳ ಕಾಲ ಜವಳಿ ಉತ್ಪನ್ನಗಳನ್ನು ವಿಶ್ವವ್ಯಾಪಿ ಪ್ರಚಾರ ಮಾಡಲಿದೆ.
ಬಿಎಸ್ ಇನಲ್ಲಿ 266.50 ರು ನಂತೆ ವಹಿವಾಟು ಆರಂಭಿಸಿದ ಮಂಧಾನಾ ಇಂಡಸ್ಟ್ರೀಸ್ ಷೇರುಗಳು ಇಂಟ್ರಾಡೇ ಅವಧಿ ಮುಗಿಯುವ ಹೊತ್ತಿಗೆ 286 ರುಗೆ ಏರಿತ್ತು. ಒಟ್ಟಾರೆ ಶೇ 12ರಷ್ಟು ಏರಿಕೆ ಕಂಡಿತ್ತು. ದಿನದ ಅಂತ್ಯಕ್ಕೆ ಬಿಎಸ್ ಇನಲ್ಲಿ ಶೇ 2.41ರಷ್ಟು ಏರಿಕೆಯೊಂದಿಗೆ 271.50ರು ನಂತೆ ವಹಿವಾಟು ಮುಗಿಸಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ ಶೇ 2.61ರಷ್ಟು ಮೇಲಕ್ಕೇರಿ 272.75ರು ನಷ್ಟು ಏರಿದೆ.
ಈ ಹಿಂದೆ ಸಲ್ಮಾನ್ ಖಾನ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿದ್ದಾಗ ಬೀಯಿಂಗ್ ಹ್ಯೂಮನ್ ಸಂಸ್ಥೆ ಹಾಗೂ ಸಲ್ಮಾನ್ ಅವರು ಅಶಕ್ತ, ನಿರ್ಗತಿಕ, ರೋಗಿಗಳು, ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವಾಗುತ್ತಿರುವ ಅಂಶವನ್ನು ಕೋರ್ಟ್ ಪರಿಗಣಿಸಿತ್ತು. ಸರಿಯಾದ ಸಾಕ್ಷಿ ಆಧಾರಗೊಳಿಲ್ಲ ಎಂಬ ಆಂಶದ ಮೇಲೆ ಬಾಂಬೆ ಹೈಕೋರ್ಟ್ ಸಲ್ಮಾನ್ ರನ್ನು ಖುಲಾಸೆಗೊಳಿಸಿದೆ. (ಗುಡ್ ರಿಟರ್ನ್ಸ್ .ಇನ್)