ಬೆಂಗಳೂರು, ಫೆಬ್ರವರಿ 8: ಇತ್ತೀಚೆಗೆ ನಿಧನರಾದ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಹುಟ್ಟಿದ ಊರನ್ನು ಪ್ರಮುಖ ಸಾಂಸ್ಕೃತಿಕ ಕ್ಷೇತ್ರವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಎರಡನೆಯ ಬಜೆಟ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ವಲಯಕ್ಕೆ ವಿವಿಧ ಕಾರ್ಯಕ್ರಮಗಳಿಗಾಗಿ ಅನುದಾನಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ
ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. ಗಳ ವಿಶೇಷ ಅನುದಾನ ಕೂಡ ಸೇರಿದೆ.
ಜಾನಪದ ಕಲಾವಿದರು ಮತ್ತು ಕಲೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಆರಂಭಿಸಲಾಗಿದ್ದ ಜಾನಪದ ಜಾತ್ರೆ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿತ್ತು. ಈಗ ಆ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲು ಕುಮಾರಸ್ವಾಮಿ ಉದ್ದೇಶಿಸಿದ್ದಾರೆ.
ಅಲ್ಲದೆ, ತಿಪಟೂರಿನಲ್ಲಿ ಹಾಸ್ಯನಟ ದಿ. ನರಸಿಂಹರಾಜು ಅವರ ಹೆಸರಿನಲ್ಲಿ ಸ್ಮಾರಕ ಸಭಾಭವನ ನಿರ್ಮಿಸುವ ಯೋಜನೆ ಮೂಲಕ ಕನ್ನಡ ಚಿತ್ರರಂಗಕ್ಕೆ ನರಸಿಂಹರಾಜು ನೀಡಿದ ಕೊಡುಗೆಯನ್ನು ಸ್ಮರಣೀಯವನ್ನಾಗಿಸಲು ಮುಂದಾಗಿದ್ದಾರೆ.
ಕನ್ನಡ ಮತ್ತು ಸಾಂಸ್ಕೃತಿಕ ವಲಯಕ್ಕೆ ಅವರು ಮಾಡಿದ ಕೆಲವು ಘೋಷಣೆಗಳ ವಿವರ ಇಲ್ಲಿವೆ...
ಬಾಣಂದೂರು ಮಾದರಿ ಗ್ರಾಮ
ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮಸ್ಥಳ ರಾಮನಗರ ಜಿಲ್ಲೆಯ ಬಿಡದಿ ತಾಲ್ಲೂಕಿನ ಬಾಣಂದೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ಶ್ರೀಗಳ ಜೀವನ ಸಾಧನೆಗಳು ಮತ್ತು ವಿಚಾರಗಳನ್ನು ಸಾರಲು ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಪಿಸಲು 25 ಕೋಟಿ ರೂ. ಅನುದಾನ.
ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.ಗಳ ಅನುದಾನ.
ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ.
ಜಾನಪದ ಜಾತ್ರೆ ಪುನರಾರಂಭ
ರಾಜ್ಯದ ಜಾನಪದ ಕಲಾವಿದರು ಹಾಗೂ ಕಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ "ಜಾನಪದ ಜಾತ್ರೆ" ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲಾಗುವುದು. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಏರ್ಪಡಿಸಲು 2 ಕೋಟಿ ರೂ. ಅನುದಾನ ಒದಗಿಸಲಾಗುವುದು.
* ಮೈಸೂರಿನಲ್ಲಿ ಸುತ್ತೂರಿನ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಠದ ವತಿಯಿಂದ ಕರಕುಶಲಕರ್ಮಿಗಳಿಗೆ ಅರ್ಬನ್ ಹಾಟ್ ವ್ಯವಸ್ಥಿತ ಸೌಲಭ್ಯ ಕಲ್ಪಿಸಲು ಹಾಗೂ ಉನ್ನತೀಕರಿಸಲು
5 ಕೋಟಿ ರೂ. ಅನುದಾನ.
ಕರಗ ಉತ್ಸವ ಸಂಘಗಳಿಗೆ ಅನುದಾನ
ಶ್ರೀ ಕೆಂಗಲ್ ಹನುಮಂತಯ್ಯ ಹಾಸ್ಟಲ್ ಟ್ರಸ್ಟ್, ಬೆಂಗಳೂರು ಇವರ ಸಾಂಸ್ಕೃತಿಕ ಮತ್ತು ಗ್ರಂಥಾಲಯ ಕೇಂದ್ರ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ.
* ಕರಗ ಉತ್ಸವ ಆಚರಿಸುವ 139 ಸಂಘ ಸಂಸ್ಥೆಗಳಿಗೆ, ತುಮಕೂರು ಜಿಲ್ಲೆ ಮಾಯಸಂದ್ರದ ಆದಶಕ್ತಿ ಮಾತೆಯರ ವೃದ್ಧಾಶ್ರಮ ಅಭಿವೃದ್ಧಿಗೆ, ಕರ್ನಾಟಕ ರಾಜ್ಯ ಕುಂಚಿಟಿಗರ-ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ.
ನರಸಿಂಹರಾಜು ಹೆಸರಿನಲ್ಲಿ ಸಭಾಭವನ
ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜು ಅವರ ಹೆಸರಿನಲ್ಲಿ ಸ್ಮಾರಕ ಸಭಾ ಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ.
* ಮಂಡ್ಯದ ಕರ್ನಾಟಕ ಸಂಘದ ಅಭಿವೃದ್ಧಿಗೆ, ಕರ್ನಾಟಕ ಜಾನಪದ ಪರಿಷತ್ತಿನ ಚಟುವಟಿಕೆಗಳಿಗೆ, ದಾವಣಗೆರೆ ಜಿಲ್ಲೆ ಮಲೇಬೆನ್ನೂರಿನ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟಿಗೆ ತಲಾ 1 ಕೋಟಿ ರೂ. ಅನುದಾನ.


Click it and Unblock the Notifications