ಬಜೆಟ್ 2019 : ಕಂದಾಯ ಇಲಾಖೆಗೆ ಕುಮಾರಸ್ವಾಮಿ ಕೊಟ್ಟಿದ್ದೇನು?
ಬೆಂಗಳೂರು, ಫೆಬ್ರವರಿ 08 : ಹಣಕಾಸು ಸಚಿವರೂ ಆಗಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಕಂದಾಯ ಇಲಾಖೆಗೆ ಹಲವಾರು ಕೊಡುಗೆಗಳನ್ನು ಅವರು ನೀಡಿದ್ದಾರೆ.
ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ರಾಜ್ಯದಲ್ಲಿ ಹೊಸದಾಗಿ 4 ತಾಲೂಕುಗಳನ್ನು ರಚನೆ ಮಾಡುವುದಾಗಿ ಅವರು ಘೋಷಣೆ ಮಾಡಿದರು. ಕಂದಾಯ ಇಲಾಖೆಯಲ್ಲಿ ಆಯುಕ್ತಾಲಯ ರಚಿಸಲು ಪರಿಶೀಲಿಸುವುದಾಗಿ ಘೋಷಣೆ ಮಾಡಿದರು.
ಮಳೆ, ಭೂ ಕುಸಿತದಿಂದ ಹಾನಿಗೊಳಗಾದ ಕೊಡಗು ಜಿಲ್ಲೆಗೂ ಅನುದಾನ ಘೋಷಣೆ ಮಾಡಿದರು. ಕೊಡಗು ಪುನರ್ ನಿರ್ಮಾಣ, ಪುನರ್ವಸತಿ ಮತ್ತು ಅಭಿವೃದ್ಧಿ ಪ್ರಾಧಿಕಾರದ ದೈನಂದಿನ ಕಾರ್ಯಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನ ನೀಡಿದ್ದಾರೆ.
ಮಠ ಮತ್ತು ರಾಜ್ಯದ ಇತರ ಧಾರ್ಮಿಕ ಸಂಸ್ಥೆಗಳಿಗೆ 2019-20ನೇ ಸಾಲಿನ ಬಜೆಟ್ನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 60 ಕೋಟಿ ರೂ.ಗಳ ಅನುದಾನವನ್ನು ಘೋಷಣೆ ಮಾಡಿದ್ದಾರೆ.
4 ಹೊಸ ತಾಲೂಕುಗಳ ಘೋಷಣೆ
* ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕುಗಳನ್ನಾಗಿ ರಚನೆ ಮಾಡಲಾಗುತ್ತದೆ.
* ಕಂದಾಯ ಇಲಾಖೆಯಲ್ಲಿ ಆಯುಕ್ತಾಲಯ ರಚಿಸಲು ಪರಿಶೀಲನೆ ನಡೆಸುವುದಾಗಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.
ಕೊಡಗು ಅಭಿವೃದ್ಧಿ
ಮಳೆ ಮತ್ತು ಭೂ ಕುಸಿತದಿಂದ ಹಾನಿಗೊಳದಾಗ ಕೊಡಗು ಜಿಲ್ಲೆಯ ಅಭಿವದ್ಧಿಗೆ ಕೊಡಗು ಪುನರ್ ನಿರ್ಮಾಣ, ಪುನರ್ವಸತಿ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗಿದೆ. ಪ್ರಾಧಿಕಾರದ ದೈನಂದಿನ ಕಾರ್ಯಚಟುವಟಿಕೆಗೆ 2 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿದೆ.
ಮೇಲುಕೋಟೆ ಅಭಿವೃದ್ಧಿ ನಿಗಮ ಸ್ಥಾಪನೆ
* ಮಾನಸ ಸರೋವರ ಯಾತ್ರಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು 30,000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.
* ಐತಿಹಾಸಿಕ ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೆ ಮೇಲುಕೂ ಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಇದಕ್ಕಾಗಿ 5 ಕೋಟಿ ರೂ .ಅನುದಾನ ಮೀಸಲಾಗಿಡಲಾಗಿದೆ.
ಜಮೀನುಗಳ ಸರ್ವೆ ಕಾರ್ಯ
* ಮುಜರಾಯಿ ಇಲಾಖೆ ವ್ಯಾಪ್ತಿಯ ಅನು ಸೂಚಿತ ಸಂಸ್ಥೆಗಳ ಜಮೀನುಗಳ ಸರ್ವೆ ಕಾರ್ಯವನ್ನು ಪ್ರಾರಂಭಿಸಲಾಗುತ್ತದೆ.
* 2019-20ನೇ ಸಾಲಿನಲ್ಲಿ ರಾಜ್ಯದ ವಿವಿಧ ಮಠಗಳು ಹಾಗೂ ಇತರ ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ. ಗಳ ಅನುದಾನವನ್ನು ನೀಡಲಾಗಿದೆ.
20 ಕೋಟಿ ಅನುದಾನ
* ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಡ್ರೋನ್ಗಳ ಮೂಲಕ ರೀ-ಸರ್ವೆ ಕಾರ್ಯವನ್ನು ಮಾಡಲಾಗುತ್ತದೆ.
* ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ.